ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಹೆಣ್ಣು ಮಕ್ಕಳಿಗೆ ಕಷ್ಟದ ಬುತ್ತಿ ತಲೆಯ ಮೇಲೆ ಸದಾ ಇದ್ದೆ ಇರುತ್ತದೆ. ಆದರೆ, ಕಷ್ಟಗಳನ್ನು ಮೆಟ್ಟಿನಿಂತು ಬದುಕನ್ನು ಜಯಿಸಲು ಅಣ್ಣ ಬಸವಣ್ಣ ಹೆಣ್ಣು ಮಕ್ಕಳಿಗೆ ಶಕ್ತಿ ಕೊಟ್ಟಿದ್ದಾನೆ. ಆ ಶಕ್ತಿಯನ್ನು ಬಳಸಿ ಹುಟ್ಟಿದ ಮನೆಗೆ ಮತ್ತು ಕೊಟ್ಟ ಮನೆಗೆ ಕೀರ್ತಿ ತರುವ ಕೆಲಸವನ್ನು ಮಹಿಳೆಯರು ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.
ಜಮಖಂಡಿ ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏ.15 ರಿಂದ ಏ.29 ರವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ ಮತ್ತು ಸದ್ಭಾವನಾ ಪಾದಯಾತ್ರೆ ಅಂಗವಾಗಿ ಹದಿನಾಲ್ಕನೆಯ ದಿನವಾದ ಸೋಮವಾರ ಸಂಜೆ ನಡೆದ ವಚನ ಜಾತ್ರಾ ಮಹೋತ್ಸವದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮುಕ್ಕೋಟಿ ದೇವರಿಗೆ ಕೈಮುಗಿಯುವ ಬದಲಾಗಿ ಜೀವ ಕೊಟ್ಟ ತಂದೆ-ತಾಯಿಗೆ ದಿನಾಲು ಕೈಮುಗಿದು ಏನೇ ಬಂದರೂ ಮೆಟ್ಟಿ ನಿಲ್ಲುವ ಶಕ್ತಿ ಬರಲಿ ಎಂದು ಪ್ರಾರ್ಥಿಸಬೇಕು. ತಂದೆ-ತಾಯಿಯ ಆದರ್ಶಗಳನ್ನು ಪಾಲಿಸಬೇಕು ಎಂದರು. ಮಹಿಳೆಯನ್ನು ಭೂತಾಯಿ, ಗೋಮಾತೆ, ನದಿ ಇತ್ಯಾದಿಗಳಿಗೆ ಹೋಲಿಸಲಾಗುತ್ತದೆ. ಬಹುತೇಕ ಎಲ್ಲ ಹಬ್ಬಗಳು ಹೆಣ್ಣು ಮಕ್ಕಳಿಗಾಗಿ ಇವೆ. ಅದು ಈ ನಾಡಿನ ಸಂಸ್ಕೃತಿ ಮತ್ತು ಸಂಸ್ಕಾರ. ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆ ಮಹಿಳೆಯರ ಮೇಲಿದೆ ಎಂದರು.
ಓಲೇಮಠದ ಆನಂದ ದೇವರು ಶ್ರೀಗಳು ನೇತೃತ್ವ ವಹಿಸಿ ಮಾತನಾಡಿ, ‘ದ್ವೇಷ ಬಿಡು, ಪ್ರೀತಿ ಮಾಡು’ ಎಂಬ ತತ್ತ್ವವನ್ನು ಅಳವಡಿಸಿಕೊಳ್ಳಬೇಕು. ಒಂದು ಒಳ್ಳೆಯ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ತಲೆಯಲ್ಲಿನ ನೂರು ಕೆಟ್ಟ ವಿಚಾರಗಳು ದೂರವಾಗುತ್ತವೆ ಎಂದು ಆಶೀರ್ವಚನ ನೀಡಿದರು.
ಝುಂಜರವಾಡದ ಬಸವರಾಜೇಂದ್ರ ಶರಣರು ಪ್ರವಚನ ನುಡಿಗಳನ್ನು ಹಂಚಿಕೊಳ್ಳುತ್ತ ಮಾತನಾಡಿ, ಶರಣರು ತಮಗಾಗಿ ಬದುಕಲಿಲ್ಲ. ಬದಲಾಗಿ ನಮಗಾಗಿ ಬದುಕಿದರು. ಕಲ್ಯಾಣದಲ್ಲಿ 12ನೇ ಶತಮಾನದಲ್ಲಿ ನಡೆದದ್ದು ರಕ್ತಕ್ರಾಂತಿಯಲ್ಲ. ಅದು ಭಕ್ತಿಕ್ರಾಂತಿ. ವಚನ ಸಾಹಿತ್ಯವನ್ನು ಉಳಿಸಿಕೊಳ್ಳಲು ಶರಣರು ರಾತ್ರೋರಾತ್ರಿ ಕಲ್ಯಾಣವನ್ನು ತೊರೆದಿದ್ದರು ಎಂದರು.
ನಡೆದಾಡುವ ಕಂಪ್ಯೂಟರ್ ಎಂದೆ ಖ್ಯಾತರಾಗಿರುವ ಅಥಣಿಯ ಬಸವರಾಜ ಉಮರಾಣಿ ಮಾತನಾಡಿ, ಅಂಕಿ-ಸಂಖ್ಯೆಗಳ ಗುಣಾಕಾರ, ಭಾಗಾಕಾರ ಸಲೀಸಾಗಿ ಮಾಡಿ ತೋರಿಸಿದರು. ಯಾವಗಲೋ ಒಮ್ಮೆ ಭೇಟಿಯಾದಾಗ ನೀಡಿದವರ ಮೊಬೈಲ್ ಸಂಖ್ಯೆಯನ್ನು ಹೇಳಿ ಬೆರಗು ಮೂಡಿಸಿದರು. ಜನ್ಮ ದಿನಾಂಕ ಹೇಳಿದವರ ಹುಟ್ಟಿದ ದಿನದ ವಾರವನ್ನು ಥಟ್ಟನೆ ಹೇಳಿ ಎಲ್ಲರನ್ನು ವಿಸ್ಮಯಗೊಳಿಸಿದರು. ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಡಬೇಡಿ, ಪುಸ್ತಕ ಕೊಡಿ ಎಂದು ಪಾಲಕರಲ್ಲಿ ಮನವಿ ಮಾಡಿದರು.
ಜಿ.ಪಂ. ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಮಾತನಾಡಿದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಶ್ರೀಗಳು, ಮುತ್ತೂರಿನ ರಾಚೋಟೇಶ್ವರ ಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ಕಡಪಟ್ಟಿಯ ಜಗದೀಶ್ವರ ಮಠದ ಅಭಿನವ ರಾಚೋಟೇಶ್ವರ ದೇವರು ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಿವಯ್ಯ ನಾಗರಾಳಮಠ, ಪ್ರದೀಪ ಮಹಾಲಿಂಗಪುರಮಠ, ಮೊನಿಕಾ ಹಿರೇಮಠ, ರಾಜು ವಾರದ, ಶ್ರೀಶೈಲ ತೇಲಿ, ಸದಾಶಿವ ಸೊನ್ನದ, ಚನ್ನಪ್ಪ ಬಿರಾದಾರ, ಶಂಕರ ಜಾಲಿಗಿಡದ ಇತರರು ಇದ್ದರು.
ರಜನಿ ಕರಡಿ ವಚನ ಗಾಯನ ಸಾದರ ಪಡಿಸಿದರು. ಸಾನ್ವಿ ಅರಕೆ ನೃತ್ಯ ಪ್ರದರ್ಶಿಸಿದರು. ಗದುಗಿನ ಗವಾಯಿ ರವಿಕುಮಾರ ಬೆಣ್ಣೆ, ತಬಲಾ ವಾದಕ ಹನಮಂತ ಅಂಕದ ಸಂಗೀತ ಸೇವೆ ಸಲ್ಲಿಸಿದರು. ಶಿವಲೀಲಾ ಲಿಗಾಡಿ ಸ್ವಾಗತಿಸಿದರು. ಬಿಆರ್ಪಿ ದಾನಮ್ಮ ಪಂಚಕಟ್ಟಿಮಠ ನಿರೂಪಿಸಿದರು.

