ಬಾಬಾನಗರ ಗ್ರಾಮದಲ್ಲಿ ಪಂಚಾಯತ್ ರಾಜ್ ದಿನಾಚರಣೆ & ದುಡಿಯೋಣ ಬಾ ಅಭಿಯಾನ ಆಯೋಜನೆ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಈ ಬೇಸಿಗೆ ಅವಧಿಯಲ್ಲಿ ನರೇಗಾ ಕೂಲಿಕಾರರಿಗೆ ವಲಸೆಯನ್ನು ತಪ್ಪಿಸಿ ನಿರಂತರವಾಗಿ ಅವರ ಗ್ರಾಮದಲ್ಲಿಯೇ ೧೦೦ ದಿನಗಳ ಉದ್ಯೋಗ ಒದಗಿಸಲು ಮಾ.೧೫ ರಿಂದ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಯಲ್ಲಿ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ಕಲ್ಲಪ್ಪ ನಂದರಗಿ ಹೇಳಿದರು.
ತಾಲೂಕಿನ ಬಾಬಾನಗರ ಗ್ರಾಪಂ ನಲ್ಲಿ ಹಮ್ಮಿಕೊಂಡ ಪಂಚಾಯತ್ ರಾಜ್ ದಿನಾಚರಣೆ & ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನರೇಗಾ ಕೂಲಿಕಾರರಿಗೆ ತೊಂದರೆಯಾಗದಂತೆ ಕೂಲಿಯಾಧಾರಿತ ಸಮುದಾಯ ಕಾಮಗಾರಿಗಳಲ್ಲಿ ಹೆಚ್ಚಿನ ಕೆಲಸ ನೀಡಲಾಗುತ್ತದೆ. ರಾಜ್ಯ ಸರಕಾರದ ಆದೇಶದಂತೆ ಕೆಲಸದ ಪ್ರಮಾಣದಲ್ಲಿ ೩೦% ವಿಶೇಷ ರಿಯಾಯತಿ ನೀಡಲಾಗಿದೆ ಜೊತೆಗೆ ಹಿರಿಯ ನಾಗರಿಕರಿಗೆ, ವಿಶೇಷಚೇತನರಿಗೆ ೫೦% ವರೆಗೂ ಕೆಲಸದಲ್ಲಿ ರಿಯಾಯಿತಿ ನೀಡಲಾಗುತ್ತಿದೆ ಎಂದು ನಂದರಗಿ ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯ ಪ್ರಕಾಶ ಆಯತವಾಡ ಮಾತನಾಡಿ ಬೇಸಿಗೆ ಅವಧಿಯಲ್ಲಿ ಮಾತ್ರವಲ್ಲದೇ ಕೂಲಿ ಕೇಳಿ ಬರುವ ಎಲ್ಲ ಕೂಲಿಕಾರರಿಗೆ ೧೦೦ ದಿನಗಳ ಕೆಲಸ ನೀಡಲು ಗ್ರಾಮ ಪಂಚಾಯತಿ ಸಿದ್ಧವಾಗಿದೆ ಎಂದರು.
ಗ್ರಾಮ ಪಂಚಾಯತಿ ಕಾರ್ಯದರ್ಶಿ ಸಿ.ಬಿ.ಕೋಲಕಾರ ಪ್ರತಿಜ್ಞಾ ವಿಧಿ ಭೋಧಿಸಿದರು.
ವೇದಿಕೆಯ ಮೇಲೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಅಶೋಕ ರುದ್ರಗೌಡರ, ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ಕಲ್ಲಪ್ಪ ನಂದರಗಿ, ಕಾರ್ಯದರ್ಶಿ ಸಿ.ಬಿ.ಕೊಲಕಾರ, ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ ಆಯತವಾಡ, ಶ್ರೀಕಾಂತ ಭಜಂತ್ರಿ, ಸಂಪನ್ಮೂಲ ವ್ಯಕ್ತಿ ರಮೇಶ ಭಜಂತ್ರಿ, ಗ್ರಾಮ ಕಾಯಕ ಮಿತ್ರ ಈರಮ್ಮ ಭೊಮ್ಮನಹಳ್ಳಿ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಕಾಯಕ ಬಂಧುಗಳು ಸೇರಿ ಇತರರು ಹಾಜರಿದ್ದರು.

