ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ಸಾಂಸ್ಕ್ರತಿಕನಾಯಕ ಬಸವೇಶ್ವರರ ಜಯಂತಿಯನ್ನು ಜನರು ಸಡಗರ, ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದಲ್ಲಿ ಭಕ್ತರು ಬೆಳಿಗ್ಗೆ ರುದ್ರಾಭಿಷೇಕ, ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು. ಸಂಪ್ರದಾಯದಂತೆ ಬಸವೇಶ್ವರ ದೇವಸ್ಥಾನದಿಂದ ವಿರಕ್ತಮಠಕ್ಕೆ ತೆರಳಿ ಬಸವೇಶ್ವರರ ಮೂರ್ತಿಯ ಮೆರವಣಿಗೆಯೊಂದಿಗೆ ವಚನ ಪುಸ್ತಕ ಮಸ್ತಕದ ಮೇಲೆ ಹೊತ್ತ ಮಹಿಳೆಯರನ್ನು, ಸಿದ್ದಲಿಂಗ ಸ್ವಾಮೀಜಿಯವರನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳು ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶಿವಭಜನೆಗೆ ಪೂಜೆ ಸಲ್ಲಿಸಿ ಮಂಗಳಾರತಿ ಜರುಗಿದ ನಂತರ ಶಿವಭಜನೆ ಮುಕ್ತಾಯಗೊಳಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ ಶ್ರೀಗಳಿಂದ ಷಟ್ಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಬಸವ ಜಯಂತಿಗೆ ಚಾಲನೆ ನೀಡಿದರು.
ನಂತರ ವಾದ್ಯಮೇಳ ಹಾಗೂ ತಲೆಯ ಮೇಲೆ ವಚನ ಪುಸ್ತಕ ಹೊತ್ತ ಮಹಿಳೆಯರೊಂದಿಗೆ ಬಸವೇಶ್ವರ ಮೂರ್ತಿಯ ಮೆರವಣಿಗೆಯೊಂದಿಗೆ ಭಕ್ತರು ಹಾಗೂ ಶ್ರೀಗಳು ಬಸವಜನ್ಮ ಸ್ಮಾರಕಕ್ಕೆ ಆಗಮಿಸಿದರು.
ನಂತರ ಶ್ರೀಗಳ ಸಾನಿಧ್ಯದಲ್ಲಿ ಮಹಿಳೆಯರು ಜೋಗುಳ ಪದ ಹಾಡಿ ಬೆಳ್ಳಿಯ ಬಾಲ ಬಸವಣ್ಣನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ತೂಗುವ ಮೂಲಕ ನಾಮಕರಣ ಮಾಡಿದರು. ಸಂಪ್ರದಾಯದಂತೆ ಸಂತಾನ ಬಯಸಿ ಜಯಶ್ರೀ ಮ್ಯಾಗೇರಿ, ಅನುರಾಧ ಕುಳಗೇರಿ, ಶಿವಲೀಲಾ ಹೆಗಡೆ, ಸುನೀತಾ ಬಿರಾದಾರ, ಲಕ್ಷ್ಮೀ ಆದಿಗೊಂಡ ಸೇರಿ ಒಟ್ಟು ಏಳು ಜನ ಸುಮಂಗಲೆಯರು ಬಸವೇಶ್ವರ ನಾಮಕರಣ ಮಾಡುವ ಸಂದರ್ಭದಲ್ಲಿ ತೊಟ್ಟಿಲು ಕೆಳಗೆ ಕುಳಿತು ಕೊಂಡಿದ್ದರು. ತೊಟ್ಟಿಲು ಕೆಳಗೆ ಕುಳಿತ ಸುಮಂಗಲೆಯರ ಉಡಿಯಲ್ಲಿ ಶ್ರೀಗಳು ಬೆಳ್ಳಿ ಬಾಲ ಬಸವ ಮೂರ್ತಿಯನ್ನು ಹಾಕಿ ಶುಭಾಶೀರ್ವಾದಗೈದರು. ನೆರೆದ ಭಕ್ತಸ್ತೋಮ ಬಸವ ಜಯಘೋಷ ಹಾಕಿದರು. ಹಿರಿಯರಾದ ಬಸವರಾಜ ಹಾರಿವಾಳ ತೊಟ್ಟಿತೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು.
ಭಕ್ತರು ಕುಟುಂಬ ಸದಸ್ಯರೊಂದಿಗೆ ಬಸವಜನ್ಮಸ್ಮಾರಕಕ್ಕೆ ತೆರಳಿ ತೊಟ್ಟಿಲು ತೂಗಿ ನಮಸ್ಕರಿಸಿದರು. ಭಕ್ತರಿಗೆ ಗುಗ್ಗರಿ, ಕಲ್ಲುಸಕ್ಕರೆ ಪ್ರಸಾದ ವಿತರಣೆ ಮಾಡಲಾಯಿತು.
ಸಚಿವ ಶಿವಾನಂದ ಪಾಟೀಲರು ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಸವೇಶ್ವರ ವೃತ್ತದಲ್ಲಿ ಅಶ್ವಾರೂಢ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಬಸವಜನ್ಮ ಸ್ಮಾರಕದಲ್ಲಿ ನಡೆದ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಜೆ.ಡಿ.ಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ, ಮುಖಂಡರಾದ ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಶೇಖರ ಗೊಖಸಂಗಿ, ಜಗದೀಶ ಕೊಟ್ರಶೆಟ್ಡಿ, ಸಂಗಮೇಶ ಓಲೇಕಾರ, ಶಂಕರಗೌಡ ಬಿರಾದಾರ, ರವಿಗೌಡ ಚಿಕ್ಕೊಂಡ, ಸುರೇಶಗೌಡ ಪಾಟೀಲ, ರವಿ ರಾಠೋಡ, ಕಾಶೀನಾಥ ರಾಠೋಡ, ಮುದುಕು ಬಸರಕೋಡ, ಶಿವಲಿಂಗಪ್ಪ ಕಿಣಗಿ, ವಂದನಾ ಕಿಣಗಿ, ಶ್ರೇಯಾ ಕಿಣಗಿ, ಬಸವರಾಜ ಕಿಣಗಿ, ಶ್ವೇತಾ ಕಿಣಗಿ, ಗೀತಾ ಕಿಣಗಿ, ಶಿವಾನಂದ ಕಿಣಗಿ, ರವೀಂದ್ರ ಕಿಣಗಿ, ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿ ತಹಸೀಲ್ದಾರ ಜೆ.ಎಸ್.ಚಿನಿವಾಲರ, ಬಿಇಓ ವಸಂತ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಸಿಡಿಪಿಓ ಶಿಲ್ಪಾ ಹಿರೇಮಠ ಸೇರಿದಂತೆ ಇತರರು ಇದ್ದರು.

