ಉದಯರಶ್ಮಿ ದಿನಪತ್ರಿಕೆ
ವರದಿ: ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಸಮಾಜ ಸುಧಾರಕ, ದಾರ್ಶನಿಕ, ಸಾಂಸ್ಕ್ರತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಏ.30 ರಂದು ಇರುವದರಿಂದ ಬಸವ ಜನಿಸಿದ ಬಸವನಬಾಗೇವಾಡಿಯ ಪಟ್ಟಣದಲ್ಲಿ ಬಸವ ಜಯಂತಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.
ಕಳೆದ ಕೆಲ ದಿನಗಳಿಂದ ಬಸವ ಜನ್ಮಸ್ಮಾರಕ, ಬಸವೇಶ್ವರ ದೇವಸ್ಥಾನದಲ್ಲಿ ಮಂಡಳಿಯ ಸಿಬ್ಬಂದಿ ಸ್ವಚ್ಛತೆಯಲ್ಲಿ ತೊಡಗಿರುವದು ಕಂಡುಬಂದಿತ್ತು. ಬಸವೇಶ್ವರ ದೇವಸ್ಥಾನ, ಬಸವಜನ್ಮ ಸ್ಮಾರಕ ಸೇರಿದಂತೆ ಬಸವೇಶ್ವರ ವೃತ್ತದಲ್ಲಿರುವ ಅಶ್ವಾರೂಢ ಬಸವೇಶ್ವರರ ಪ್ರತಿಮೆಯ ಸುತ್ತ ವಿದ್ಯುದೀಪದ ಅಲಂಕಾರ ಮಾಡಲಾಗಿದೆ.
ಬಸವ ಜನಿಸಿದ ಬಸವನಬಾಗೇವಾಡಿ ಅಭಿವೃದ್ದಿಗೆ ಪ್ರತ್ಯೇಕ ಅಭಿವೃದ್ದಿ ಪ್ರಾಧಿಕಾರ ರಚಿಸಬೇಕೆಂದು ಬಹು ವರ್ಷಗಳಿಂದ ಬಸವ ಭಕ್ತರ ಬೇಡಿಕೆಗೆ ಸ್ಪಂದಿಸಿ ಹಾಗೂ ಸಚಿವ ಶಿವಾನಂದ ಪಾಟೀಲ ಅವರ ಇಚ್ಛಾಶಕ್ತಿ ಮೇರೆಗೆ ಈಚೆಗೆ ಸರ್ಕಾರ ಬಸವ ಜನಿಸಿದ ಬಸವನಬಾಗೇವಾಡಿ ಸೇರಿದಂತೆ ವಿವಿಧ ಶರಣರ ಕ್ಷೇತ್ರಗಳ ಅಬಿವೃದ್ದಿಗೆ ಬಸವನಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರ ಘೋಷಣೆ ಮಾಡಿ ಅಸ್ತಿತ್ವಕ್ಕೆ ತಂದಿದೆ. ಪ್ರತ್ಯೇಕ ಪ್ರಾಧಿಕಾರ ರಚನೆಯಾಗಿರುವದರಿಂದ ಈ ಸಲದ ಬಸವ ಜಯಂತಿ ವೈಶಿಷ್ಟ್ಯಪೂರ್ಣವಾಗಿ ಆಚರಣೆ ಆಗುತ್ತದೆ ಎಂದು ಬಸವ ಭಕ್ತರು ಅಂದುಕೊಂಡಿದ್ದರು. ಆದರೆ ಬಸವ ಭಕ್ತರ ನಿರೀಕ್ಷೆಯಂತೆ ಬಸವ ಜಯಂತಿ ಆಚರಣೆಯಾಗದೇ ಪ್ರತಿ ವರ್ಷದಂತೆ ಬಸವ ಜಯಂತಿ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ.
ಬಸವ ಜಯಂತಿಯಂಗವಾಗಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರು ಹನ್ನೊಂದು ದಿನಗಳ ಕಾಲ ಬಳೂಟಗಿಯ ಶಿವಕುಮಾರ ಸ್ವಾಮೀಜಿಗಳಿಂದ ನಿತ್ಯ ಸಂಜೆ 6 ಗಂಟೆಗೆ ವಿರಕ್ತಮಠದಲ್ಲಿ ವಚನ ದರ್ಶನ ಪ್ರವಚನ ಆಯೋಜನೆ ಮಾಡುವ ಮೂಲಕ ಜನರಿಗೆ ಬಸವಾದಿ ಶರಣರ ವಚನಗಳ ಸಂದೇಶ ಮುಟ್ಟಿಸುತ್ತಿದ್ದಾರೆ. ಇದರ ಜೊತೆಗೆ ಬೆಳಗ್ಗೆ 6 ಗಂಟೆಯಿಂದ ವಿದ್ಯಾರ್ಥಿಗಳಿಗೆ ಇದೇ ಪ್ರಥಮ ಬಾರಿಗೆ ಸಂಸ್ಕಾರ ಶಿಬಿರವನ್ನು ಎರಡು ಗಂಟೆ ಕಾಲ ನಡೆಸುತ್ತಿದ್ದಾರೆ. ಈ ಶಿಬಿರದಲ್ಲಿ ಪ್ರತಿದಿನ ಅನೇಕ ಅನುಭಾವಿಗಳಿಂದ ವಿದ್ಯಾರ್ಥಿಗಳಿಗೆ ಉಪನ್ಯಾಸ, ಮಾರ್ಗದರ್ಶನ, ಲಿಂಗಪೂಜೆ ಮಾಡಿಕೊಳ್ಳುವ ವಿಧಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಉಣಬಡಿಸುತ್ತಿದ್ದಾರೆ. ಸಂಸ್ಕಾರ ಶಿಬಿರದಲ್ಲಿ 100 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ಸಂಸ್ಕಾರದ ಪ್ರಯೋಜನ ಪಡೆಯುತ್ತಿರುವದು ವಿಶೇಷ. ರಕ್ತದಾನ ಶಿಬಿರ, ನೇತ್ರ ತಪಾಸಣೆ ಶಿಬಿರ ಸಹ ಆಯೋಜನೆ ಮಾಡಿದ್ದು ಗಮನಾರ್ಹ.
ನಾಡಿನಲ್ಲಿ ಅಕ್ಷಯ ತೃತೀಯ ಬಸವ ಜಯಂತಿಯಂದು ಶುಭ ಕಾರ್ಯ ಸೇರಿದಂತೆ ಚಿನ್ನದ ಖರೀದಿಯಲ್ಲಿ ಜನರು ತೊಡಗುತ್ತಾರೆ. ಬಸವ ಜಯಂತಿ ಬರುವದೇ ನಾಡಿಗೆ ದೊಡ್ಡ ಸಡಗರ, ಸಂಭ್ರಮ. ಬಸವ ಜಯಂತಿಯನ್ನು ಜನರು ಶ್ರದ್ದಾ ಭಕ್ತಿಯಿಂದ ಆಚರಿಸುವದು ವಿಶೇಷ. ಬಸವೇಶ್ವರರ ತತ್ವಗಳನ್ನು ಜಗತ್ತಿನಲ್ಲಿ ಅಳವಡಿಸಿಕೊಳ್ಳುವದು ತುಂಬಾ ಮುಖ್ಯವಾಗಿದೆ. ಇಂದು ಜಗತ್ತಿನ ಅನೇಕ ಜ್ವಲಂತ ಸಮಸ್ಯೆಗಳಿಗೆ ಬಸವೇಶ್ವರರ ಸಂದೇಶಗಳು ಪರಿಹಾರ ನೀಡುತ್ತವೆ. ಇವು ಜಗತ್ತಿನಲ್ಲಿ ಪ್ರಸಾರವಾಗಿ ಅವು ಜಾರಿಗೆ ಬರಬೇಕಿದೆ. ಇಂದು ಕೇವಲ ಬಸವೇಶ್ವರರ ಹೆಸರನ್ನು ಹೇಳಿಕೊಂಡು ಬೆಳೆಯುತ್ತಿದ್ದಾರೆ ವಿನಃ ಅವರ ತತ್ವಗಳು ತತ್ವಗಳಾಗಿಯೇ ಉಳಿಯುತ್ತಿರುವದು ವಿಪರ್ಯಾಸ.

