ಕಾಂಗ್ರೆಸ್ ಸರ್ಕಾರದಿಂದ ಮಾದಿಗ ಸಮಾಜಕ್ಕೆ ಮೋಸ :ಬಾಸ್ಕರ್ಪ್ರಸಾದ್
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಉಪ ಚುನಾವಣೆ ಸಂದರ್ಭದಲ್ಲಿ ಒಳ ಮೀಸಲಾತಿ ನೀಡದೇ ಯಾವುದೇ ಹುದ್ದೆಗಳನ್ನು ತುಂಬಿಕೊಳ್ಳುವುದಿಲ್ಲ ಎಂದು ಮಾತು ಕೊಟ್ಟಿದ್ದ ಸಿದ್ದರಾಮಯ್ಯ, ಸರಕಾರ ಬಂದೊಡನೆ ಕೊಟ್ಟ ಮಾತನ್ನು ತಪ್ಪಿ ಮೀಸಲಾತಿಯಡಿ ಹಲವಾರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡು ಮಾದಿಗ ಸಮಾಜಕ್ಕೆ ಮೋಸ ಮಾಡಿದೆ ಎಂದು ಒಳ ಮೀಸಲಾತಿ ಕ್ರಾಂತಿಕಾರಿ ರಥ ಯಾತ್ರೆ ರೂವಾರಿ ಹಾಗೂ ಹೋರಾಟಗಾರ ಬಿ.ಆರ್.ಬಾಸ್ಕರ್ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಳ ಮೀಸಲಾತಿ ಕ್ರಾಂತಿಕಾರಿ ರಥ ಯಾತ್ರೆ ರೂವಾರಿ ಹಾಗೂ ಹೋರಾಟಗಾರ ಮಾತನಾಡಿದ ಅವರು, ೪೦ವರ್ಷಗಳ ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವ ಭರವಸೆ ನೀಡಿ ಜನಗಣತಿಗೆ ಅದೇಶಿಸಿದೆ. ಆದರೆ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳು, ಬಡ್ತಿ ಮೀಸಲಾತಿ ಮತ್ತು ಬ್ಯಾಕ್ಲಾಗ್ ಹುದ್ದೆಗಳನ್ನು ತುಂಬಲು ಮುಂದಾಗಿದ್ದು ಇದು ಮಾದಿಗ ಸಮುದಾಯಕ್ಕೆ ಮೂಗಿಗೆ ತುಪ್ಪ ಸವರಿ ವಂಚಿಸುವ ತಂತ್ರಗಾರಿಕೆಯಾಗಿದೆ.
ಏ.೦೫ರಂದು ಬಾಬು ಜಗಜೀವನರಾಮ ಅವರ ಜಯಂತಿ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಇಲ್ಲಿಯವರೆಗೂ ಯಾವುದೇ ಬಡ್ತಿ ಮಾಡಿಲ್ಲ. ಒಂದು ವೇಳೆ ಮಾಡಿದ್ದರೂ ಅದನ್ನು ಹಿಂಪಡೆಯುತ್ತೇನೆ ಎಂದು ಹೇಳಿದ್ದಾರೆ. ಆದರೂ ೨೯ದಿನಗಳಲ್ಲಿ ನೂರಾರು ಹುದ್ದೆಗಳಿಗೆ ಬಡ್ತಿ ನೀಡಿದ್ದಾರೆ. ಒಳ ಮೀಸಲಾತಿ ಎಂಬುದು ನಮಗೆ ಭಿಕ್ಷೆಯಲ್ಲ ಅದು ನಮ್ಮ ಹಕ್ಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದರೂ ಮೀಸಲಾತಿ ಆದೇಶ ನೀಡುವುದಕ್ಕೆ ಇರುವ ಕಾರಣವಾದರೂ ಏನು? ಒಂದು ವೇಳೆ ಮೀಸಲಾತಿ ಜಾರಿಯಾಗುವವರೆಗೂ ಬಡ್ತಿ ನಿಲ್ಲಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರನ್ನು ಮಾದಿಗ ಕೇರಿಗೆ ಹೆಜ್ಜೆಯಿಡಲು ಅವಕಾಶ ಕೊಡುವುದಿಲ್ಲ ಎಂದು ಗುಡುಗಿದರು.
೨೦೨೩ರ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಿಕ್ಕೆ ಬಂದರೆ ಒಳ ಮೀಲಾತಿಯನ್ನು ಜಾರಿ ಮಾಡುವ ಆಶ್ವಾಸನೆ ನೀಡಿತ್ತು. ಆದರೆ, ಎರಡೂವರೆ ವರ್ಷ ಕಳೆದರೂ ಒಳಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುತ್ತಿದೆ. ಒಳ ಮೀಸಲಾತಿ ಜಾರಿ ಮಾಡದೆ ಇಲ್ಲಸಲ್ಲದ ತಂತ್ರಗಳನ್ನು ಹೆಣೆಯುತ್ತಿದ್ದು, ಇದರಿಂದ ಮಾದಿಗ ಸಮುದಾಯದ ತಾಳ್ಮೆ ಕಟ್ಟೆ ಒಡೆದಿದ್ದು, ಕ್ರಾಂತಿಕಾರಿ ಹೋರಾಟಕ್ಕೆ ಇಳಿಯುವ ಮುನ್ನ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಾಯಬಣ್ಣ ಪುರದಾಳ, ಸಾಯಬಣ್ಣ ದೇವರಮನಿ, ಸಿದ್ದು ಪೂಜಾರಿ, ಖಾಜು ಬಂಕಲಗಿ, ಯಲ್ಲು ಇಂಗಳಗಿ, ಗುಡೆಮಾರನಳ್ಳಿ ನಾಗರಾಜ, ನಾಗು ಕಟ್ಟಿಮನಿ, ರಾಜಕುಮಾರ ಭಾಸಗಿ, ರಾಜು ಗುಬ್ಬೇವಾಡ ಸೇರಿದಂತೆ ಅನೇಕರು ಇದ್ದರು.

