ಸಂಕನಾಳ ಶಾಖಾ ಕಾಲುವೆಯಿಂದ ಹೂವಿನಹಿಪ್ಪರಗಿ ಹೋಬಳಿ ವ್ಯಾಪ್ತಿಯಲ್ಲಿ ಇನ್ನೂ ಬಾಕಿಯಿರುವ ೨ ಕಿ.ಮೀ ವಿತರಣಾ ಕಾಲುವೆ ನಿರ್ಮಾಣಕ್ಕೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಮುಳವಾಡ ಏತ ನೀರಾವರಿ ಯೋಜನೆಯ ಸಂಕನಾಳ ಶಾಖಾ ಕಾಲುವೆಯಿಂದ ಹೂವಿನಹಿಪ್ಪರಗಿ ಹೋಬಳಿ ವ್ಯಾಪ್ತಿಯಲ್ಲಿ ಇನ್ನೂ ಬಾಕಿಯಿರುವ ೨ ಕಿ.ಮೀ ವಿತರಣಾ ಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಮಂಗಳವಾರ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿತು.
ಇಲ್ಲಿಯ ರಾಮಲಿಂಗೇಶ್ವರ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಲಾಯಿತು. ಹಲಗೆ ವಾದನ, ಎತ್ತುಗಳೊಂದಿಗೆ ಮೆರವಣಿಗೆ ನಡೆಯಿತು.
ಧರಣಿನಿರತರನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಅರವಿಂದ ಕುಲಕರ್ಣಿ, ಕಳೆದ ತಿಂಗಳು ಹೋರಾಟ ಮಾಡಿದಾಗ ೧೫ ದಿನಗಳಲ್ಲಿ ಬಾಕಿ ಉಳಿದ ವಿತರಣಾ ಕಾಲುವೆಯ ಕಾಮಗಾರಿ ಆರಂಭಿಸುವ ಬಗ್ಗೆ ಕೆಬಿಜೆಎನ್ಎಲ್ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಒಂದು ತಿಂಗಳು ಗತಿಸಿದರೂ ಇನ್ನೂ ಕಾಮಗಾರಿ ಆರಂಭಿಸಿಲ್ಲ, ಸುಳ್ಳು ಹೇಳಿ ರೈತರ ದಾರಿತಪ್ಪಿಸುತ್ತಿದ್ದಾರೆ, ಬೇಸಿಗೆಯಲ್ಲಿ ಹಳ್ಳಿಗಳಲ್ಲಿ ಜಾನವಾರುಗಳಿಗೆ ಕುಡಿಯುವ ನೀರು ಸಿಗದೇ ೩ ರಿಂದ ೪ ಕಿ.ಮೀ ವರೆಗೆ ದನ ಕರುಗಳನ್ನು ಹೊಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ, ಅದಕ್ಕಾಗಿ ಜಾನುವಾರುಗಳನ್ನು ಕಚೇರಿ ಮುಂದೆ ತೆಗೆದುಕೊಂಡು ಬಂದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಬಾಕಿ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ, ಆ ಭಾಗದ ಕಾನ್ನಾಳ, ಸಂಕನಾಳ, ಬ್ಯಾಲ್ಯಾಳ, ಅಗಸಬಾಳ, ನರಸಲಗಿ, ಸೋಲವಾಡಗಿ, ಜಾಯವಾಡಗಿ, ಖಾಜಿ ಅಗಸಬಾಳ ಈ ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದೆ ಎಂದು ಆರೋಪಿಸಿದರು.
ಕಾಮಗಾರಿ ಆರಂಭಿಸುವವರೆಗೂ ಅಹೋರಾತ್ರಿ ಧರಣಿ ಹಿಂದಕ್ಕೆ ಪಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ ವಾಲೀಕಾರ ಮಾತನಾಡಿ, ಬಾಕಿ ಉಳಿದಿರುವ ವಿತರಣಾ ಕಾಲುವೆ ಕಾಮಗಾರಿ ಪ್ರಾರಂಭಿಸಿ ೮ ಹಳ್ಳಿಗಳಿಗೆ ನೀರು ಕೊಡದಿದ್ದರೆ ಗ್ರಾಮಕ್ಕೆ ಹೋಗುವದಿಲ್ಲ ಉಪವಾಸ ಬಿದ್ದು ಸಾಯಲು ಸಿದ್ಧರಿದ್ದೇವೆ ಎಂದರು. ಪ್ರತಿಭಟನೆಯಲ್ಲಿ ಹಣಮಂತ ಕುಲಗುಕರ್ uಟಿಜeಜಿiಟಿeಜ ಸೋಮೇಶ ನಾಗರೆಡ್ಡಿ, ಮಾರುತಿ ಹೂಗಾರ, ಶೇಖಪ್ಪ ಹೊಸೂರ, ಯಮನಪ್ಪ ಧರ್ಮಗಿರಿ, ಅಶೋಕ ಹಚಡದ, ಶಿವಪ್ಪ ವಾಲಿಕಾರ, ಮಲಿಗೆಪ್ಪ ನಾಟೀಕಾರ, ಶಂಕರಗೌಡ ಬಿರಾದಾರ, ಬಸವರಾಜ ಹಡಪದ, ಶ್ರವಣ ಮಾದರ, ಮುತ್ತಪ್ಪ ಹೂಗಾರ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಜಾನುವಾರುಗಳೊಂದಿಗೆ ಧರಣಿ ಆರಂಭಿಸಿದ್ದಾರೆ.

