ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಪ್ರಪ್ರಥಮ ಬಾರಿಗೆ ಪ್ರಧಾನಿ ಮೋದಿಜೀಯವರು ದೇಶದಲ್ಲಿ ಜನಗಣತಿಯ ಜೊತೆಗೆ ಜಾತಿಗಣತಿಯ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದು ಹಿಂದೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ನಿರ್ಧಾರವಾಗಿದೆ. ಈ ತೀರ್ಮಾನ ಸ್ವಾಗತಾರ್ಹ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎ.ಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹಿಂದು ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾದ ಅಸಮಾನತೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು, ಹಿಂದೂ ಸಮಾಜದ ಪ್ರತಿಯೊಬ್ಬ ವ್ಯಕ್ತಿ ಸರ್ವ ರಂಗಗಳಲ್ಲಿ ಸಮಾನವಾಗಿ ಬೆಳೆಯುವಂತಾಗಬೇಕು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಹಿಂದೂ ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ಬ್ರಿಟೀಷರ ಕಾಲದಿಂದಲೂ ನಮ್ಮನ್ನಾಳಿದ ಕಾಂಗ್ರೆಸ್ ಪಕ್ಷ ರಾಜಕೀಯ ಅಸ್ತçವನ್ನಾಗಿ ಬಳಸಿಕೊಂಡಿದೆ. ಜಾತಿ ಉಪಜಾತಿಗಳ ಸಮೀಕ್ಷೆಯ ನೆಪದಲ್ಲಿ ಹಿಂದೂ ಹಿಂದೂಗಳ ಮಧ್ಯೆ ವ್ಯತ್ಯಾಸವನ್ನು ತಂದಿಟ್ಟು ಸಮಾಜದಲ್ಲಿ ಒಡಕುಂಟು ಮಾಡುವಂತಹ ಕುತಂತ್ರ ರಾಜಕೀಯ ನೀತಿಯನ್ನು ಅನುಸರಿಸಲು ಪ್ರಾರಂಭಿಸಿದೆ. ಇದಕ್ಕೆಲ್ಲ ತಿಲಾಂಜಲಿ ಇಡಲು, ಹಿಂದು ಸಮಾಜವನ್ನು ಒಗ್ಗಟ್ಟಾಗಿಸಿ ಸರ್ವತೋಮುಖ ಅಭಿವೃದ್ಧಿಗೆ ಸಮಸಮಾಜ ನಿರ್ಮಾಣ ಮಾಡುವ ದೃಷ್ಟಿಯಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದರು.
ಜಾತಿ ಆಧಾರಿತ ಗಣತಿಯನ್ನು ವಿರೋಧಿಸುತ್ತ ಬಂದಿದ್ದು ಕಾಂಗ್ರೆಸ್ ನ ಇತಿಹಾಸ. ೨೦೧೦ ರಲ್ಲಿ ಡಾ.ಮನಮೋಹನ ಸಿಂಗ್ ಅವರ ಮೇಲೆ ಒತ್ತಡ ಬಂದಿದ್ದರಿಂದ ೨೦೧೧ ರ ಜನಗಣತಿ ಸಂದರ್ಭದಲ್ಲಿ ಜಾತಿಯನ್ನೂ ಸೇರಿಸಿ ಸರ್ವೇ ಮಾಡುತ್ತೇವೆ ಎಂದು ಘೋಷಣೆ ಮಾಡಲಾಯಿತು. ಸರ್ವೇ ಕೂಡ ಆಯಿತು ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಾತಿ ಆಧಾರಿತ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾದ ದತ್ತಾಂಶಗಳನ್ನು ಬಹಿರಂಗಗೊಳಿಸದೇ ಹಿಂದೂ ಸಮಾಜದ ಹಿಂದುಳಿದ ವರ್ಗಗಳಿಗೆ ಮಾಡಿದ ದೊಡ್ಡ ದ್ರೋಹ. ಈ ದೇಶದ ಹಿಂದೂಗಳು ಯಾವುದೇ ಜಾತಿ ಉಪಜಾತಿಯವರಾಗಿದ್ದರೂ ಎಲ್ಲರೂ ಕೂಡ ಈ ತೀರ್ಮಾನವನ್ನು ಹೃದಯ ಪೂರ್ವಕವಾಗಿ ಸ್ವಾಗತಿಸಿ ನರೇಂದ್ರ ಮೊದೀಜೀ ಅವರನ್ನು ಅಭಿನಂದಿಸಬೇಕು ಎಂದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಪ್ರಮುಖರಾದ ಗಂಗಾಧರರಾವ ನಾಡಗೌಡ, ಪ್ರಭು ಕಡಿ, ಹರೀಶ ನಾಟೆಕಾರ, ಶಂಕರಗೌಡ ಶಿವಣಗಿ, ಪರಶುರಾಮ ಮುರಾಳ, ಸೋಮನಗೌಡ ಪಾಟೀಲ, ರಾಜು ಬಳ್ಳೊಳ್ಳಿ, ಅಶೋಕ ಚಿನಿವಾರ, ಎಂ.ಆರ್.ಪಾಟೀಲ ವಕೀಲರು, ಎಂ.ಆರ್.ನಾಡಗೌಡರ, ರಾಜು ಹೊಳಿ, ಶೇಖರ ಢವಳಗಿ, ಕಾವೇರಿ ಕಂಬಾರ, ಪ್ರೀತಿ ಕಂಬಾರ, ಹಣಮಂತ ನಲವಡೆ, ಕೆಂಚಪ್ಪ ಬಿರಾದಾರ, ಅಶೋಕ ರಾಠೋಡ, ಗೌರಮ್ಮ ಹುನಗುಂದ, ಮಂಜು ಚಲವಾದಿ, ನಾಗೇಶ ಕವಡಿಮಟ್ಟಿ, ಅನಿಲ ರಾಠೋಡ, ನಿಖಿಲ ಮಲಗಲದಿನ್ನಿ ಸೇರಿದಂತೆ ಮತ್ತೀತರರು ಇದ್ದರು.

