ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಹುಣಶ್ಯಾಳ ಗ್ರಾಮದ ಕ್ರಾಸ್ನಿಂದ ಗುತ್ತಿ ಬಸವಣ್ಣ ಕಾಲುವೆಯವರೆಗಿನ ರಸ್ತೆ ಡಾಂಬರು ಕಾಣದೇ ಸಂಪೂರ್ಣ ಹಾಳಾಗಿದ್ದು ಕೂಡಲೇ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಲ್ಲೂಕಿನ ಹುಣಶ್ಯಾಳ ಗ್ರಾಮದ ಗ್ರಾಮಸ್ಥರು ಮಂಗಳವಾರ ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹ ಪಡಿಸಿದ್ದಾರೆ.
ಗ್ರಾಮದಿಂದ ಕಾಲುವೆಯವರೆಗಿನ ೫.೫ ಕಿ.ಮೀ ಸಂಪೂರ್ಣ ಹಾಳಾಗಿದೆ. ಇಲ್ಲಿ ಖಾಸಗಿ ವಾಹನ ಅಥವಾ ದ್ವಿಚಕ್ರವಾಹನಗಳ ಮೂಲಕ ಸಂಚರಿಸುವವರ ಪರಿಸ್ಥಿತಿ ಹೇಳತೀರದಾಗಿದೆ. ತಗ್ಗು ದಿನ್ನೆಗಳಿಂದ ಕೂಡಿದ ರಸ್ತೆಯಲ್ಲಿ ವಾಹನಗಳು ಧೂಳ ಎಬ್ಬಿಸುತ್ತಾ, ತೆವಳುತ್ತಾ ನಿಧಾನವಾಗಿ ಚಲಿಸಿದರೆ, ಅದರಲ್ಲಿ ಕುಳಿತವರು ಬೆಳಿಗ್ಗೆ ಶುಭ್ರಬಟ್ಟೆಗಳೊಂದಿಗೆ ಹೊರಟವರು ಧೂಳುಮಯವಾಗಿ ಮರಳುವಂತಾಗಿದೆ. ಇನ್ನೂ ಆನೆಮಡು, ಸಲಾದಹಳ್ಳಿ, ಚಟ್ನಳ್ಳಿ, ಅಸಂತಾಪೂರ ಗ್ರಾಮಗಳಿಂದ ಪಂಚಾಯಿತಿ ನಿತ್ಯ ಅಗತ್ಯ ಕೆಲಸಗಳಿಗೆ ಬರುವವರು ಸಹ ರಸ್ತೆಯನ್ನು ಕಂಡು ಪಂಚಾಯಿತಿಗೆ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.
ಗ್ರಾಮದಿಂದ ಕಲಬುರಗಿ, ಯಾದಗಿರಿ, ಆಲಗೂರ, ಗೋಲಗೇರಿ, ಮಳ್ಳಿ, ಕೆಂಭಾವಿ, ಯಡ್ರಾಮಿ, ಶಹಾಪೂರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯೇ ಇದಾಗಿದ್ದು ಇಲ್ಲಿ ನಿತ್ಯ ನೂರಾರು ವಾಹನಗಳು, ದ್ವಿಚಕ್ರ ಸವಾರರು ಪ್ರಯಾಣಿಸುತ್ತಾರೆ. ಇವರ ನಿತ್ಯ ಕೆಲಸಗಳಿಗೆ ಹಾಗೂ ಮುಖ್ಯವಾಗಿ ಸುಗಮ ರಸ್ತೆ ಪ್ರಯಾಣಕ್ಕೆ ಸುಸಜ್ಜಿತ ರಸ್ತೆ ಅಗತ್ಯವಾಗಿದೆ.
ಗ್ರಾಮದ ರಸ್ತೆಗೆ ಲೋಕೋಪಯೋಗಿ ಅಧಿಕಾರಿಗಳು, ಕ್ಷೇತ್ರದ ಶಾಸಕರು ಒಂದು ಬಾರಿ ಖುದ್ದಾಗಿ ಬಂದು ರಸ್ತೆಯ ಅನುಭವ ಪಡೆದು ನಂತರವಾದರೂ ರಸ್ತೆ ನಿರ್ಮಿಸಲು ಮುಂದಾಗಬೇಕು ಎಂದು ತಾಲ್ಲೂಕು ಭೂನ್ಯಾಯ ಮಂಡಳಿ ಸದಸ್ಯ ಮೈನೂದ್ಧಿನ್ ಬಾಗವಾನ, ಶಫೀಕ್ ಸಿಪಾಯಿ, ಶಂಕ್ರೆಪ್ಪ ಬಂಗಾರಗುಂಡ, ಶಕೀಲ್ ಪೊಲಾಚಿ, ಮಹಮ್ಮದ್ ಬಾಗವಾನ, ಮಾಂತೇಶ ಮುರುಕನಾಳ, ಸುಭಾಸರೆಡ್ಡಿ ದೇಸಾಯಿ, ಶರಣಗೌಡ ಪಾಟೀಲ, ಇಬ್ರಾಹಿಂ ಹವಾಲ್ದಾರ್ ಆಗ್ರಹಿಸಿದ್ದಾರೆ.

