ಎಎಸ್ಪಿ ಭರಮನಿ ಜೊತೆ ಅಸಭ್ಯ ವರ್ತನೆ | ಸಂಯಮ ಕಳೆದುಕೊಂಡ ಸಿಎಂ ನಡೆ ಖಂಡಿಸಿ ರಾಜ್ಯಪಾಲರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಧಾರವಾಡದ ಹೆಚ್ಚುವರಿ ಪೋಲೀಸು ವರಿಷ್ಠಾಧಿಕಾರಿ ನಾರಾಯಣ ಭರಮನಿಯರ ಅವರ ಜೊತ ಅಸಭ್ಯ ವರ್ತನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಜಿಲ್ಲಾ ಯುವ ಪರಿಷತ್ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಪರಿಷತ್, ಅಧ್ಯಕ್ಷರಾದ ಶರಣು ಸಬರದ ಅವರು ಮಾತನಾಡಿ, ಅತ್ಯಂತ ಗೌರವಾನ್ವಿತ ಪೋಲೀಸು ನೌಕರಿ ಮಾಡುತ್ತಿರುವ ಹಿರಿಯ ಪೋಲೀಸು ಅಧಿಕಾರಿ, ಧಾರವಾಡದ ಹೆಚ್ಚುವರಿ ಪೋಲೀಸು ವರಿಷ್ಠಾಧಿಕಾರಿಗಳಾದ ನಾರಾಯಣ ಭರಮನಿಯರ ಜೊತೆಗೆ ತುಂಬಿದ ಕಾಂಗ್ರೆಸ್ಸು ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆದುಕೊಂಡ ರೀತಿ ಇಡೀ ನಾಗರಿಕ ಸಮಾಜ ತೆಲೆತಗ್ಗಿಸುವಂತಾಗಿದೆ.
ಬೆಳಗಾವಿಯ ಘಟನೆಯಿಂದ ಭರಮನಿ ಅಂತಹ ಅಧಿಕಾರಿಗಳಿಗೆ ಆಗುವ ಮಾನಸಿಕ ಹಿಂಸೆ ಅಷ್ಟಿಷ್ಟಲ್ಲ. ರಾಜಕಾರಣಿಗಳನ್ನು ತಮ್ಮ ಮನೆಯ ಹೆಂಡತಿ, ಮಕ್ಕಳು ಹಾಗೂ ಪಾಲಕರನ್ನು ಬಿಟ್ಟು ಹೊತ್ತಿಲ್ಲದ ಹೊತ್ತಿನಲ್ಲಿ ಒಬ್ಬ ಪೋಲೀಸು ಆಧಿಕಾರಿ ಸರಕಾರದ ಆಸ್ತಿ ಎನ್ನುವಂತೆ ಅದೆಲ್ಲ ರೀತಿಯ ಸೇವೆಗೆ ಕಂಕಣ ಬದ್ಧರಾಗಿ ನಿಲ್ಲುವವರ ಪರಿಸ್ಥಿತಿಯೇ ಹಿಂಗಾದರೆ, ಅದೇ ಇಲಾಖೆಯ ಪೇದೆಯ ಗತಿ ಇನ್ನೇನು ಆಗಬೇಡ..? ಸಧ್ಯ ಇದು ಸಾರ್ವಜನಿಕವಾಗಿ ಚರ್ಚೆ ಆಗುತ್ತಿದೆ. ಇಂತಹ ರಾಜಕಾರಿಣಿಗಳ ದುರ್ವರ್ತನೆಯಿಂದ ಪೋಲೀಸು ಇಲಾಖೆಯ ಆತ್ಮಸ್ಥರ್ಯ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ.
ಸಂಗಮೇಶ ಹೌದೆ (ವಕೀಲರು) ಮಾತನಾಡಿ, ಬೆಳಗಾವಿಯ ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಆದ ಪೋಲೀಸು ಅಧಿಕಾರಿಯ ದುರ್ವರ್ತನೆ ಘಟನೆಯ ಕುರಿತು ಇನ್ನಾದರೂ ಪ್ರತಿಭಟನೆಯ ಅವಶ್ಯಕತೆ ಇದೆ. ಪೋಲೀಸು ಇಲಾಖೆಯ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳು ಪ್ರತಿಭಟಿಸದೇ ಇದ್ದರೆ ಇಂತಹ ರಾಜಕಾರಿಣಿಗಳ ಕೈಯಲ್ಲಿ ಪೋಲೀಸು ಇಲಾಖೆ ಪುಟ್ಬಾಲ್ ಆಗುತ್ತಿದೆ. ಈ ಕುರಿತು ಪೋಲೀಸು ಇಲಾಖೆಯ ಅಧಿಕಾರಿಗಳಿಗೆ ಗೌರವ ಕೊಡುವಲ್ಲಿ ಮುಖ್ಯಮಂತ್ರಿಗಳು ದಾರಿ ತಪ್ಪುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿವಾನಂದ ಭುಯ್ಯಾರ, ರವಿ ಬಿರಾದಾರ (ನಾಗಠಾಣ), ಮಹೇಶ ಬಿದನೂರ, ಬಾಪುಗೌಡ ಬಿ. ಬಿರಾದಾರ (ವಕೀಲರು), ಬಾಬು ಹಿಪ್ಪರಗಿ (ವಕೀಲರು), ಆಕಾಶ ಸಬರದ, ಇನ್ನಿತರರು ಉಪಸ್ಥತರಿದ್ದರು.

