ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ (ಮಹಾಬಲೇಶ್ವರ): ಮಹಾರಾಷ್ಟ್ರ, ಆಂದ್ರಪ್ರದೇಶ, ತೆಲಂಗಾಣ ರಾಜ್ಯಗಳೂ ಸೇರಿದಂತೆ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟ, ಬೆಳಗಾವಿ, ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಯ ರೈತ ಕುಟುಂಬಗಳಿಗೆ ಕೃಷ್ಣಾ ನದಿ ಜೀವನಾಡಿಯಾಗಿದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಮುಂಗಾರು ಹಂಗಾಮಿನ ಮೊದಲ ಹಬ್ಬವಾದ ಕಡ್ಲಿಗರ ಹುಣ್ಣಿಮೆಯಂದು ಮಹಾರಾಷ್ಟ್ರ ರಾಜ್ಯದ ಮಹಾಬಲೇಶ್ವರದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಬಸವನ ಬಾಗೇವಾಡಿ ಮತಕ್ಷೇತ್ರದ ಹಾಗೂ ಅವಳಿ ಜಿಲ್ಲೆಗಳ ರೈತರ ನೂರಾರು ರೈತರೊಂದಿಗೆ ಕೃಷ್ಣೆಯ ಉಗಮ ಸ್ಥಾನವಾದ ಪಂಚಗಂಗಾ ನದಿಯಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಮಾತನಾಡಿದರು.
ರೈತ ಕುಟುಂಬಗಳಿಗೆ ಕೃಷ್ಣಾ ನದಿ ಜೀವನಾಡಿಯಾಗಿದೆ. ಹೀಗಾಗಿ ಕಳೆದ ೧೯ ವರ್ಷಗಳಿಂದ ಕೃಷ್ಣೆಯ ಉಗಮ ಸ್ಥಾನವಾದ ಈ ಮಹಾಬಲೇಶ್ವರದಲ್ಲಿ ಬಸವನ ಬಾಗೇವಾಡಿ ಕ್ಷೇತ್ರವೂ ಸೇರಿದಂತೆ ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಯ ರೈತಾಪಿ ಜನತೆಯೊಂದಿಗೆ ಗಂಗಾ ಪೂಜೆಯೊಂದಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಕೃಷ್ಣೆಯ ಜತೆಗೆ ಗಾಯತ್ರಿ, ಸಾವಿತ್ರಿ, ಕೋಯ್ನಾ, ವೆನ್ನಾ ನದಿಗಳಿಗೂ ಈ ಮಹಾಬಲೇಶ್ವರ ಉಗಮ ಸ್ಥಾನವಾಗಿದ್ದು ದಕ್ಷಿಣ ಭಾರತದ ಹಲವು ರಾಜ್ಯಗಳ ಕೃಷಿಕರಿಗೆ ಈ ನದಿಗಳು ಉಸಿರಾಗಿವೆ ಎಂದರು.
ಕೊಲ್ಹಾರ ಹಿರೇಮಠದ ಕೈಲಾಸನಾಥ ಮಹಾಸ್ವಾಮಿಗಳು ಮಾತನಾಡಿ, ಉತ್ತರ ಕರ್ನಾಟಕದ ರೈತರ ಮನ ಸಂತಹಿಸುವ ಈ ಕೃಷ್ಣಾ ಮಾತೆಗೆ ಈ ರೈತರು ಬಂದು ಗಂಗಾ ಪೂಜೆ ಮಾಡಿದ್ದು ತಾಯಿ ಕೃಷ್ಣಾ ಮಾತೆ ನಿಮ್ಮೆಲ್ಲರನ್ನು ರಕ್ಷಣೆ ಮಾಡುತ್ತಾಳೆ. ಈ ಕಾರ್ಯ ಸರಕಾರದಿಂದ ನಡೆಯಬೇಕು ಆದರೂ ಈ ಕಾರ್ಯ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ನಡೆಯುತ್ತಿರುವದು ಸಂತಸದ ವಿಷಯ ಎಂದು ಹೇಳಿದರು.
ವಿಜಯಪುರ ಭಾಜಪಾ ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಅವಳಿ ಜಿಲ್ಲೆಯ ರೈತರ ಬೇಡಿಕೆ ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿ ಗಂಗಾ ಪೂಜೆಗೆ ಕೊಡುವ ಮಹತ್ವ ನಮ್ಮ ಕೃಷ್ಣಾ ನದಿಗೆ ಸರ್ಕಾರ ಮಹತ್ವ ಕೊಡಬೇಕು ಎಂದು ಹೇಳಿದರು.
ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಪವಾರ, ಜಿಪಂ ಮಾಜಿ ಸದಸ್ಯ ಸಂತೋಷ ನಾಯಕ, ಬಸವನ ಬಾಗೇವಾಡಿ ತಾಪಂ ಮಾಜಿ ಅಧ್ಯಕ್ಷ ಕಲ್ಲು ಸೊನ್ನದ, ಬಸವನ ಬಾಗೇವಾಡಿ ಮಂಡಲ ಅಧ್ಯಕ್ಷ ಸಿದ್ರಾಮ ಕಾಖಂಡಕಿ, ಪ್ರಮುಖರಾದ ಆನಂದ ಬಿಷ್ಟಗೊಂಡ, ಟಿ.ಸಿ.ಯಳಮೇಲಿ, ಸಾಬು ಮಾಶಾಳ, ಚಿನ್ನಪ್ಪ ಗಿಡ್ಡಪ್ಪಗೋಳ, ಈರಣ್ಣ ರಾಹೂರ, ವಿಜಯ ಪೂಜಾರ ಸೇರಿದಂತೆ ನೂರಾರು ರೈತರು, ಮಹಿಳೆ ಯರು ಬಾಗಿನ ಅರ್ಪಣೆಯ ಕಾರ್ಯದಲ್ಲಿ ಭಾಗಿಯಾಗಿದ್ದರು.

