ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಿಂದ ಇವಣಗಿ ಗ್ರಾಮದ ಕೂಡುರಸ್ತೆಯವರೆಗೂ ರಸ್ತೆ ಎರಡು ಬದಿಯಿರುವ ಪಾದಚಾರಿ ರಸ್ತೆಯಲ್ಲಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆ ಮಂಗಳವಾರ ಪುರಸಭೆಯಿಂದ ಬೆಳಗ್ಗೆ ೬.೩೦ ಗಂಟೆಯಿಂದ ಆರಂಭವಾಗಿ ಮಧ್ಯಾನ್ಹ ೧೨ ಗಂಟೆಯವರೆಗೂ ನಡೆಯಿತು.
ಪಾದಚಾರಿ ರಸ್ತೆಗೆ ಹೊಂದಿಕೊಂಡಂತೆ ಇದ್ದ ವಿವಿಧ ಹಣ್ಣಿನ ಅಂಗಡಿ, ಹೊಟೇಲ್, ಚಹಾದಂಗಡಿ, ಎಗ್ಗರೈಸ್ ಅಂಗಡಿ ಸೇರಿದಂತೆ ವಿವಿಧ ಗೂಡಂಗಡಿಗಳನ್ನು ಈಗಾಗಲೇ ಈ ಹಿಂದೆ ಪುರಸಭೆಯಿಂದ ಎರಡು-ಮೂರು ಸಲ ಕಾರ್ಯಾಚರಣೆ ಮಾಡಿ ತೆರವು ಮಾಡಲಾಗಿತ್ತು. ಮತ್ತೆ ಗೂಡಂಗಡಿಗಳು ತಲೆ ಎತ್ತಿದ್ದ ಪರಿಣಾಮ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ನೇತೃತ್ವದಲ್ಲಿ ಮಂಗಳವಾರ ಮತ್ತೆ ಗೂಡಂಗಡಿಗಳ ತೆರವು ಕಾರ್ಯಾಚರಣೆ ಜರುಗಿತು. ಗೂಡಂಗಡಿಗಳ ಮಾಲೀಕರು ಇಲ್ಲದೇ ಇರುವ ಗೂಡಂಗಡಿಗಳನ್ನು ತೆರವುಗೊಳಿಸಿ ಮೆಗಾಮಾರುಕಟ್ಟೆಯಲ್ಲಿ ಪುರಸಭೆ ಸಿಬ್ಬಂದಿ ತೆಗೆದುಇಟ್ಟರು. ಸ್ಥಳದಲ್ಲಿದ್ದ ಗೂಡಂಗಡಿ ಮಾಲೀಕರು ತಮ್ಮ ತಮ್ಮ ಅಂಗಡಿಗಳನ್ನು ತೆರವು ಮಾಡಿಕೊಳ್ಳುವದು ಕಂಡುಬಂದಿತ್ತು. ಪಿಐ ಗುರುಶಾಂತ ದಾಶ್ಯಾಳ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಪುರಸಭೆಯಿಂದ ಎರಡು-ಮೂರು ಸಲ ಪಾದಚಾರಿಗೆ ಹೊಂದಿಕೊಂಡಿದ್ದ ಗೂಡಂಗಡಿಗಳ ತೆರವು ಕಾರ್ಯಾಚರಣೆ ಮಾಡಲಾಗಿದೆ. ಹಿಂದೆ ತೆರವು ಕಾರ್ಯಾಚರಣೆ ಕೈಗೊಂಡಾಗ ಅವರಿಗೆ ಮೆಗಾ ಮಾರುಕಟ್ಟೆ ಪಕ್ಕದಲ್ಲಿ ಅಂಗಡಿಗಳನ್ನು ಹಾಕಿಕೊಳ್ಳಲು ಜಾಗೆ ಗುರುತಿಸಲಾಗಿತ್ತು. ಅಲ್ಲಿ ತಮ್ಮ ಅಂಗಡಿಗಳನ್ನು ಹಾಕಿಕೊಳ್ಳುವಂತೆ ತಿಳಿಸಲಾಗಿತ್ತು. ತೆರವು ಕಾರ್ಯಾಚರಣೆ ಮಾಡಿದರೂ ಮತ್ತೆ ಪಾದಚಾರಿ ರಸ್ತೆಗೆ ಹೊಂದಿಕೊಂಡಂತೆ ಗೂಡಂಗಡಿಗಳನ್ನು ಹಾಕಿಕೊಂಡಿದ್ದರಿಂದ ಮತ್ತೆ ವಾಹನಗಳ ಸಂಚಾರಕ್ಕೆ, ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರಿಂದಾಗಿ ಮತ್ತೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತೆ ಗೂಡಂಗಡಿಗಳನ್ನು ಹಾಕಿದರೆ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಗೂಡಂಗಡಿಯವರು ಪುರಸಭೆಯೊಂದಿಗೆ ಸಹಕಾರ ನೀಡುವ ಮೂಲಕ ತಮಗೆ ನಿಗದಿ ಪಡಿಸಿದ ಜಾಗೆಯಲ್ಲಿ ತಮ್ಮ ಅಂಗಡಿಗಳನ್ನು ಹಾಕಿಕೊಂಡು ತಮ್ಮ ವ್ಯಾಪಾರ-ವಹಿವಾಟು ಮಾಡಬೇಕು. ಅವರ ಅಂಗಡಿಗಳು ಮೆಗಾಮಾರುಕಟ್ಟೆ ಪಕ್ಕದಲ್ಲಿವೆ ಎಂಬುವದು ಕೆಲದಿನಗಳಲ್ಲಿ ಗ್ರಾಹಕರಿಗೆ ಗೊತ್ತಾಗುತ್ತದೆ ಎಂಬುವದನ್ನು ಗೂಡಂಗಡಿಯವರು ತಿಳಿದುಕೊಳ್ಳಬೇಕಿದೆ ಎಂದರು.
ತೆರವು ಕಾರ್ಯಾಚರಣೆಯಲ್ಲಿ ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಅಭಿಯಂತರ ಮಹಾದೇವ ಜಂಬಗಿ,ಆರೋಗ್ಯ ನಿರೀಕ್ಷಕ ವಿಜಯಕುಮಾರ ವಂದಾಲ, ರಾವುತ ಮ್ಯಾಗೇರಿ, ರಾಜು ರಾಠೋಡ, ಗುರು ಮಾಗಾವಿ, ಆನಂದ ಸೇರಿದಂತೆ ಇತರರು ಇದ್ದರು.