ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮ ಸೇರಿದಂತೆ ವಿವಿಧೆಡೆ ಅಬ್ಬರದ ಗಾಳಿ, ಗುಡುಗು-ಸಿಡಿಲು ಮಂಗಳವಾರ ಸಂಜೆ ಕಂಡುಬಂದಿತ್ತಾದರೂ ಹೇಳಿಕೊಳ್ಳುವಷ್ಟು ಮಳೆಯಾಗಿಲ್ಲ. ತಾಲೂಕಿನ ಇಂಗಳೇಶ್ವರ ಗ್ರಾಮದ ಹೊರವಲಯದಲ್ಲಿ ಮುದ್ದೇಬಿಹಾಳ ತಾಲೂಕಿನ ಕೊಪ್ಪ ಎಲ್ಟಿ ಗ್ರಾಮದಿಂದ ಉಳ್ಳಾಗಡ್ಡಿ ಆರಿಸುವ ಕೆಲಸಕ್ಕೆಂದು ಬಂದಿದ್ದ ಸುನೀತಾ ಕಾಂತೇಶ ಲಮಾಣಿ(34) ಎಂಬುವವರಿಗೆ ಅಬ್ಬರದ ಗಾಳಿಯಿಂದ ಹಾರಿ ಬಂದ ತಗಡಿನ ಶೆಡ್ ಶೀಟ್ ಮಹಿಳೆಯ ಕುತ್ತಿಗೆಗೆ ಬಡಿದ ಪರಿಣಾಮ ಮಹಿಳೆಯು ಮೃತ ಪಟ್ಟ ಘಟನೆ ಜರುಗಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸ್ ಠಾಣೆಯ ಪಿಐ ಗುರುಶಾಂತ ದಾಶ್ಯಾಳ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

