ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಕೆಎಸ್ಆರ್ಟಿಸಿ ಬಸ್ ಚಾಲಕನ
ಮೇಲೆ ಮಾರಾಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ 6 ಜನರು ಪರಾರಿಯಾದ ಘಟನೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಮಂಗಳವಾರ ಮಧ್ಯಾಹ್ನ ಬನಹಟ್ಟಿ ಕಡೆಯಿಂದ ಮುಧೋಳಗೆ ಬಸ್ ಸಂಚರಿಸುತ್ತಿದ್ದಾಗ ಜಗದಾಳ ಕೆಇಬಿ ಸಮೀಪ ಕಾರೊಂದು ಎದುರಿಗೆ ಬಂದಿದ್ದರಿಂದ ಬೈಕ್ ಸವಾರ ವೇಗವಾಗಿ ವಾಹನ ಚಲಾಯಿಸಿದ್ದು, ಚಾಲಕ ಬಸ್ ನಿಯಂತ್ರಿಸಿ ಸಂಭಾವ್ಯ ಅಪಘಾತ ತಪ್ಪಿಸಿದ್ದಾರೆ. ಸರಿಯಾಗಿ ಬೈಕ್ ಓಡಿಸುವಂತೆ ಬೈಕ್ ಸವಾರನಿಗೆ ಬುದ್ಧಿಹೇಳಿದ್ದು, ಇದಕ್ಕೆ ಕೋಪಗೊಂಡು ತೆರಳಿದ ಬೈಕ್ ಚಾಲಕ ಬೊಲೆರೋ ವಾಹನದಲ್ಲಿ 6 ಜನರೊಂದಿಗೆ ಬಂದು ಬಸ್ ಅಡ್ಡಗಟ್ಟಿ ಚಾಲಕ ಸಂಗಪ್ಪನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆರೋಪಿಗಳಾದ ಮುತ್ತಪ್ಪ ಗಾಜ್ಯಾಗೋಳ, ಶಿವಾನಂದ ಗಾಜ್ಯಾಗೋಳ, ವೆಂಕಟೇಶ ಗಾಜ್ಯಾಗೋಳ, ಸಂದೇಶ ಗಾಜ್ಯಾಗೋಳ, ಶ್ರೀಕಾಂತ ಗಿಡನ್ನವರ, ಸಾಗರ ಬಡಿಗೇರ ವಿರುದ್ಧ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪಿಎಸ್ಐ ಶಾಂತಾ ಹಳ್ಳಿ ನೇತೃತ್ವದಲ್ಲಿ ಶೋಧ ನಡೆಸಿದ್ದಾರೆ.

