ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಡಾ.ಬಸವರಾಜ ಕನಮಡಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವಿಜಯಪುರ ತಾಲ್ಲೂಕಿನ ವತಿಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ೭ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮವು ಏ.೨೬ ರಿಂದ ಜೂನ್ ೦೪ ರವರೆಗೆ ನಡೆಯಲಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿಗಳಾದ (ಆಡಳಿತ) ಡಾ.ಬಸವರಾಜ ಕನಮಡಿ ತಿಳಿಸಿದ್ದಾರೆ.
ಕಾಲುಬಾಯಿ ಲಸಿಕೆ ಕಾರ್ಯಕ್ರಮದೊಂದಿಗೆ ಚರ್ಮಗಂಟು ರೋಗದ ವಿರುದ್ದ ಲಸಿಕೆಯನ್ನು ಉಚಿತವಾಗಿ ಹಾಕಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿಜಯಪುರ ತಾಲ್ಲೂಕಿನಲ್ಲಿ ದನಗಳು-೧೦೦೬೯, ಎಮ್ಮೆಗಳು-೧೩೧೭೦ ಒಟ್ಟು ೨೩೨೩೯ ವಾಸ್ತವ ಜಾನುವಾರುಗಳಿದ್ದು, ಲಸಿಕೆದಾರರು-೧ ಮತ್ತು ಲಸಿಕೆದಾರರು-೨ ಒಟ್ಟು ೫೦ ಜನ ಲಸಿಕೆದಾರರಿದ್ದು, ಮೇಲ್ವಿಚಾರಕರಾಗಿ ೪ ಜನ ಪಶುವೈದ್ಯಾಧಿಕಾರಿಗಳಿದ್ದಾರೆ.
ವಿಜಯಪುರ ಉಪವಿಭಾಗಾಧಿಕಾರಿಗಳಾದ ಗುರುನಾಥ್ ದಡ್ಡೆ ಹಾಗೂ ತಾಲ್ಲೂಕು ಉಸ್ತುವಾರಿ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರು ಏ.೨೨ ರಂದು ಲಸಿಕಾ ಅಭಿಯಾನದ ಕರಪತ್ರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಡಾ|| ಸುಜಾತ ಎಸ್.ಎಂ, ಡಾ|| ಬಾಳಾಸಾಹೇಬ ಬ ಭಂಡಿ, ಡಾ.ರಮೇಶ ರಾಠೋಡ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

