ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಪ್ರಧಾನಮಂತ್ರಿ ಕುಸುಮ-ಬಿ ಮತ್ತು ಸಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದ್ದು, ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರಧಾನಮಂತ್ರಿ ಕುಸುಮ ಸಿ ಯೋಜನೆ ಅನುಷ್ಠಾನಗೊಳಿಸಿ ರೈತರಿಗೆ ನಿರಂತರವಾಗಿ ಏಳು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಹೆಸ್ಕಾಂ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕುಸುಮ-ಬಿ ಯೋಜನೆಯಡಿ ೧೬೪ ನೀರಾವರಿ ಪಂಪಸೆಟ್ಗಳ ಪೈಕಿ ೨೭ ನೀರಾವರಿ ಪಂಪಸೆಟ್ಗಳಿಗೆ ಸೌರಶಕ್ತಿ ಚಾಲಿತ ಪಂಪಸೆಟ್ಗಳನ್ನು ಅಳವಡಿಸಲಾಗಿದೆ. ಉಳಿದ ಫಲಾನುಭವಿಗಳ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಯಿಂದ ರೈತರಿಗೆ ಹಗಲು ವೇಳೆಯಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಸೌರಮಿತ್ರ ಪೋರ್ಟಲ್ ಮೂಲಕ ೨೨೯೫ ರೈತರು ಸೋಲಾರ್ ಪಂಪಸೆಟ್ ಅಳವಡಿಸಿಕೊಳ್ಳಲು ನೊಂದಾಯಿಸಿಕೊಂಡಿದ್ದು, ಸ್ಥಳಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ.
ಪ್ರಧಾನಮಂತ್ರಿ ಕುಸುಮ-ಸಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ೧೭ ವಿದ್ಯುತ್ ಉಪ ಕೇಂದ್ರಗಳ ಮೂಲಕ ೪೦ ವಿದ್ಯುತ್ ಮಾರ್ಗಗಳನ್ನು ಸೌರೀಕರಣ ಮಾಡಲು ಉದ್ಧೇಶಿಸಿ, ೮೭.೭೧ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ದಿನಾಂಕ : ೨೯-೦೩-೨೦೨೫ರಂದು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ೧೧೦/೧೧ ಕೆವ್ಹಿ ಚಡಚಣ ವಿದ್ಯುತ್ ಉಪ ಕೇಂದ್ರದಲ್ಲಿ ಒಂದು ೧೧ ಕೆವ್ಹಿ ಮಾರ್ಗವನ್ನು ಸೌರೀಕರಣಗೊಳಿಸಿ ಚಾಲನೆಗೊಳಿಸಲಾಗಿದೆ. ಇದರಿಂದ ೨.೭೭ ಮೆಗಾ ವ್ಯಾಟ್ ಉತ್ಪಾದನೆಯಾಗಿದೆ. ಹಗಲು ವೇಳೆಯಲ್ಲಿ ನಿರಂತರವಾಗಿ ಏಳು ತಾಸು ನೀರಾವರಿ ಮಾರ್ಗಕ್ಕೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
