ಒಳಮೀಸಲಾತಿಯಿಂದ ಸಣ್ಣ ಜಾತಿಗಳಿಗೂ ಅನುಕೂಲ :ಆಲಗೂರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮೇ ೫ರಿಂದ ಸರ್ವೇ ಕಾರ್ಯ ನಡೆಯಲಿದ್ದು, ಸಮುದಾಯದ ಜನತೆ ತಮ್ಮ ಜಾತಿಯನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಬೇಕು. ಈ ಸರ್ವೇ ಕಾರ್ಯದಿಂದ ಯಾವ ಕುಟುಂಬವು ಹೊರಗುಳಿಯಬಾರದು ಎಂದು ಮಾಜಿ ಶಾಸಕ ರಾಜು ಆಲಗೂರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಸಂಬಂಧ ಎಸ್.ಎಂ.ಕೃಷ್ಣ ಕಾಲದಿಂದಲೂ ಪ್ರಯತ್ನ ನಡೆಯುತ್ತಿದೆ. ಈಗ ಅದರ ಸಮಯ ಕೂಡಿಬಂದಿದೆ. ಪರಿಶಿಷ್ಟ ಜಾತಿಯಲ್ಲಿ ೧೦೧ ಜಾತಿಗಳು ಇದ್ದು, ಒಳಮೀಸಲಾತಿಯಿಂದ ಸಣ್ಣ ಜಾತಿಗಳಿಗೂ ಅನುಕೂಲವಾಗಲಿದೆ. ಎಲ್ಲ ಜನಾಂಗದವರು ಜಾತಿಗಣತಿ ಕಾರ್ಯಕ್ಕೆ ಸಹಕರಿಸಬೇಕು ಎಂದರು.
ಒಳ ಮೀಸಲಾತಿ ಜಾರಿ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ಸಹ ಆದೇಶಿಸಿದೆ. ರಾಜ್ಯ ಸರ್ಕಾರ ಸರ್ವೇಗೆ ನ್ಯಾ.ನಾಗಮೋಹನ್ ದಾಸ ಆಯೋಗ ನೇಮಕ ಮಾಡಿದೆ. ಮೇ ೫ರಿಂದ ಮೂರು ಹಂತದಲ್ಲಿ ಸರ್ವೇ ನಡೆಯಲಿದೆ. ಆರಂಭಿಕ ಹಂತದಲ್ಲಿ ಮನೆ ಮನೆಗೆ ಶಿಕ್ಷಕರ ಮೂಲಕ ಸಮೀಕ್ಷೆ ಜರುಗಲಿದೆ. ಹೊರಗುಳಿದವರಿಗಾಗಿ ಎರಡನೇ ಹಂತದಲ್ಲಿ ಪಂಚಾಯಿತಿ ಮೂಲಕ ಜಾಗೃತಿ ಕಾರ್ಯ ನಡೆಯಲಿದೆ. ಅಂತಿಮವಾಗಿ ಆ್ಯಪ್ ಮೂಲಕವೂ ಮಾಹಿತಿ ನೀಡುವ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಈ ಕಾರ್ಯ ಸರಾಗವಾಗಿ ನಡೆಯುತ್ತದೆ. ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ನಗರ ಪ್ರದೇಶದಲ್ಲೇ ಜನರು ಹೊರಗುಳಿಯಬಹುದು. ಹೀಗಾಗಿ ಜಾತಿ ಹೆಸರು ಬರೆಸುವಲ್ಲಿ ಯಾರೂ ಹಿಂದೇಟು ಹಾಕಬಾರದು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸುರೇಶ ಗೋಣಸಗಿ, ಅಡಿವೆಪ್ಪ ಸಾಲಗಲ್, ಪರುಶುರಾಮ ಹೊಸಮನಿ, ವಸಂತ ಹೊನಮೋಡೆ, ಸುಭಾಷ ಕಾಲೇಬಾಗ್, ದೇಸು ಚವ್ಹಾಣ್, ಅಶೋಕ ಭಜಂತ್ರಿ, ಶ್ರೀದೇವಿ ಉತ್ಲಾಸಕರ್, ಮಾರುತಿ ಬಂಡಿ, ನಾಗೇಶ ತಾಳಿಕೋಟೆ, ರೇಣುಕಾ ಹೊನಕೇರಿ, ಯಂಕಣ್ಣ ತುಕಾರಾಮ ಸೇರಿ ಅನೇಕರು ಇದ್ದರು.

