ಲಿಂ.ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿದ್ದಲಿಂಗ ಸ್ವಾಮೀಜಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಜೀಣೋದ್ಧಾರದಲ್ಲಿ ಲಿಂ. ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಸದಾ ಸ್ಮರಣೀಯವಾಗಿದೆ. ಬಸವನಬಾಗೇವಾಡಿಗೆ ಕೊಡುಗೆ ನೀಡಿದ ಮಹನೀಯರನ್ನು ಸದಾ ಸ್ಮರಣೆ ಮಾಡುವದು ಅಗತ್ಯವಿದೆ ಎಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಅಕ್ಕನಾಗಮ್ಮ ಬಾಲಕಿಯರ ಪದವಿ ಪೂರ್ವ ವಿದ್ಯಾಲಯದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವು ಗುರುವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ ಬಸವೇಶ್ವರ ದೇವಾಲಯ ಸಂಸ್ಥೆಯ ಮೂಲ ಸಂಸ್ಥಾಪಕ, ಜೀಣೋದ್ಧಾರಕ ಲಿಂ.ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಲಿಂ.ಸಿಂಹಾಸನರ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ಅಗತ್ಯ ಸಿದ್ಧತೆ ಕೈಗೊಂಡಾಗ ಮಾತ್ರ ಇದನ್ನು ಔಚಿತ್ಯಪೂರ್ವವಾಗಿ ಮಾಡಬಹುದು. ಈ ಕಾರ್ಯಕ್ರಮದಲ್ಲಿ ಹೆಚ್ಚು ಜನತೆ ಭಾಗವಹಿಸುವಂತಾಗಬೇಕು. ಅಭಿವೃದ್ಧಿ ಪ್ರಾಧಿಕಾರವು ಮುಂಬರುವ ದಿನಗಳಲ್ಲಿ ಶ್ರಮಿ ಜೀವಿಗಳನ್ನು ಗುರುತಿಸಿ ಲಿಂ.ಸಿಂಹಾಸನ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವಂತಾಗಬೇಕು. ಮುಂಬರುವ ದಿನಗಳಲ್ಲಿ ಲಿಂ.ಸಿಂಹಾಸನ ಅವರ ಪ್ರತಿಮೆ ಇರುವ ಜಾಗೆಯನ್ನು ಇನ್ನಷ್ಟು ಮೆರಗು ಬರುವಂತೆ ಮಾಡಬೇಕು. ಬಸವ ಜನ್ಮಭೂಮಿಯ ಬಗ್ಗೆ ಕಾಳಜಿ ಹೊಂದಿರುವ ಸಾಹಿತಿ ಮಹಾಂತೇಶ ಸಂಗಮ ಅವರಿಗೆ ಪ್ರಾಧಿಕಾರವು ವಿಶೇಷ ಸ್ಥಾನಮಾನ ಕೊಡುವಂತಾಗಬೇಕೆಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ, ಸಾಹಿತಿ ಮಹಾದೇವ ಬಸರಕೋಡ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಿದವರನ್ನು ಸ್ಮರಣೆ ಮಾಡಿಕೊಂಡರೆ ಅವರ ವ್ಯಕ್ತಿತ್ವ, ಮಾನವೀಯ ಮೌಲ್ಯಗಳು, ಅವರ ಉದಾತ್ತ ಗುಣಗಳು ಜಾಗೃತಗೊಳ್ಳುತ್ತವೆ. ಈ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕವಾಗುತ್ತದೆ. ನೇಕಾರ ಸಮಾಜಕ್ಕೆ ಸೇರಿದ ಲಿಂ. ಮಲ್ಲಪ್ಪ ಸಿಂಹಾಸನ ಅವರ ಮಾಡಿರುವ ಕಾರ್ಯದಿಂದ ಇಲ್ಲಿನ ಜನತೆ ಅವರನ್ನು ಒಪ್ಪಿಕೊಂಡಿರುವದು ಅವರ ಹೃದಯವೈಶ್ಯಾಲತೆಯನ್ನು ಮೆಚ್ಚುವಂತಹದ್ದು. ಲಿಂ.ಸಿಂಹಾಸನರ ಸಾಹಿತ್ಯ ಪ್ರಕಟಣೆಗೆ ಬೇಕಾದ ಸಹಕಾರ ನಮ್ಮ ಅಕಾಡೆಮಿಯಿಂದ ನೀಡುವ ಭರವಸೆ ನೀಡಿದರು.
ಸಾಹಿತಿ ಮಹಾಂತೇಶ ಸಂಗಮ ಮಾತನಾಡಿ, ಲಿಂ.ಸಿಂಹಾಸನ ಅವರ ಪ್ರತಿಮೆಗೆ ದೂಳು ಆವರಿಸುವದರಿಂದಾಗಿ ಇದರ ಸುತ್ತಲೂ ಪ್ರಾಧಿಕಾರವು ಗ್ಲಾಸ್ ಅಳವಡಿಸಿ ಇದರ ಮೆರಗನ್ನು ಹೆಚ್ಚಿಸುವಂತೆ ಕ್ರಮ ತೆಗೆದುಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಇವರ ಪುಣ್ಯಸ್ಮರಣೆ ಅದ್ದೂರಿಯಾಗಿ ನಡೆಯುವಂತಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ತಹಸೀಲ್ದಾರ ಜೆ.ಎಸ್.ಚಿನಿವಾಲರ ಮಾತನಾಡಿ,ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರು ನಮಗಾಗಿ ಮಾಡಿದ ಕೆಲಸಗಳು ನಮ್ಮೊಂದಿಗೆ ಹೋಗುತ್ತವೆ. ಇತರಿಗಾಗಿ ಮಾಡಿದ ಕೆಲಸಗಳು ನಿರಂತರವಾಗಿ ಇರುತ್ತವೆ ಎಂದು ಒಂದೆಡೆ ಹೇಳಿದ್ದಾರೆ.ಇದು ತುಂಬಾ ಅರ್ಥಗರ್ಭಿತವಾಗಿದೆ. ಇದನ್ನು ನಾವೆಲ್ಲರೂ ಅರಿತುಕೊಂಡು ಮುನ್ನೆಡೆಯಬೇಕು. ಲಿಂ.ಸಿಂಹಾಸನ ಮಾಡಿರುವ ಕಾರ್ಯ ಸ್ಮರಣಾರ್ಹವಾಗಿದೆ. ಅವರ ಪ್ರತಿಮೆಗೆ ಗ್ಲಾಸ್ ಅಳವಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಆಯುಕ್ತರ ಗಮನಕ್ಕೆ ತರಲಾಗುವುದು ಎಂದರು.
ನಿವೃತ್ತ ಪ್ರಾಚಾರ್ಯ ಸುರೇಶಗೌಡ ಪಾಟೀಲ ಮಾತನಾಡಿದರು. ಡಾ.ಸೌಭಾಗ್ಯ ಗುಬ್ಬಾ ಅವರು ಲಿಂ.ಮಲ್ಲಪ್ಪ ಸಿಂಹಾಸನ ಕುರಿತು ಮಾತನಾಡಿದರು.
ಎಸ್.ಎಸ್.ಹಡಪದ ಸ್ವಾಗತಿಸಿದರು. ಬಸವರಾಜ ನಂದಿಹಾಳ ನಿರೂಪಿಸಿದರು. ಎ.ಎಂ.ಸಿಂದಗಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ದೇವಸ್ಥಾನದ ಹೊರ ಆವರಣದಲ್ಲಿರುವ ಲಿಂ.ಮಲ್ಲಪ್ಪ ಸಿಂಹಾಸನ ಅವರ ಪ್ರತಿಮೆಗೆ ಪೂಜೆ, ಪುಷ್ಪಾರ್ಚನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಗಳು, ಸಿಂಹಾಸನ ಅವರ ವಂಶಸ್ಥರು, ವಿವಿಧ ಗಣ್ಯರು, ದೇವಸ್ಥಾನ ಸಿಬ್ಬಂದಿ ಇತರರು ಇದ್ದರು.

