ದೇವರಹಿಪ್ಪರಗಿ ತಾಲ್ಲೂಕಿನ ಕೋರವಾರ ಹಾಗೂ ವರ್ಕಾನಳ್ಳಿ ಗ್ರಾಮದ ರೈತರಿಗೆ ಬೆಳೆವಿಮೆ ವಿತರಣೆಯಲ್ಲಿ ಮೋಸ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕೋರವಾರ ಹಾಗೂ ವರ್ಕಾನಳ್ಳಿ ಗ್ರಾಮಗಳ ರೈತರಿಗೆ ಬೆಳೆವಿಮೆ ವಿತರಣೆಯಲ್ಲಿ ಮೋಸ ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಪದಾಧಿಕಾರಿಗಳು ಉಪತಹಶೀಲ್ದಾರ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಬುಧವಾರ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಪದಾಧಿಕಾರಿಗಳು ವಿಮೆಯ ಮೋಸದ ಕುರಿತು ಗಮನ ಸೆಳೆದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಆಯ್.ಎಸ್.ಕುಳೇಕುಮಟಗಿ ಮಾತನಾಡಿ, ಕೋರವಾರ ವ್ಯಾಪ್ತಿಯಲ್ಲಿ ೧೨೦೦ರಿಂದ ೧೫೦೦ ರಷ್ಟು ರೈತರು ಬೆಳೆ ವಿಮೆ ತುಂಬಿದ್ದು, ಇವರ ಪೈಕಿ ಕೇವಲ ೬೨ ರೈತರಿಗೆ ಮಾತ್ರ ವಿಮೆ ಬಿಡುಗಡೆಯ ಮಾಹಿತಿಯಿದೆ. ಇದರಲ್ಲಿ ೨೦ ಜನ ರೈತರ ಖಾತೆಗೆ ಹಣ ಜಮೆಯಾಗದೇ ಕೇವಲ ಶಿವರಾಜ ಸಂಗಪ್ಪ ಅಮರಖೇಡ ಎಂಬುವವರ ಒಬ್ಬರ ಖಾತೆಗೆ ಹಣ ಜಮೆ ಮಾಡಲಾಗಿದೆ. ಇದರಿಂದ ೨೦ ರೈತರು ಕಂಗಾಲಾಗಿದ್ದು, ಜಮೆಯ ಕಾರ್ಯದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ವಿಮಾ ಅಧಿಕಾರಿಗಳು, ಬೆಳೆಯ ಸಮೀಕ್ಷೆ ಮಾಡಿದ ಸಿಬ್ಬಂದಿ ನೇರವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಬೆಳೆವಿಮೆಯ ಮೋಸದ ಕುರಿತು ದಿ: ೧೯ ರಂದು ಮನವಿ ಮಾಡಿ ಗಮನ ಸೆಳೆದರೂ ಕೂಡಾ ತಾವು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದೆಯೂ ಸಹ ತಾವು ಯಾವುದೇ ಕ್ರಮಕ್ಕೆ ಮುಂದಾಗದೇ ಇದ್ದಲ್ಲಿ ಜಿಲ್ಲೆಯ ಎಲ್ಲ ರೈತರು ಸೇರಿ ತಮ್ಮ ಕಾರ್ಯಾಲಯದ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಳ್ಳಬೇಕಾಗುವುದು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.
ತಾಲ್ಲೂಕು ಗೌರವಾಧ್ಯಕ್ಷ ಶಿವಾನಂದಯ್ಯ ಹಿರೇಮಠ, ಸಂಪತ್ ಜಮಾದಾರ, ಜಾನು ಗುಡಿಮನಿ, ಮಲ್ಲಪ್ಪ ಸುಂಬಡ, ಸುಭಾಸ ಸಜ್ಜನ, ಮಲ್ಲನಗೌಡ ಬಿರಾದಾರ, ಅಶೋಕ ನಾಯ್ಕೋಡಿ, ಸಂಗಪ್ಪಗೌಡ ಬಿರಾದಾರ, ಲಕ್ಕಪ್ಪ ಹೂಗಾರ, ಮಾಂತಪ್ಪ ಸುಂಬಡ, ಶಿವಪ್ಪ ತಾಳಿಕೋಟಿ ಇದ್ದರು.

