ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಎಮ್ ಇ ಎಸ್ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಗುರು ಪೂರ್ಣಿಮೆ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಅವರು, ಗುರು ಪೂರ್ಣಿಮೆ ಎರಡು ಪದಗಳ ಸಂಯೋಜನೆಯಾಗಿದೆ. ಗುರುವು ಸಂಸ್ಕೃತದ ಮೂಲ ಪದಗಳಾದ ಗು(ಕತ್ತಲೆ ಅಥವಾ ಅಜ್ಞಾನ),ರು(ಬಿಡಿಸುವವನು) ಗುರು ಎಂದರೆ ಕತ್ತಲೆಯಿಂದ ಬೇಳಕಿನಡೆಗೆ ಅಥವಾ ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯುವವನೆ ಗುರು. ಶಿಷ್ಯರ ಬದುಕಿಗೆ ದಾರಿದೀಪವಾಗಿ ಜ್ಞಾನ, ವಿವೇಕ ಮತ್ತು ಸಂಸ್ಕಾರಗಳನ್ನು ಕಲಿಸಿ ಶಿಷ್ಯರನ್ನು ಸನ್ಮಾರ್ಗಕ್ಕೆ ತಂದು ಜೀವನವನ್ನು ಹಸನು ಮಾಡುತ್ತಾರೆ ಇಂತಹ ಗುರುಗಳು ದೇವರಿಗಿಂತ ಶ್ರೇಷ್ಠರು ಎಂದು ಶಿಕ್ಷಕ ರಮೇಶ ಮಲ್ಲಾಡಿ ಹೇಳಿದರು.
ಗುರು ಪೂರ್ಣಿಮೆಯು ಆಧ್ಯಾತ್ಮಿಕ ಗುರುಗಳನ್ನು ಗೌರವಿಸುವ ಪೂಜ್ಯ ಹಬ್ಬವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಮ್ ಇ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಚೋಳಕೆ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅತ್ಯಂತ ಶ್ರೇಷ್ಠ ಸ್ಥಾನ ಇದೆ. ಜಗತ್ತಿನಲ್ಲಿ ಅತ್ಯಂತ ದೊಡ್ಡ ಸ್ಥಾನ ನೀಡಿದ ದೇಶ ಭಾರತ ಮಾತ್ರ. ಗುರು ಪೂರ್ಣಿಮೆಯಂದು ಗುರುವಿನ ಪಾದ ಪೂಜೆ ಮಾಡುವ ದಿನ. ದಿನಾಲೂ ಗುರುಗಳನ್ನು ಗೌರವ ಕೊಡುವ ಶಿಷ್ಯ ಜೀವನದಲ್ಲಿ ಅತ್ಯಂತ ಉನ್ನತ ಹುದ್ದೆಗೆ ಹೋಗುತ್ತಾನೆ. ಶ್ರೇಷ್ಠ ಸಂಸ್ಕಾರ, ಸಂಸ್ಕೃತಿ,ಜ್ಞಾನ ಹಾಗೂ ರಾಷ್ಟ್ರ ಭಕ್ತಿ ಹೊಂದಿರುವ ವಿದ್ಯಾರ್ಥಿಗಳನ್ನು ತಯಾರಿಸುವುದು ನಮ್ಮ ಶಿಕ್ಷಣ ಸಂಸ್ಥೆಯ ಪರಮ ಗುರಿ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಮಾತೃ ವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವಿದ್ಯಾರ್ಥಿ ಪ್ರತಿನಿಧಿ ಶಾಹಿದ ಅತ್ತಾರ ಹಾಗೂ ವಿದ್ಯಾರ್ಥಿನಿ ಅನಮ್ ಮಕಾನದಾರ ನಿರೂಪಿಸಿದರು. ಮಲ್ಲಿಕಾರ್ಜುನ ಮಾನೆ ಸ್ವಾಗತಿಸಿದರು, ವಂದನಾರ್ಪಣೆ ಅಕ್ಷರಾ ಸಾಳ್ವಿಕೆ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಸುಧಾ ಚೋಳಖೆ, ಪ್ರಾಚಾರ್ಯ ಆರ್ ಐ ಹಿರೇಮಠ,
ಸಂತೋಷ ಮಾಳಿ, ಗಚ್ಚಿನಕಟ್ಟಿ ಸರ,ಶಿಕ್ಷಕರಾದ ಬಿ ಕೆ ಸಲಗರ,ಎಲ್ಲ ಶಿಕ್ಷಕರು, ವಿದ್ಯಾರ್ಥೀಗಳು ಇದ್ದರು.

