ಸಾಸಕ ಯತ್ನಾಳ ರಿಗೆ ಕೆಪಿಸಿಸಿ ಸದಸ್ಯ ಎಸ್.ಎಂ. ಪಾಟೀಲ ಗಣಿಹಾರ ಟಾಂಗ್
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿರೇಬೇವನೂರ ಸಕ್ಕರೆ ಕಾರ್ಖಾನೆ ವಿಷಯವಾಗಿ ಶಾಸಕ ಯತ್ನಾಳ ದೊಡ್ಡ ಸಮಸ್ಯೆಯಲ್ಲಿದ್ದರು, ಆಗ ಇದೇ ಸಚಿವ ಶಿವಾನಂದ ಪಾಟೀಲರು ಮುತುವರ್ಜಿ ವಹಿಸಿ ಸಕ್ಕರೆ ಕಾರ್ಖಾನೆ ಸಮಸ್ಯೆ ಪರಿಹರಿಸಿದರು, ಆಗ ಯತ್ನಾಳರಿಗೆ ಮರು ಜೀವ ಬಂತು, ಅದೇ ತೆರನಾಗಿ ಪಕ್ಷೇತರರಾಗಿ ವಿಧಾನ ಪರಿಷತ್ ಚುನಾವಣೆ ಸ್ಪರ್ಧೆ ಮಾಡಿದಾಗ ಇದೇ ಶಿವಾನಂದ ಪಾಟೀಲರಿಗೆ ನೀವು ಕಾಲು ಹಿಡಿದಿಲ್ಲವೇ? ಅವರ ಉಪಕಾರವನ್ನು ನೀವು ಮರೆತಿದ್ದೀರಾ ಎಂದು ಕೆಪಿಸಿಸಿ ಸದಸ್ಯ ಎಸ್.ಎಂ. ಪಾಟೀಲ ಗಣಿಹಾರ ನಗರ ಶಾಸಕ ಯತ್ನಾಳರನ್ನು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹೆಸರಿನಲ್ಲಿ ಲಕ್ಷಾಂತರ ರೂ. ಸಾಲ ಪಡೆದಿದ್ದ ಶಾಸಕ ಯತ್ನಾಳರು ನಂತರ ಪಡೆದ ಲಾಭದಲ್ಲಿ ಒಂದೇ ಒಂದು ರೂ. ಲಾಭವನ್ನು ರೈತರಿಗೆ ನೀಡಲಿಲ್ಲ ಎಂದರು.
ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಸಚಿವ ಶಿವಾನಂದ ಪಾಟೀಲರ ಮನೆಗೆ ನೀವು ಹೋಗಿಲ್ಲವೇ? ಎಂದರು.
ಸಚಿವ ಪಾಟೀಲರ ಸವಾಲು ಸ್ವೀಕರಿಸದೇ ಹೋದರೆ ಹಿಂದೂ ಇಲಿ ಎಂಬ ಬಿರುದು ನಿಮಗೆ ಖಾಯಂ. ಹಿಂದೆ ದೇವರ ಹಿಪ್ಪರಗಿ, ವಿಜಯಪುರ ನಗರದಲ್ಲಿ ಸೋತಿದ್ದು ನೆನಪಿಲ್ಲವೇ? ಬಿಜೆಪಿ ಮತದಿಂದ ಆಯ್ಕೆಯಾದ ನೀವು ಪಕ್ಷ ಉಚ್ಚಾಟನೆಯಾದ ನಂತರ ರಾಜಿನಾಮೆ ನೀಡಬೇಕಿತ್ತು, ನಿಮಗೆ ಧಮ್ ಇಲ್ಲ, ನಿಮ್ಮ ತುಟಿಯಲ್ಲಿ ಮಾತ್ರ ಧಮ್ ಇದೆ ಎಂದರು. ಕಾಂಗ್ರೆಸ್ ವಿರುದ್ಧ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಾ.ಎಂ.ಬಿ. ಪಾಟೀಲರನ್ನು ಹೊಗಳುವ ಯತ್ನಾಳರು ಒಂದು ರೀತಿ ಸ್ವಾಭಿಮಾನ ಕಳೆದುಕೊಂಡಿದ್ದಾರೆ ಎಂದರು.
ಇಂಡಿ ಶಾಸಕರ ಹೆಸರು ಹೇಳಲು ಯೋಗ್ಯತೆ ಯತ್ನಾಳರಿಗೆ ಇಲ್ಲ
ಇಂಡಿ ಶಾಸಕ ಯಶವಂತರಾಯಗೌಡರ ಹೆಸರು ಹೇಳಲು ಸಹ ನಿಮಗೆ ಯೋಗ್ಯತೆ ಇಲ್ಲ ಎಂದು ಟೀಕಾಪ್ರಹಾರ ನಡೆಸಿದ ಎಸ್.ಎಂ. ಪಾಟೀಲ ಗಣಿಹಾರ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ನುಡಿದಂತೆ ನಡೆದು ತೋರಿಸಿದ್ದಾರೆ, ಇಂಡಿ ಮತಕ್ಷೇತ್ರವನ್ನು ಒಮ್ಮೆ ಹೋಗಿ ನೋಡಿ.
ಹಿಂದೊಮ್ಮೆ ಪ್ರಸ್ತುತ ರಾಜಕೀಯ ವ್ಯವಸ್ಥೆಯ ಬಗ್ಗೆ ಅಸಮಾಧಾನದಿಂದ ನೊಂದು ರಾಜಕೀಯವೇ ಸಾಕು ಎಂದು ತಮ್ಮ ಸಂದೇಶದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದಾಗ, ವೇದಿಕೆಯಲ್ಲಿದ್ದ ಪ್ರಭಾವಿ ಸಚಿವ ಮಹಾದೇವಪ್ಪ ಅವರು `ನೀವು ಈ ಭಾಗದ ಶಾಸಕರಾಗದೇ ಹೋದರೆ ಇಲ್ಲಿ ಕೆಂಪು ನೀರು ಹರಿಯುತ್ತದೆ, ನಿಮ್ಮಂತಹವರು ರಾಜಕೀಯದಲ್ಲಿ ಇರಬೇಕು’ ಎಂದು ಹೇಳಿದ್ದರು. ಯಶವಂತರಾಯಗೌಡ ಬಗ್ಗೆ ಟೀಕೆ ಮಾಡುವ ಮೊದಲು ಯತ್ನಾಳರು ಅವರ ವ್ಯಕ್ತಿತ್ವವನ್ನು ಅರಿತುಕೊಳ್ಳಬೇಕಿದೆ ಎಂದರು.
ನೀವು ಸ್ಪೀಕರ ಬಳಿ ಬನ್ನಿ, ನಿಮ್ಮ ರಾಜಿನಾಮೆ ಪತ್ರವನ್ನು ಜೊತೆಗೆ ತೆಗೆದುಕೊಂಡು ಬನ್ನಿ, ಇನ್ನೊಮ್ಮೆ ಬೇಕಾದರೂ ಸಚಿವ ಶಿವಾನಂದ ಪಾಟೀಲರು ರಾಜಿನಾಮೆ ಪತ್ರ ಬರೆಯಲು ಸಿದ್ದ ಎಂದು ಇನ್ನೊಂದು ಸವಾಲನ್ನು ಎಸ್.ಎಂ. ಪಾಟೀಲ ಗಣಿಗಾರ ಹಾಕಿದರು.
ಸಚಿವ ಶಿವಾನಂದ ಪಾಟೀಲರು ಯತ್ನಾಳರ ಛಾಲೆಂಜ್ ಸ್ವೀಕರಿಸಿದ ನಂತರ ಒಂದು ರೀತಿ ಹಿಂದೂ ಹುಲಿ ಹಿಂದೂ ಇಲಿಯಾಗಿದೆ ಎಂದರು.
ಯತ್ನಾಳರ ನೇತೃತ್ವದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಆಯೋಜನೆಯಾಗಿತ್ತು, ಗೋವುಗಳಿಗೆ ಸಂಸ್ಕೃತಿ ಬಂತು ಆದರೆ ನಗರ ಶಾಸಕರಿಗೆ ಸಂಸ್ಕೃತಿ ಬರಲಿಲ್ಲ. ಹಿಂದೂ ಹುಲಿ ಈಗ ಇಲಿಯಾಗಿ ಕೇವಲ ಸಬೂಬು ಹೇಳುತ್ತಿದೆ ಎಂದು ಲೇವಡಿ ಮಾಡಿದರು. ಬಸವ ಜಯಂತಿಯಲ್ಲೂ ಸಹ ಹಿಂದೂ ಮುಸ್ಲಿಂ ವಿಷಯ ಮಾತನಾಡುವ ಮೂಲಕ ಅಣ್ಣ ಬಸವಣ್ಣನವರಿಗೂ ಯತ್ನಾಳ ಅವಮಾನ ಮಾಡಿದ್ದಾರೆ, ಅವರಿಗೆ ಅಣ್ಣ ಬಸವಣ್ಣ ಹಾಗೂ ಲಿಂಗಾಯತ ಧರ್ಮದ ಮೇಲೆ ಗೌರವವಿಲ್ಲ ಎಂದರು.
ಸಚಿವ ಶಿವಾನಂದ ಪಾಟೀಲರ ಸವಾಲು ಸ್ವೀಕರಿಸಿದರೆ ನಿಮಗೂ ಗೌರವ, ನಿಮ್ಮ ಹಿಂದೆ ಚಪ್ಪಾಳೆ ತಟ್ಟುವವರೆಗೆ ಗೌರವ ಎಂದರು.
ದಲಿತರ ಶ್ರೇಯೋಭಿವೃದ್ದಿಗೆ ನಿಮ್ಮ ಕೊಡುಗೆ ಏನು? ಮುಸ್ಲಿಂರನ್ನು ದೇಶ ಬಿಟ್ಟು ಕಳುಹಿಸಿ ಎಂದು ಡಾ.ಬಿ.ಆರ್. ಅಂಬೇಡ್ಕರ್ ಎಲ್ಲಿಯೂ ಹೇಳಿಲ್ಲ, ಈ ರೀತಿ ಹೇಳಿಕೆ ನೀಡಿದ ಬಗ್ಗೆ ಅಧಿಕೃತ ದಾಖಲೆ ಕೊಡಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಮುಖಂಡರಾದ ಎಂ.ಸಿ. ಮುಲ್ಲಾ, ಡಾ.ರವಿಕುಮಾರ ಬಿರಾದಾರ, ಫಯಾಜ್ ಕಲಾದಗಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
