ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಬಡವರ ಬಾಳಿನ ಆಶಾಕಿರಣ ಆರ್ಥಿಕ ಪ್ರಗತಿಯ ಒಂದು ಕನಸಿನ ಯೋಜನೆ ಪಂಚ ಗ್ಯಾರಂಟಿ ಯೋಜನೆ ಜನರ ಮನೆ ಮನೆ ಬಾಗಿಲಿಗೆ ತಲುಪುವಂತಾಗಿದ್ದು ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸಮಾಡುವಂತಾಗಿದೆ ಎಂದು ಕೊಲ್ಹಾರ ತಾಲೂಕು ಪಂಚ ಗ್ಯಾರಂಟಿ ಯೋಜನಾ ಸಮೀತಿಯ ಅಧ್ಯಕ್ಷ ಸಂತೋಷ ಗಣಾಚಾರಿ ಹೇಳಿದರು.
ತಾಲೂಕಿನ ಮುಳವಾಡ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ತಾಲೂಕಾ ಮಟ್ಟದ ಪಂಚ ಗ್ಯಾರಂಟಿ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು. ಸ್ತ್ರೀ ಶಕ್ತಿ ಯೋಜನೆಯ ಅಡಿ ತಾಲೂಕಿನಲ್ಲಿ ೨೬೮೯೫೫೬ ಮಹಿಳೆಯರು ಬಸ್ನಲ್ಲಿ ಪ್ರಯಾಣ ಮಾಡಿದ್ದರಿಂದ ಆದಾಯ ದ್ವಿಗುಣವಾಗಿದೆ, ಗೃಹ ಲಕ್ಷ್ಮಿ ಯೋಜನೆಯ ಅಡಿ ತಾಲೂಕಿನಲ್ಲಿ ೨೦೦೩೬ ಅರ್ಜಿದಾರರು ಇದ್ದು ೧೯೬೮೨ ಫಲಾನುಭವಿಗಳು ಯೋಜನೆಯ ಲಾಭ ಪಡೆದುಕೊಂಡಿದ್ದು ೨೯೦ ಜನ ಬಾಕಿ ಉಳಿದಿದ್ದಾರೆ ಎಂದರು.
ಗೃಹ ಜ್ಯೋತಿ ಯೋಜನೆಯ ಅಡಿ ೧೭೯೧ ಫಲಾನುಭವಿಗಳು ಅರ್ಜಿ ಹಾಕಿದ್ದು ೧೭೦೨ ಫಲಾನುಭವಿಗಳಿಗೆ ಅವಕಾಶ ಲಭಿಸಿದ್ದು ಬಾಕಿ ೮೧ ಕುಟುಂಬಗಳು ಉಳಿದುಕೊಂಡಿವೆ. ಯುವನಿಧಿ ಯೋಜನೆಯ ಅಡಿ ತಾಲೂಕಿನಲ್ಲಿ ೪೦೯ ಅರ್ಜಿದಾರರಿದ್ದು ೨೧೯ ಜನ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಹಂತ ಹಂತವಾಗಿ ಉಳಿದವರಿಗೂ ಅವಕಾಶ ಕಲ್ಪಿಸಲು ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಸರಕಾರಿ ಯೋಜನೆಯ ಮಹತ್ವವನ್ನು ತಿಳಿಸಿಬರುತ್ತಿದ್ದಾರೆ ಎಂದರು.
ಗ್ರಾ.ಪಂ ಅಧ್ಯಕ್ಷ ಹಣಮಂತ ಕಳಸಗೊಂಡ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಹೇಬಗೌಡ ಪಾಟೀಲ, ಶೇಖಪ್ಪ ಬೀಳಗಿ, ಅಣ್ಣುಗೌಡ ಬಿರಾದಾರ, ತಾಲೂಕಾ ಗ್ಯಾರಂಟಿ ಯೋಜನಾ ಸಮೀತಿ ಸದಸ್ಯರಾದ ಶ್ರೀಮತಿ ಕಮಲಾಬಾಯಿ ಮಾಕಾಳಿ, ಶ್ರೀಮತಿ ಕಸ್ತೂರಿ ಪೂಜಾರಿ, ಸದಾನಂದ ಮಂಟೂರ, ಸೇರಿದಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ನೂರಾರು ಮಹಿಳೆಯರು ಸಭೆಯಲ್ಲಿ ಭಾಗವಹಿಸಿದ್ದರು.

