ಚಿಂತನೆ
– ನಾಗರಾಜ ಮತ್ತಿಹಳ್ಳ
ಮುಖ್ಯ ಉಪಾಧ್ಯಾಯರು
ಸರ್ಕಾರಿ ಪ್ರೌಢಶಾಲೆ
ಕೊಟ್ಟೂರು
ಉದಯರಶ್ಮಿ ದಿನಪತ್ರಿಕೆ
ಹೆಸರು: ಚೆನ್ನಬಸವಣ್ಣ
ಕಾಲ : ಕ್ರಿ.ಶ.ಹನ್ನೆರಡನೆಯ ಶತಮಾನ
ದೊರೆತಿರುವ ವಚನಗಳು: 1776
ವಚನಗಳ ಅಂಕಿತನಾಮ: ಕೂಡಲಚೆನ್ನಸಂಗಯ್ಯ / ಕೂಡಲಚೆನ್ನಸಂಗಮದೇವ
ನಿಷ್ಠೆಯುಳ್ಳಾತಂಗೆ ನಿತ್ಯ ನೇಮದ ಹಂಗೇಕೆ
ಸತ್ಯವುಳ್ಳಾತಂಗೆ ತತ್ವ ವಿಚಾರದ ಹಂಗೇಕೆ
ಅರಿವುಳ್ಳಾತಂಗೆ ಅಗ್ಘವಣಿಯ ಹಂಗೇಕೆ
ಮನಶುದ್ಧವುಳ್ಳವಂಗೆ ಮಂತ್ರದ ಹಂಗೇಕೆ
ಭಾವಶುದ್ಧವುಳ್ಳವಂಗೆ ಹೂವಿನ ಹಂಗೇಕೆ
ಕೂಡಲಚೆನ್ನಸಂಗಯ್ಯಾ
ನಿಮ್ಮನರಿದಾತಂಗೆ ನಿಮ್ಮ ಹಂಗೇಕೆ
ವಚನ ವಿಶ್ಲೇಷಣೆ
ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿಗೆ ದೇವರನ್ನು ಪೂಜಿಸುವ ಇಲ್ಲವೇ ದೇವರ ಇರುವಿಕೆಯ ಬಗೆಗಿನ ಸಂಗತಿಗಳನ್ನು ಮನನ ಮಾಡಿಕೊಳ್ಳುವ ಅಗತ್ಯವಿಲ್ಲ ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ. “ಒಳ್ಳೆಯ ನಡೆನುಡಿ“ ಎಂದರೆ ಜೀವನದಲ್ಲಿ ವ್ಯಕ್ತಿಯು ತನಗೆ ಒಳಿತನ್ನು ಬಯಸುವಂತೆಯೇ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವಂತಹ ನಡೆನುಡಿಗಳನ್ನು ಹೊಂದಿರುವುದು.
ನಿಷ್ಠೆಯುಳ್ಳಾತಂಗೆ ನಿತ್ಯನೇಮದ ಹಂಗೇಕೆ=ಜೀವನದ ವ್ಯವಹಾರಗಳಲ್ಲಿ ಸಹಮಾನವರ ಒಲವು ನಲಿವು ನಂಬಿಕೆಗೆ ಪಾತ್ರನಾಗಿ ಪ್ರಾಮಾಣಿಕತನದ ನಡೆನುಡಿಗಳಿಂದ ಬಾಳುತ್ತಿರುವ ವ್ಯಕ್ತಿಗೆ ಯಾವುದೇ ಬಗೆಯ ಜಪ ತಪ ಪೂಜೆಗಳ ಮೂಲಕ ದೇವರನ್ನು ಪೂಜಿಸಬೇಕಾದ ಅಗತ್ಯವಿಲ್ಲ;
ಸತ್ಯವುಳ್ಳಾತಂಗೆ ತತ್ವವಿಚಾರದ ಹಂಗೇಕೆ=ದಿನನಿತ್ಯದ ಜೀವನದಲ್ಲಿ ಕೆಟ್ಟದ್ದನ್ನು/ಸುಳ್ಳನ್ನು/ಕಪಟತನದ ನಡೆನುಡಿಗಳನ್ನು ಬಿಟ್ಟು, ತನ್ನ ವ್ಯಕ್ತಿತ್ವದ ಇತಿಮಿತಿಗಳನ್ನು ಚೆನ್ನಾಗಿ ಅರಿತುಕೊಂಡು ಒಳ್ಳೆಯತನದಿಂದ ಬಾಳುತ್ತಿರುವ ವ್ಯಕ್ತಿಗೆ ದೇವರ ಬಗ್ಗೆ ಕೇವಲ ಮಾತಿನ ಆಡಂಬರಕ್ಕಾಗಿ ಮಾಡುವ ತರ್ಕ ಇಲ್ಲವೇ ಒಣಚರ್ಚೆಗಳ ಅಗತ್ಯವಿರುವುದಿಲ್ಲ. ಏಕೆಂದರೆ ಜನಸಮುದಾಯಕ್ಕೆ ಒಳಿತನ್ನು ಮಾಡುವ ವ್ಯಕ್ತಿಯ ನಡೆನುಡಿಗಳು ದೇವರ ವಿಚಾರಕ್ಕಿಂತಲೂ ದೊಡ್ಡದಾಗಿರುತ್ತವೆ;
ಅರಿವುಳ್ಳಾತಂಗೆ ಅಗ್ಘವಣಿಯ ಹಂಗೇಕೆ=ಜೀವನದಲ್ಲಿ ಇತರರಿಗೆ ಒಳಿತನ್ನು ಮಾಡಬೇಕೆ ಹೊರತು ಯಾವುದೇ ಬಗೆಯಿಂದಲೂ ಕೆಡುಕನ್ನು ಮಾಡಬಾರದು ಎಂಬ ಎಚ್ಚರದಿಂದ ಬಾಳುವ ವ್ಯಕ್ತಿಯ ಪಾಲಿಗೆ ಅರಿವಿನ ನಡೆನುಡಿಯೇ ದೇವರಿಗೆ ಮಾಡುವ ಮಜ್ಜನವಾಗಿರುತ್ತದೆ(ಮಜ್ಜನ=ಸ್ನಾನ/ನೀರನ್ನು ಎರೆಯುವುದು);
ಮನಶುದ್ಧವುಳ್ಳವಂಗೆ ಮಂತ್ರದ ಹಂಗೇಕೆ=ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಒಳ್ಳೆಯ ರೀತಿಯಲ್ಲಿ ಬಾಳುತ್ತಿರುವ ವ್ಯಕ್ತಿಗೆ ಯಾವುದೇ ದೇವರನ್ನು/ದೇವತೆಯನ್ನು ಗುಣಗಾನ ಮಾಡಬೇಕಾದ ಅಗತ್ಯವಿರುವುದಿಲ್ಲ;
ಭಾವಶುದ್ಧವುಳ್ಳವಂಗೆ ಹೂವಿನ ಹಂಗೇಕೆ=ಒಳ್ಳೆಯ ಮನಸ್ಸಿನಿಂದ ಕೂಡಿ ಎಲ್ಲರಿಗೂ ಒಳಿತನ್ನು ಮಾಡುವಂತಹ ವ್ಯಕ್ತಿಯು ದೇವರಿಗೆ ಹೂವನ್ನು ಮುಡಿಸಿ ಪೂಜಿಸಬೇಕಾದ ಅಗತ್ಯವಿಲ್ಲ. ಏಕೆಂದರೆ ಅವನ ಒಳ್ಳೆಯತನದಿಂದ ಕೂಡಿದ ಮನಸ್ಸೇ ದೇವರಿಗೆ ನಿತ್ಯವೂ ನೀಡುವ ಹೂವಾಗಿರುತ್ತದೆ.
