ಚಿಂತನೆ
ಡಾ.ಪ್ರಿಯಂವದಾ ಹುಲಗಬಾಳಿ
ಅಥಣಿ
ಉದಯರಶ್ಮಿ ದಿನಪತ್ರಿಕೆ
ಕರುಳಕೇತಯ್ಯನವರ ವಚನ
“ಅರ್ಪಿತವಲ್ಲದುದ ಕಲಸಿದ ಕೈ,ಉಂಡ ಬಾಯಿ.
ತುಂಬಿದ ಘಟ ಅರಿದುಕೊಂಡ ಆತ್ಮ ಇವ ಹಿಡಿದಡೆ ಭಂಗ ಸಡಗರಿಸಿ ತುಂಬಿದ ಗರಳ
ಘಟವನೊಡೆದು ಕಿತ್ತು ಆಸೆಯ ನುರಿಚಿ ಹಾಕಿ
ಮತ್ತಾ ಅಂಗವನೊಡಗೂಡಿಹೆನೆಂಬ ಚಿತ್ತದ ಹಂಗು ಬೇಡ ಮತ್ತಾ ತಪ್ಪ ಕಂಡು ಎನ್ನರಗವನೊಡಗೂಡುವ ಮನಕ್ಕೆ ಮನೋಹರ ಶಂಕೇಶ್ವರಲಿಂಗವೆ ಬೇಡಿ”
ವಚನ ವಿಶ್ಲೇಷಣೆ
ಶರಣ ಕರುಳಕೇತಯ್ಯ ಅಪ್ಪ
ಕಾಯಕ, ಭಕ್ತಿ, ಸಾಮಾಜಿಕ ಸಮಾನತೆ ಹಾಗೂ ಬದುಕಿನ ಸರಳತೆಯ ಸೂತ್ರಗಳ ಪ್ರಭಾವಕ್ಕೊಳಗಾದವರು. ಇವರ ಕುರಿತಾಗಿ ಹೆಚ್ಚಿನ ವಿವರ ತಿಳಿದು ಬಂದಿಲ್ಲ. ಈತನ ಎಂಟು ವಚನಗಳು ಮಾತ್ರ ‘ಸಮಗ್ರ ವಚನ ಸಂಪುಟ-೭’ ರಲ್ಲಿ(ಸಂಕೀರ್ಣ ವಚನ ಸಂಪುಟ-೨)ರಲ್ಲಿ ಇವೆ.
ಲೌಕಿಕ ಬದುಕಿನ ಆಶೆ ಆಮಿಷೆಗಳನ್ನು ತ್ಯಜಿಸಿ ನಿರ್ಲಿಪ್ತತೆಯ ನಿರಾಂತಕ ಬದುಕು ಸಾಗಿಸಬೇಕು. ಈ ವಚನದಲ್ಲಿ ಭೌತಿಕ ವಸ್ತುಗಳ ಮೇಲಿನ ನಿರ್ಮೋಹವನ್ನು ಅವುಗಳ ನಿರರ್ಥಕತೆಯನ್ನು ರೂಪಕಗಳ ಮೂಲಕ ಕರುಳಕೇತಯ್ಯನವರು ಹೇಳಿದ್ದನ್ನು ಕಾಣುತ್ತೇವೆ. ಅರ್ಪಿತವಲ್ಲದ ಅಂದರೆ ಸಲ್ಲದ, ಲಿಂಗಾರ್ಪಿತವಲ್ಲದ, ಲಿಂಗಕ್ಕೆ ಅರ್ಪಿಸಲು ಯೋಗ್ಯವಲ್ಲದ ವಸ್ತುಗಳನ್ನು ಮುಟ್ಟಿದವರು ಹಾಗೂ ಅನುಭವಿಸಿದವರು ಲಿಂಗಭಕ್ತಿಗೆ ಹೇಗೆ ಯೋಗ್ಯರು? ಜೀವನದಲ್ಲಿ ಅತಿಯಾದ ಆಸೆ ಆಮಿಷವನ್ನು ತ್ಯಜಿಸಿ ಆತ್ಮ ಜಾಗೃತಿಯನ್ನು ಹೊಂದಿ ಭಕ್ತಿಯ ಪರಮೋಚ್ಚ ಸ್ಥಿತಿಗೆ ತಲುಪುವ ಮನಸ್ಥಿತಿಯನ್ನು ನಾವು ಈ ವಚನದ ಮೂಲಕ ಅರಿಯಬಹುದು. ಶರಣತ್ವಕ್ಕೆ ಶರಣ ಜೀವನಕ್ಕೆ ಯಾವುದು ನಿಷಿದ್ಧವೋ ಅಂತಹ ಸಂಗತಿಗಳನ್ನು ನಾವು ಒಪ್ಪಿಕೊಳ್ಳಬಾರದು, ಒಪ್ಪಿಕೊಂಡರೆ ಅಂದರೆ ಅನುಭವಿಸಿದರೆ ಅದು ಸಲ್ಲದ ವಿಚಾರ.ಘಟ ಎಂದರೆ ಗಡಿಗೆ ಎಂದು ಅರ್ಥೈಸದೆ ಶರೀರ ಎಂದು ಅರ್ಥೈಸಿಕೊಳ್ಳಬೇಕು ತುಂಬಿದ ಘಟ ಪರಿಪೂರ್ಣತೆಯನ್ನು ಹೊಂದಿದ ಶರೀರ, ಅರಿವು ತಿಳುವಳಿಕೆಯನ್ನು ಪಡೆದುಕೊಂಡ ಆತ್ಮ, ಅಂದರೆ ಸ್ವಯಂ ಅರಿವು ಪಡೆದುಕೊಳ್ಳಬೇಕು
ಸ್ವತಃ ನಮಗೆ ಯಾವ ತಿಳುವಳಿಕೆ ಇಲ್ಲದಿದ್ದರೆ ನಾವು ಏನು ಮಾಡಿದರು ಅದು ವ್ಯರ್ಥವಾಗುತ್ತದೆ.
ಅರ್ಥವಿಲ್ಲದ ವ್ರತಾಚರಣೆಗಳನ್ನು ಧಿಃಕ್ಕರಿಸುವ ಕೇತಯ್ಯ ತನ್ನ ವಚನಗಳಲ್ಲೂ ವ್ರತಗಳ ಬಗೆಗೆ ವಿರೋಧ ಧೋರಣೆಯನ್ನು ವ್ಯಕ್ತಪಡಿಸಿದ್ದಾನೆ. ಡಾಂಭಿಕ ಭಕ್ತರನ್ನು, ಆತ್ಮವಂಚಕರನ್ನು, ಸೋಗಲಾಡಿಗಳನ್ನು ಟೀಕಿಸುವ ಕೇತಯ್ಯ ಈ ವಚನದಲ್ಲೂ ಕೂಡ ‘ಸಡಗರಿಸಿ ತುಂಬಿದ ಗರಳ ಘಟವನೊಡೆದು ಕಿತ್ತು ಆಸೆಯ ನುರಿಚಿ ಹಾಕಿ’ ಎಂದು ಹೇಳುತ್ತಾ ಅಂದರೆ ಆಸೆಗಳನ್ನು ಅಹಂಕಾರಗಳನ್ನು ಬಿಟ್ಟುಬಿಡಬೇಕು ಸಂಭ್ರಮದಿಂದ ಅಹಂಕಾರದಿಂದ ತುಂಬಿದ ಮನಸ್ಥಿತಿಯುಳ್ಳವರು ಒಳ್ಳೆಯ ಭಕ್ತರಾಗಲು ಸಾಧ್ಯವಿಲ್ಲ ಅವರು ಆಸೆಗಳನ್ನು ಅಹಂಕಾರಗಳನ್ನು ಭಕ್ತನನಿಸಿಕೊಳ್ಳಲು ಸಾಧ್ಯ ಎನ್ನುವುದು ಕರುಣಕೇತಯ್ಯನ ವಚನದ ಭಾವವಾಗಿದೆ ಆಸೆಗಳನ್ನು ಚಿದ್ರ ಗೊಳಿಸಿ ಅವುಗಳನ್ನು ದೂರವಿಟ್ಟು ದೈವಿಕತೆಯೊಂದಿಗೆ ದೈವತ್ವದ ಭಾವದೊಂದಿಗೆ ಐಕ್ಯತೆಯನ್ನು ಅಂದರೆ ಆರಾಧ್ಯದೈವದಲಿ ಒಂದಾಗುವ ದಾರಿಯನ್ನು ಹುಡುಕಬೇಕು. ದೇವರೊಂದಿಗೆ ಒಂದಾಗುವ ದಾರಿಯನ್ನು ಹುಡುಕುವ ಭಕ್ತನಿಗೆ ಶಿವಭಕ್ತಿಯ ಮಹತ್ವವನ್ನು ಈ ವಚನ ಒತ್ತಿ ಒತ್ತಿ ಹೇಳುತ್ತದೆ. ಲೌಕಿಕ ಬದುಕನ್ನು ಮೀರಿ ಅಲೌಕಿಕ ಬದುಕಿನೆಡೆಗೆ ಸಾಗುವ ಪರಿ ನಮ್ಮದಾಗಬೇಕು ಎನ್ನುವುದನ್ನು ಕರುಳಕೇತಯ್ಯನವರು ಈ ವಚನದಲ್ಲಿ ಹೇಳಿದ್ದಾರೆ.
ಒಟ್ಟಾರೆಯಾಗಿ ಈ ವಚನದಲ್ಲಿ ನಿರ್ಲಿಪ್ತತೆ ಸ್ವಯಂ ಅರಿವು ಮತ್ತು ಭಕ್ತಿಯ ಪ್ರಬಲ ಸಂದೇಶವನ್ನು ಗುರುತಿಸುತ್ತೇವೆ.