ಅಥಣಿ ತಾಲೂಕಿನಲ್ಲಿ ರಸಗೊಬ್ಬರ ಮಾರಾಟಗಾರರಿಂದ ಯೂರಿಯಾ ಕೃತಕ ಅಭಾವ
ಉದಯರಶ್ಮಿ ದಿನಪತ್ರಿಕೆ
ವರದಿ: ಮಹಾಂತೇಶ ಅಣ್ಣಪ್ಪ ನ್ಯಾಮಗೌಡ
ಅಥಣಿ: ತಾಲೂಕಿನಾದ್ಯಂತ ರಾಸಾಯನಿಕ ರಸಗೊಬ್ಬರಗಳ ಮಾರಾಟಗಾರರು ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಯೂರಿಯಾ ಗೊಬ್ಬರ ಜೊತೆ ಹೆಚ್ಚುವರಿ ಔಷದಿ ಅಥವಾ ಗೊಬ್ಬರ ಅಥವಾ ಯೂರಿಯಾ ಗೊಬ್ಬರವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ರೈತರಿಗೆ ಅನಗತ್ಯ ವೆಚ್ಚದಾಯಕ ಹೊರೆಯನ್ನು ಹೊರೆಸಿ ವಂಚಿಸುತ್ತಿರುವುದು ಸಾಮಾನ್ಯವಾಗಿದೆ
ಈ ವರ್ಷ ಸಕಾಲಕ್ಕೆ ಮಳೆರಾಯ ಸುರಿಯುತ್ತಿರುವದರಿಂದ ಮುಂಗಾರು ಅವದಿಯಲ್ಲಿ ರೈತರು ಬಿತ್ತನೆ ಮಾಡಿದ ಎಲ್ಲಾ ಬೆಳೆಗಳು ಪಲವತ್ತತೆಯಿಂದ ನಳನಳಿಸುತ್ತಿರುವದರಿಂದ ಸಂತಸಗೊಂಡಿರುವ ರೈತರು ಹೆಚ್ಚಿನ ಇಳುವರಿ ಪಡೆಯಲು ಬೆಳೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಯುರಿಯಾ ಗೊಬ್ಬರವನ್ನು ಬಳಸುವದರಿಂದ ರೈತರಿಂದ ಯೂರಿಯಾ ಗೊಬ್ಬರಕ್ಕೆ ಹೆಚ್ಚುತ್ತಿರುವ ಬೆಡಿಕೆಯನ್ನೆ ಬಂಡವಾಳ ಮಾಡಿಕೊಂಡು ಗೊಬ್ಬರದ ಕೃತಕ ಅಬಾವ ಸೃಷ್ಟಿಸಿ ಯೂರಿಯಾ ಗೊಬ್ಬರ ಬೇಕಾದರೆ ಅದರ ಜೊತೆ ಅನವಶ್ಯಕವಾಗಿ ಹೆಚ್ಚುವರಿ ಗೊಬ್ಬರ ಔಷದ ಮತ್ತು ಗೊಬ್ಬರದ ಮೆಲೆ ಸರಕಾರದ ಸಹಾಯಧನ ಕಳೆದು ಒಂದು ಚಿಲ ಗೊಬ್ಬರಕ್ಕೆ ೨೬೫.೫೦ ರೂಪಾಯಿ ದರ ಇದ್ದರೂ, ಒಂದು ಚೀಲಿಗೆ ೪೦೦ ರೂಪಾಯಿಗೆ ಮಾರಾಟ ಮಾಡಿ ರೈತರಿಂದ ಮಾರಾಟಗಾರರು ಹಗಲು ದರೊಡೆ ವ್ಯವಹಾರಕ್ಕೆ ಇಳದಿರುವುದು ರೈತಾಪಿ ವರ್ಗವನ್ನು ಚಿಂತಿಸುವಂತೆ ಮಾಡಿದೆ
ರೈತರ ಸುಲಿಗೆ ವ್ಯವಹಾರಕ್ಕೆ ಅಧಿಕಾರಿಗಳ ಕಡಿವಾಣವಿಲ್ಲ
ಜಿಟಿ ಜಿಟಿ ಮಳೆಯಿಂದ ಈಗ ಬಿತ್ತನೆ ಮಾಡಿರುವ ಬೆಳೆಗಳು ಸಾರಜನಿಕ ಕೊರತೆಯಿಂದ ಬೇಳವಣಿಗೆಯಲ್ಲಿ ಕುಂಠಿತವಾಗುತ್ತಿರುವದರಿಂದ ರೈತರರು ಬೆಳೆಗಳಿಗೆ ಯೂರಿಯಾ ಗೊಬ್ಬರವನ್ನು ನೀಡದಿದ್ದರೆ ಬೆಳೆಗಳು ಹಾಳಾಗಿ ಹೊಗುವ ಅಪಾಯದಲ್ಲಿರುವದರಿಂದ ರೈತರಿಗೆ ಯೂರಿಯಾದ ಅವಶ್ಯಕತೆಯಿದೆ. ಆದರೆ ತೆಲಸಂಗ ಹೊಬಳಿಯಲ್ಲಿನ ಎಲ್ಲಾ ರಾಸಾಯನಿಕ ಗೊಬ್ಬರಗಳ ಅಂಗಡಿಯಲ್ಲಿ ಯೂರಿಯಾ ಗೊಬ್ಬರದ ದಾಸ್ತಾನುವಿದ್ದರೂ ಮಾರಾಟಗಾರರು ತಮ್ಮ ಸ್ವಾರ್ಥ ವ್ಯವಹಾರದ ಅಧಿಕ ಲಾಭದ ಆಸೆಯಿಂದ ಯೂರಿಯಾ ಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮತ್ತು ಅದರ ಜೊತೆಗೆ ಹೆಚ್ಚುವರಿ ಅನಾವಶ್ಯಕ ಗೊಬ್ಬರವನ್ನು ಮಾರಾಟ ಮಾಡಿ ರೈತ ಸಮುದಾಯಕ್ಕೆ ಹೆಚ್ಚುವರಿ ಅನವ್ಯಶಕ ಖರ್ಚನ್ನು ಹೇರಿ ರೈತರರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿರುವುದು ಕಾನೂನುಬಾಹಿರವಾದ ಚತುವಟಿಕೆಯಾಗಿದೆ. ಯಾವುದೇ ಅಂಕೆ ಅಳುಕಿಲ್ಲದೆ ಸರಾಗವಾಗಿ ನಡೆಯುತ್ತಿರುವ ಈ ವ್ಯವಹಾರಕ್ಕೆ ಕಡಿವಾಣ ಹಾಕಿ ಸಮಸ್ಯೆಗಳನ್ನು ಸರಿಪಡಿಸಿ ರೈತರಿಗೆ ನೆರವಾಗಬೇಕಾಗಿರುವ ರೈತ ಸಂಪರ್ಕ ಕೆಂದ್ರದ ಅಧಿಕಾರಿ ವರ್ಗ ಇದಾವುದೂ ನನಗೆ ಸಂಭಂದಿಸಿದ ಸಮಸ್ಯೆಗಳಲ್ಲ ಎಂಬಂತೆ ವರ್ತನೆ ತೋರುತ್ತಿದ್ದಾರೆ. ಅವರ ಸಹಕಾರದಿಂದಲೇ ಗೊಬ್ಬರ ಮಾರಾಟಗಾರು ಯೂರಿಯಾ ಗೊಬ್ಬರದ ಕೃತಕ ಅಭಾವನ್ನು ಸಷ್ಟಿಸಿ ರೈತರಿಂದ ವಸೂಲಿ ಮಾಡುವ ವ್ಯವಹಾರ ಮಾಡುತ್ತಿದ್ದಾರೆ ಎಂಬುದು ರೈತರ ಗಂಭಿರ ಆರೋಪ ಆರೋಪವಾಗಿದೆ.
ಅಧಿಕಾರಿ ಉಪ್ಪಾರ ಮೊಬೈಲ್ ಸ್ವಿಚ್ಚ್ ಆಪ್
ತೆಲಸಂಗ ಹೊಬಳಿ ವಲಯದಲ್ಲಿರುವ ಎಲ್ಲ ಖಾಸಗಿ ರಾಸಾಯನಿಕ ಗೊಬ್ಬರಗಳ ಮಾರಾಟಗಾರರು ಯೂರಿಯಾ ಗೊಬ್ಬರವನ್ನು ಖರಿದಿಸಲು ಬರುತ್ತಿರುವ ರೈತರಿಗೆ ಯೂರಿಯಾ ಗೊಬ್ಬರ ಬೇಕಾದರೆ ಹೆಚ್ಚುವರಿ ಗೊಬ್ಬರದ ಮತ್ತು ಅಧಿಕ ಬೇಲೆಯ ವ್ಯವಹಾರದೊಂದಿಗೆ ಹೊರೆಯಾಗಿ ರೈತರನ್ನು ಇನ್ನಿಲ್ಲದಂತೆ ಕಾಡುತ್ತಿರುವುದು ಸಾಮಾನ್ಯವಾಗಿರುವದರಿಂದ ಈ ಸಮಸ್ಯೆಯನ್ನು ರೈತರು ತೆಲಸಂಗ ರೈತ ಸಂಪರ್ಕ ಕೆಂದ್ರದ ಅಧಿಕಾರಿಯಾದ ಉಪ್ಪಾರವರನ್ನು ಬೇಟಿ ಮಾಡಲು ಕಛೇರಿಯತ್ತ ಹೊದರೆ ಅವರು ಸೈಟ್ ಮೆಲೆ ಹೊರಗೆ ಹೊಗಿದ್ದಾರೆ ಎಂದು ಅವರ ಸಿಬಂದಿ ಉತ್ತರಿಸುತ್ತಾರೆ.
ಅವರ ಕರೆ ಮೂಲಕ ಸಂಪರ್ಕಿಕಿಸಿದರೆ ಅವರ ಮೊಬೈಲ್ ಸ್ವಿಚ್ಚ ಆಪ್ ಆಗಿರುತ್ತದೆ ಎನ್ನುವುದು ರೈತರ ಆಕ್ರೋಶವಾಗಿದೆ
“ಜಿಟಿ ಮಳೆ ಸುರಿಯುತ್ತಿರುವದರಿಂದ ಬಿತ್ತನೆ ಮಾಡಿದ ಕೇವಲ ಒಂದು ತಿಂಗಳಾಗಿರುವುದರಿಂದ ಸಸಿಗಳು ಸಾರಜನಕ ಕಡಿಮೆಯಿಂದ ಬೆಳವಣಿಗೆ ಕುಂಠಿತವಾಗುತ್ತಿವೆ. ಅದಕ್ಕಾಗಿ ಯೂರಿಯಾ ಗೊಬ್ಬರದ ಅತ್ಯವಶ್ಯಕವಾಗಿದೆ. ಆದರೆ ಮಾರಾಟಗಾರರು ಯೂರಿಯಾ ಗೊಬ್ಬರವಿಲ್ಲ ಬೇಕಾದರೆ ಲಿಂಕ ಗೊಬ್ಬರ ತೆಗೆದುಕೊಳ್ಳಬೇಕು, ಇಲ್ಲವಾದರೆ ಒಂದು ಚೀಲಕ್ಕೆ ದರ ರೂ೨೬೫ ಇದ್ದರೂ ರೂ.೪೦೦ ರೂಪಾಯಿ ತೆಗೆದುಕೊಳ್ಳುತ್ತಿರುವುದು ರೈತರಿಗೆ ದುಬಾರಿಯಾಗುತ್ತಿದೆ. ಕಾರಣ ಕೂಡಲೆ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಬೇಕು.”
– ಬಸವರಾಜ ಸ ಬಿರಾದಾರ
ಹಾಲಳ್ಳಿ ಗ್ರಾಮದ ರೈತರು

