ಅಮ್ಮ ಫೌಂಡೇಶನ್ ದಿಂದ ರಾಜ್ಯಮಟ್ಟದ ಬಸವ ಸಂಸ್ಕೃತಿ ಉತ್ಸವ-೨೦೨೫ | ಸಾಧಕರಿಗೆ ಪ್ರಶಸ್ತಿ ಪ್ರದಾನ | ಪ್ರತಿಭಾ ಪುರಸ್ಕಾರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಶ್ವಗುರು ಬಸವಣ್ಣನವರ ಸಿದ್ಧಾಂತದಂತೆ ನಡೆದುಕೊಂಡು ಸಮ ಸಮಾಜ ನಿರ್ಮಾಣ ಮಾಡಬೇಕು ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಸ್ಮರಿಸುವ ಕಾರ್ಯ ಮಾಡಿದ ಅಮ್ಮ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಅಮ್ಮ ಪೌಂಡೇಶನ ದೇವರಹಿಪ್ಪರಗಿ-ವಿಜಯಪುರ ಹಮ್ಮಿಕೊಂಡ ರಾಜ್ಯಮಟ್ಟದ ಬಸವ ಸಂಸ್ಕೃತಿ ಉತ್ಸವ-೨೦೨೫ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನವರನ್ನು ಒಂದು ಜಾತಿಗೆ ಸಿಮಿತಗೊಳಿಸದೆ, ಅವರನ್ನು ವಿಶಾಲತೆಯಿಂದ ಕಾಣಬೇಕು. ಬಸವಣ್ಣ ಮಹಿಳೆಯರಿಗೆ ಘನತೆಯ ಬದುಕು ದೊರಕಿಸಿಕೊಟ್ಟವರು. ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಅಭಿನಂದನೀಯವಾಗಿದೆ. ಇಂಗ್ಲಿಷ್ ಸಂಸ್ಕೃತಿ ಬಳಕೆಯಿಂದ ನಮ್ಮ ಸಂಸ್ಕೃತಿಗೆ ಧಕ್ಕೆಯಾಗುತ್ತಿದ್ದು, ನಾವೆಲ್ಲರೂ ಬಸವ ಸಂಸ್ಕೃತಿಯ ಕಡೆಗೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಅಮ್ಮ ಫೌಂಡೇಶನ್ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಸಂತಸದ ಸಂಗತಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಬಸವಣ್ಣನವರ ವಿಚಾರಧಾರೆಗಳು ಸಮರ್ಥ ರೀತಿಯಲ್ಲಿ ಸಮಾಜವನ್ನು ತಲುಪದಿರುವುದು ವಿಷಾದನಿಯ ಸಂಗತಿ. ಅಸಮಾನತೆ ಇನ್ನೂ ನಮ್ಮನ್ನು ಕಾಡುತ್ತಿದೆ. ಅಂಬೇಡ್ಕರ, ಬಸವಣ್ಣನವರ ಸಿದ್ಧಾಂತ ಅರ್ಥೈಸಿಕೊಳ್ಳಬೇಕು ಬಸವಣ್ಣನವರ ತತ್ವ ಸಿದ್ಧಾಂತ ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸಾಗಿಸಬೇಕು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ, ಬಸವ ತತ್ವವನ್ನು ಆಡಳಿತದಲ್ಲಿ ತಂದ ಕೆಲವೇ ಕೆಲವು ರಾಜ್ಯದ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಒಬ್ಬರಾಗಿದ್ದಾರೆ. ದೇವರಾಜ ಅರಸರ ನಂತರ ಸಾಮಾಜಿಕ ಚಿಂತನೆ, ಬಡವರು, ಶೋಷೀತರು, ಮಹಿಳೆಯರು, ದಲಿತ, ಅಲ್ಪಸಂಖ್ಯಾತರ ಪರ ಅಭಿವೃದ್ಧಿ ಚಿಂತನೆ ಹೊಂದಿದವರಾಗಿದ್ದಾರೆ ಎಂದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿದರು.
ಆಲಮೇಲ ವಿರಕ್ತ ಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮ ಸಂಘಟಕ ಅಮ್ಮ ಫೌಂಡೇಶನ್ ಸಂಚಾಲಕ ಕಬೂಲ್ ಕೊಕಟನೂರ ಪ್ರಾಸ್ತಾವಿಕವಾಗಿ ಮಾತನಾಡಿ ಫೌಂಡೇಶನ್ ಕುರಿತು ವಿವರಿಸಿದರು.
ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಡಾ.ವಿಜಯಾ ಕೊರಿಶೆಟ್ಟಿ, ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಪ್ಪ ಮಾತನಾಡಿದರು. ಸಮಾರಂಭದಲ್ಲಿ ಡಾ.ಪ್ರಭುಗೌಡ ಲಿಂಗದಳ್ಳಿ, ಉಮೇಶ ಕಾರಜೋಳ, ಎಸ್ ಎಂ ಪಾಟೀಲ (ಗಣಿಹಾರ), ಡಾ. ಆರ್ಎಸ್ ಪಾಟೀಲ, ಎಂ.ಸಿ.ಮುಲ್ಲಾ, ಎ.ಎಂ.ತಾಂಬೋಳಿ, ಸಯ್ಯದಜುಬೇರ ಕೆರೂರ, ಹಣಮಂತ ಕೊಣದಿ, ಅಲ್ಲಾಬಕ್ಷ ವಾಲಿಕಾರ, ಎ.ಬಿ.ನಾಯಿಕ, ಜಗದೀಶ ಬೋಳಸೂರ, ಡಿವೈಎಸ್ಪಿ ಬಸವರಾಜ ಯಲಿಗಾರ, ಸಿಪಿಐ ರವಿ ಯಡವನ್ನವರ, ಯು.ಐ.ಶೇಖ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಸೇರಿದಂತೆ ೧೫೦೦ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಬಸವಚೇತನ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು.

“ವಿಶ್ವ ಕಂಡ ಅಪರೂಪದ ನಾಯಕ ಬಸವಣ್ಣ, ನಮ್ಮೆಲ್ಲರಿಗೂ ಆರಾಧ್ಯರಾಗಿದ್ದಾರೆ. ಇಂತಹ ಮಹನೀಯರ ನಾಡಿನಲ್ಲಿ ಜನಿಸಿರುವುದೇ ನಮ್ಮೆಲ್ಲರ ಪುಣ್ಯವಾಗಿದೆ. ನಾವೆಲ್ಲ ಯುಗಪುರುಷನನ್ನು ಗೌರವಿಸಿ ಅವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡಾಗ ಜೀವನ ಪಾವನವಾಗುತ್ತದೆ.”
– ಸಂಗಮೇಶ ಬಬಲೇಶ್ವರ
ಅಧ್ಯಕ್ಷರು, ಕರ್ನಾಟಕ ಬಾಲವಿಕಾಸ ಅಕಾಡೆಮಿ

“ಬಸವಾದಿ ಶರಣರ ವಚನಗಳು ಸರ್ವಕಾಲಿಕ ಪ್ರಸ್ತುತವಾಗಿವೆ. ಪ್ರಭುತ್ವದ ವಿರುದ್ದ ಹೋರಾಡಿ, ಅನುಭವ ಮಂಟಪ ನಿರ್ಮಿಸಿ ಪ್ರಜಾಪ್ರಭುತ್ವ ಸ್ಥಾಪಿಸಿದವರು ಬಸವಾದಿ ಶರಣರು. ಬಸವಣ್ಣನವರನ್ನು ಹಾಗೂ ಬಸವಾದಿ ಶರಣರ ವಚನಗಳು ಕರ್ನಾಟಕಕ್ಕೆ ಸಿಮೀತಗೊಳಿಸದೇ, ವಚನಗಳು ಬೇರೆ ಬೇರೆ ಭಾಷಗಳಿಗೆ ಅನುವಾದ ಆಗುವುದರ ಮೂಲಕ ಬಸವ ಚಿಂತನೆ, ಸಿದ್ದಾಂತ ವಿಶ್ವದ ಇತರೆ ಭಾಷೆಗಳಲ್ಲಿ ಪ್ರಚಾರ ಪಡಿಸುವ ಅಗತ್ಯ ಇದೆ.”
– ಲಕ್ಷ್ಮಣ ನಿಂಬರಗಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಯಪುರ