ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಏ೨೮ ರಂದು ಕಾಣೆಯಾಗಿದ್ದ ತಾಲೂಕಿನ ಕುಂಟೋಜಿ ಗ್ರಾಮದ ನಿವಾಸಿ, ಹೆಸ್ಕಾಂ ನೌಕರ ಶಿವಪ್ಪ ಆರೇಶಂಕರ(೪೫) ಎರಡು ದಿನಗಳ ಬಳಿಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಶಿವಪ್ಪಳ ಪತ್ನಿ ಗೌರಮ್ಮ ಆರೇಶಂಕರ ೪ ಜನರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಸಂಗಮೇಶ ಅಂಗಡಿ, ಶರಣಪ್ಪ ಬಳೂತಿ, ಶಿವಪ್ಪ ಮುಳವಾಡ ಮತ್ತು ರಾಜು ಕುಂಬಾರ ಎನ್ನುವವರ ಮೇಲೆ ಪ್ರಕರಣ ದಾಖಲಾಗಿದ್ದು ಸರಕಾರಿ ಜಾಗೆಯನ್ನು ಪ್ರಭಲ ವ್ಯಕ್ತಿಗಳು ತಮ್ಮ ವಶಕ್ಕೆ ಪಡೆದುಕೊಳ್ಳುವ ತವಕದಲ್ಲಿದ್ದಾಗ ಮೃತ ಶಿವಪ್ಪ ಆರೇಶಂಕರ ಇತನು ನಮ್ಮೂರ(ಕುಂಟೋಜಿ) ಇತರೆ ಗ್ರಾಮಸ್ಥರೊಂದಿಗೆ ಕೂಡಿ ತನ್ನ ಮುಂದಾಳತ್ವದಲ್ಲಿ ರಾಮ ಮಂದಿರ ಕಟ್ಟೆಯನ್ನು ಕಟ್ಟಿದ್ದರಿಂದ ಅವನ ಮೇಲೆ ಸಿಟ್ಟಾಗಿ ಚಿತ್ರಹಿಂಸೆ ನೀಡಿ ಬಸವ ಇಂಟರ್ನ್ಯಾಶನಲ್ ಶಾಲೆಯ ಬಳಿಯ ಒಂದು ಹೊಲದಲ್ಲಿರುವ ಬೇವಿನ ಗಿಡದಲ್ಲಿ ಹಳದಿ ಬಣ್ಣದ ವಾಯರ್ ಹಗ್ಗದಿಂದ ಉರುಲು ಹಾಕಿ ಕೊಲೆ ಮಾಡಿದ್ದಾರೆ ಎಂದು ಮತ್ತು ಸಾವಿಗೂ ಮೊದಲು ಶಿವಪ್ಪ, ಆರೋಪಿ ಸ್ಥಾನದಲ್ಲಿರುವವರಲ್ಲಿ ಮೂವರ ಹೆಸರು ಹಾಕಿ ತಮ್ಮವರಿಗೆ ವಾಟ್ಸ್ಅಪ್ ಮೆಸೆಜ್ ಮಾಡಿ ನನ್ನ ಸಾವಿಗೆ ೩ ಜನ ಕಾರಣ ಅಂತಾ ತಿಳಿಸಿದ್ದಾಗಿ ದೂರಿನಲ್ಲಿ ವಿವರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿಧಿವಿಜ್ಞಾನ ತಂಡದವರು ಭೇಟಿ ನೀಡಿ ಪರಿಶೀಲಿಸಿದ್ದು, ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.

