ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅಬಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಕೈಗೊಂಡ ನೀರಾವರಿ ಯೋಜನೆಗಳಿಂದಾಗಿ ಬತ್ತಿ ಹೋಗಿದ್ದ ಲಕ್ಷಾಂತರ ಬೋರವೆಲ್ ಗಳು ಪುನಶ್ಚೇತನಗೊಂಡಿವೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಮಂಗಳವಾರ ಬಬಲೇಶ್ವರ ತಾಲೂಕಿನ ಹೆಬ್ಬಾಳಟ್ಟಿ ಗ್ರಾಮದ ಶ್ರೀ ಚಂದ್ರಗಿರಿ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಅವರು ಮಾತನಾಡಿದರು.
ಜಲಸಂಪನ್ಮೂಲ ಸಚಿವನಾಗಿ ಭವಿಷ್ಯದ ದೃಷ್ಟಿಯಿಂದ ಕೈಗೊಂಡ ಯೋಜನೆಗಳು ಫಲ ನೀಡಿದ್ದು, ಅಂತರ್ಜಲ ಹೆಚ್ಚಾಗಿದೆ. ಇದರಿಂದ ಸಂಕಷ್ಟದಲ್ಲಿದ್ದ ರೈತರ ಬಾಳು ಹಸನಾಗಿದ್ದು, ರೈತರು ಉತ್ತಮ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈಗ ಕೆರೆಗಳಿಗೆ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತಿದ್ದು, ರಾತ್ರಿ ವೇಳೆ ಹೆಬ್ಬಾಳಟ್ಟಿ ಗ್ರಾಮಕ್ಕೆ ನೀರು ತಲುಪಲಿದೆ. 5ಎ ಮತ್ತು 5ಬಿ ಲಿಫ್ಟ್ ಹಾಗೂ 15 ನೇ ಡಿಸ್ಟ್ರೀಬ್ಯೂಟರಿ ಕಾಲುವೆ ನಿರ್ಮಿಸುವ ಮೂಲಕ ಈ ಭಾಗದಲ್ಲಿ ಬಾಕಿ ಉಳಿದ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಇದರಿಂದ ಹೆಬ್ಬಾಳಟ್ಟಿ ಗ್ರಾಮದ 7 ಸಾವಿರ ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ. ಅಲ್ಲದೇ, ಟೊಯೊಟಾ ಕಿರ್ಲೋಸರ್ ಕಂಪನಿ ಸಿ.ಎಸ್.ಆರ್ ಅನುದಾಡಿ ಗ್ರಾಮದಲ್ಲಿ 5 ಶಾಲಾ ಕೊಠಡಿ ನಿರ್ಮಿಸಲಿದೆ. ರೈತರು ತಮ್ಮ ಮಕ್ಕಳ ಜೀವನ ರೂಪಿಸಿಕೊಳ್ಳಲು ಉತ್ತಮ ಶಿಕ್ಷಣ ನೀಡಬೇಕು ಎಂದು ಅವರು ಹೇಳಿದರು.
ಈಗ ಕೈಗಾರಿಕೆ ಸಚಿವನಾಗಿ ಜಿಲ್ಲೆಗೆ ಕೈಗಾರಿಕೆಗಳನ್ನು ತರುತ್ತಿದ್ದೇನೆ. ಅಲ್ಲದೇ, ಈಗಾಗಲೇ ಉದ್ಯೋಗ ಮೇಳ ನಡೆಸಿ ಟೊಯೊಟಾ ಕಂಪನಿಯಲ್ಲಿ ಸುಮಾರು 500 ಯುವಕರಿಗೆ ಕೆಲಸ ಕೊಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಫಾಕ್ಸಕಾನ್ ಕಂಪನಿಯವರು ಉದ್ಯೋಗ ಮೇಳ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.
ನಂತರ ಹೊಳೆಹಂಗರಗಿ ಗ್ರಾಮದಲ್ಲಿ ಸಂಗೋಳಿ ರಾಯಣ್ಣ ಪ್ರತಿಮೆ ಉದ್ಘಾಟಿಸಿ ಹಾಗೂ ಶ್ರೀ ಭೀರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.
ಹೆಬ್ಬಾಳಟ್ಟಿ ಗ್ರಾಮದ ಕಾರ್ಯಕ್ರಮದಲ್ಲಿ ಹೆಬ್ಬಾಳಟ್ಟಿ ಶ್ರೀ ಚಂದ್ರಗಿರಿ ಮಠದ ಶ್ರೀ ಸಿದ್ಧಲಿಂಗಯ್ಯ ರುದ್ರಯ್ಯ ಹಿರೇಮಠ, ಅಶೋಕ ಕಾಖಂಡಕಿ, ಎಸ್.ಪಿ.ತಾಂವಶಿ, ಚನ್ನಪ್ಪ ಕೊಪ್ಪದ, ರಮೇಶ ದೇಸಾಯಿ, ರಫೀಕ್ ಸೋನಾರ್, ಜಾಫರ್ ಇನಾಮದಾರ, ವಿದ್ಯಾರಾಣಿ ತುಂಗಳ, ಭಾರತಿ ಹಿರೇಮಠ ಮತ್ತು ಹೊಳೆಹಂಗರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೊಳಸಾರದ ಅಭಿನವ ಪುಂಡಲಿಂಗ ಮಹಾರಾಜರು, ಆನಂದಕುಮಾರ ದೇಸಾಯಿ, ಬಸವರಾಜ ದೇಸಾಯಿ, ಭೀಮಶಿ ನಾಗರಾಳ, ಎಂ. ಜೆ. ಯಂಕಂಚಿ, ಪ್ರಶಾಂತ ದೇಸಾಯಿ, ಸದಾಶಿವ ಬೀಳಗಿ, ಭೀರಪ್ಪ ಜುಮನಾಳ, ಕಲ್ಲನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

