ಉದಯರಶ್ಮಿ ದಿನಪತ್ರಿಕೆ
ಚಡಚಣ: ಸ್ಥಳೀಯ ಶ್ರೀ ಸಂಗಮೇಶ್ವರ ಮಾಧ್ಯಮಿಕ ಶಾಲೆಯಲ್ಲಿ, ಜಿಲ್ಲಾ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೋಸಾಯಿಟಿ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಬಾಲ ಮತ್ತು ಕಿಶೋರ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು,
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಕಾರ್ಮಿಕ ನಿರೀಕ್ಷಕ ಡಿ.ಎಮ್.ದೇವರಮನಿ, ಯಾರು ಸಹ ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಬೇರೆ ಕೆಲಸಕ್ಕೆ ಹಚ್ಚಬಾರದು,೧ರಿಂದ ೧೪ ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಲೆಬೇಕು, ಶಾಲೆ ಬಿಡಿಸಿ ಬೇರೆ ಯಾವುದೇ ವೃತ್ತಿ ಕೆಲಸಕ್ಕೆ ಹಚ್ಚಬಾರದು ಎಂದರು.
ಕಿಶೋರ ಮಕ್ಕಳನ್ನು ಸಹ ಅಂದರೆ ೧೪ರಿಂದ೧೮ವರ್ಷದ ಮಕ್ಕಳನ್ನು ಅಪಾಯಕಾರಿ ಕೆಲಸಗಳಲ್ಲಿ ಉಪಯೋಗಿಸಬಾರದು ಒಂದುವೇಳೆ ಉಪಯೋಗಿಸಿಕೊಂಡರೆ ಅಂತಹ ಜನರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಅಲ್ಲದೆ ದಂಡ ಕೂಡ ವಸೂಲಿ ಮಾಡಲಾಗುತ್ತದೆ ಆದಕಾರಣ ಯಾರು ಸಹ ಇಂತಹ ಕೆಲಸಗಳಿಗೆ ಅವಕಾಶ ಮಾಡಿ ಕೊಡಬಾರದು ಎಂದರು.
ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ೧೯೮೬ ಹಾಗೂ ತಿದ್ದುಪಡಿ ೨೦೧೬ ಕುರಿತು ಮಾಹಿತಿ ಹೇಳಿದರು. ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ನಿಷೇಧ ಕಾಯ್ದೆ ಕುರಿತು ಶಾಲೆಯಲ್ಲಿ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ,ದ್ವಿತೀಯ,ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕಿ ಶ್ರೀಮತಿ ನೀಲಮ್ಮ ಖೇಡಗಿ ಮಾತನಾಡಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿಷೇಧ ಮಾಡಲು ಸರಕಾರದ ಒಟ್ಟು ೧೧ಇಲಾಖೆಗಳ ಅಧಿಕಾರಿಗಳು ಒಟ್ಟುಗೂಡಿ ಕೆಲಸ ಮಾಡುತ್ತವೆ ಎಂದು ಹೇಳಿದಲ್ಲದೆ, ಮಕ್ಕಳ ಸಹಾಯವಾಣಿ ೧೦೯೮ ಕುರಿತು ಮಕ್ಕಳಿಗೆ ತಿಳಿಹೇಳಿದರು.
ಮುಖ್ಯ ಗುರುಗಳಾದ ಎಚ್ ಆರ್ ಬಗಲಿಯವರು ಅಧ್ಯಕ್ಷತೆ ವಹಿಸಿ ಸಮಾರೋಪ ಭಾಷಣ ಮಾಡಿದರು. ಶಿಕ್ಷಕ ಎಸ್ ಜಿ ಉಮರಾಣಿ ನಿರೂಪಣೆ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕಿ ಶ್ರೀಮತಿ ಪಿ. ಎಸ್ ತೋಟಗೇರಿ ವಂದಿಸಿದರು.
ಅಧಿಕಾರಿಗಳೆ ಪರಿಹಾರ ಹುಡುಕಿ
ಬಾಲ ಮತ್ತು ಕಿಶೋರ ಮಕ್ಕಳು ಶಾಲೆಗೆ ತಪ್ಪದೆ ಬರಬೇಕೆಂದು ೧೧ ಇಲಾಖೆಗಳ ಅಧಿಕಾರಿಗಳು ಒಟ್ಟುಗೂಡಿ ಕೆಲಸ ಮಾಡುತ್ತಿದ್ದಾರೆ ಏನೋ ಸರಿ ಆದರೆ ಕೆಲಸ ಕೊಟ್ಟವರಿಗೆ ದಂಡಕೂಡಾ ಕಟ್ಟುತ್ತಾರೆ ಅದು ನಿಜಾನೆ ಆದರೆ ಕೆಲಸಕ್ಕೆ ತಂದು ಹಚ್ಚಿದ್ದು ಅವರ ಪಾಲಕರೆ ಹೊರತಾಗಿ ಕೆಲಸ ಕೊಟ್ಟವರಲ್ಲ. ಹೌದು, ಅವರದು ಸ್ವಾರ್ಥ ಭಾವನೆ ಇರಬಹುದು, ಬಾಲ ಮತ್ತು ಕಿಶೋರ ಮಕ್ಕಳ ಪಾಲಕರಿಗೆ ಕಡಿಮೆ ಹಣ ಕೊಟ್ಟು ದುಡಿಸಿಕೊಳ್ಳುತ್ತಿರಬಹುದು, ೧೧ ಇಲಾಖೆಯ ಅಧಿಕಾರಿಗಳು ಇದಕ್ಕೆ ಪರಿಹಾರ ಹುಡುಕಿ ಸರಕಾರದ ಗಮನ ಸೆಳೆಯಬಹುದಲ್ಲವೆ? ಸರಕಾರ ಎಷ್ಟೊ ಜನಪರ ಯೋಜನೆಗಳಿಗೆ ಸಹಾಯ ಮಾಡುತ್ತಿದೆ ಅಲ್ಲವೆ ಹಾಗಾಗಿ ಬಾಲ ಮತ್ತು ಕಿಶೋರ ಮಕ್ಕಳು ವೃತ್ತಿ ಕೆಲಸಕ್ಕೆ ಹೋಗುತ್ತಿದ್ದರೆ ಅಂತಹ ಮಕ್ಕಳಿಗೆ ಮತ್ತು ಪಾಲಕರಿಗೆ ಸರಕಾರದ ಸಹಾಯಧನದ ಆಮೀಷ ಒಡ್ಡಿ ಸ್ವಯಂಪ್ರೇರಿತವಾಗಿ ಶಾಲೆಗೆ ಬರುವಹಾಗೆ ಮಾಡಬಹುದಲ್ಲವೆ? ಅಧಿಕಾರಿಗಳು ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕೆಂದು ವಿದ್ಯಾರ್ಥಿಪಾಲಕರು ಒತ್ತಾಯಿಸಿದ್ದಾರೆ.

