ಯಾಳವಾರ ಗ್ರಾಪಂ ವ್ಯಾಪ್ತಿಯ ನಾಗರಾಳ ಡೋಣ ಪುನರ್ವಸತಿ ಕೇಂದ್ರದಲ್ಲಿ ನಿರ್ಮಿಸುತ್ತಿರುವ ಕುಡಿಯುವ ನೀರಿನ ಟ್ಯಾಂಕ್
ಮೊದಲ ಪುಟ
ದೇವರಹಿಪ್ಪರಗಿ: ನಾಗರಾಳ ಡೋಣ ಪುನರ್ವಸತಿ ಕೇಂದ್ರದಲ್ಲಿ ನಿರ್ಮಿಸುತ್ತಿರುವ ಕುಡಿಯುವ ನೀರಿನ ಟ್ಯಾಂಕ್ ಸ್ಥಳವನ್ನು ಬದಲಾಯಿಸಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಪಿಡಿಓ ಮಲ್ಲಿನಾಥ ಮಸಳಿ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಯಾಳವಾರ ಗ್ರಾಮ ಪಂಚಾಯಿತಿಗೆ ಬುಧವಾರ ತೆರಳಿದ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಟ್ಯಾಂಕ್ ನಿರ್ಮಾಣದ ಕುರಿತು ಗಮನ ಸೆಳೆದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ವಕ್ತಾರ ಚನ್ನಪ್ಪಗೌಡ ಬಿರಾದಾರ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ನಾಗರಾಳಡೋಣ ಪುನರ್ವಸತಿ ಕೇಂದ್ರದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಈ ಸ್ಥಳದಲ್ಲಿ ಟ್ಯಾಂಕ್ ನಿರ್ಮಿಸುವುದರಿಂದ ಸುತ್ತಮುತ್ತಲಿನ ಮನೆಗಳು ಮತ್ತು ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತದೆ. ಜೊತೆಗೆ ಟ್ಯಾಂಕ್ ತುಂಬಿ ಹೊರಹೋಗುವ ಹೆಚ್ಚಾದ ನೀರಿನಿಂದ ಸ್ಥಳೀಯ ಪ್ರದೇಶ ರಾಡಿಮಯವಾಗಲಿದೆ. ಅಲ್ಲದೇ ಸುತ್ತಲಿನ ಜಮೀನುಗಳಲ್ಲಿ ನೀರು ನಿಂತು ಬೆಳೆಹಾನಿ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಗ್ರಾಮಸ್ಥರು ಈ ಕುರಿತು ಮನವಿ ಮಾಡಿದ್ದು, ಕೂಡಲೇ ಟ್ಯಾಂಕ್ ನಿರ್ಮಾಣದ ಸ್ಥಳ ಬದಲಾಯಿಸಿ ಸಾರ್ವಜನಿಕರ ಮನವಿಗೆ ಸ್ಪಂದಿಸಲು ವಿನಂತಿಸುತ್ತೇವೆ. ಒಂದು ವೇಳೆ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.
ತಾಲ್ಲೂಕಾಧ್ಯಕ್ಷ ಸಿದ್ರಾಮಪ್ಪ ಅವಟಿ, ಸಿಂದಗಿ ತಾಲ್ಲೂಕಾಧ್ಯಕ್ಷ ಸಂತೋಷ ಮನಗೂಳಿ, ಭೀಮನಗೌಡ ಪಾಟೀಲ, ಬಸಪ್ಪ ಯಾಳವಾರ, ಬಸನಗೌಡ ಪಾಟೀಲ, ಯಮನಪ್ಪ ಢಳಗೊಂಡ, ಶಿವಲಿಂಗಪ್ಪಗೌಡ ಬಿರಾದಾರ, ಸಿದ್ದಪ್ಪ ಕುಮಟಗಿ, ಬಸವಂತ ತಳವಾರ, ಅಶೋಕ ಬಾಗೇವಾಡಿ, ಬಸಪ್ಪ ಚಲವಾದಿ, ಚಂದಪ್ಪ ಕಾಡಪ್ಪಗೋಳ, ಮಲಕಪ್ಪ ಕುರುಬರ, ಬಾಪು ಯಾಳವಾರ ಇದ್ದರು.