ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಹಿಪ್ಪರಗಿ ಜಲಾಶಯದಿಂದ ಹರಿಸಲಾದ ನೀರು ಗ್ರಾಮದ ಶ್ರಮಬಿಂದು ಸಾಗರವರೆಗೆ ಹರಿದು ಬಂದಿದ್ದರಿಂದ ಈ ಭಾಗದ ರೈತರು ಸಂತಸಗೊಂಡಿದ್ದಾರೆ.
ಕೃಷ್ಣಾ ನದಿ ತೀರದ ಗ್ರಾಮಗಳ ಜನ ಜಾನುವಾರುಗಳ ಕುಡಿಯುವ ನೀರಿನ ಅನುಕೂಲಕ್ಕಾಗಿ ಹಿಪ್ಪರಗಿ ಜಲಾಶಯದಿಂದ ನೀರು ಬಿಡುವಂತೆ ಕ.ನೀ.ನಿ. ಅಧೀಕ್ಷಕ ಅಭಿಯಂತರರು ಆದೇಶಿಸಿದ್ದರು. ಸೋಮವಾರ ಸಂಜೆ 0.30 ಟಿಎಂಸಿ ನೀರು ಬಿಡಲಾಗಿತ್ತು. ಈ ನೀರು ಮಂಗಳವಾರ ಬೆಳಗ್ಗೆ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ ತಲುಪಿದ್ದು, ಸುತ್ತಲಿನ ಗ್ರಾಮಸ್ಥರು ಸಂತಸಗೊಂಡಿದ್ದಾರೆ.
ಕೇವಲ ಕುಡಿವ ನೀರಿನ ಉದ್ದೇಶಕ್ಕಾಗಿ ನೀರು ಹರಿಸಲಾಗಿದ್ದು, ರೈತರು ಪಂಪ್ ಸೆಟ್ ಮೂಲಕ ಕೃಷಿಗೆ ನೀರು ಬಳಸುವಂತಿಲ್ಲ ಎಂದು ಸೂಚಿಸಲಾಗಿದೆ.
ಈ ಕುರಿತು “ಉದಯರಶ್ಮಿ” ವಿಸ್ತೃತ ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

