ಬಿಎಲ್ಡಿಇ ಸಂಸ್ಥೆ ಪ್ರ.ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯ ಸರ್ಕಾರ ಆಯುರ್ವೇದ ಮಹಾವಿದ್ಯಾಲಯಕ್ಕೆ ಕೋಟೆಗೋಡೆ ಪಕ್ಕದಲ್ಲಿ ಲೀಸ್ ಆಧಾರದ ಮೇಲೆ 17ಎಕರೆ 20ಗುಂಟೆ ಜಮೀನನ್ನು ಮಂಜೂರು ಮಾಡಿದ್ದು, ಈ ಜಮೀನಿನಲ್ಲಿ ಅಂದಾಜು 1ಎಕರೆ 10ಗುಂಟೆ ಜಾಗೆಯಲ್ಲಿ ಈಗಾಗಲೇ ಕೆಲವರು ಕಾನೂನು ಬಾಹಿರವಾಗಿ ಅತೀಕ್ರಮಣ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಬಾಕಿ ಉಳಿದಿರುವ 16ಎಕರೆ 10ಗುಂಟೆ ಸರ್ಕಾರಿ ಆಸ್ತಿಯನ್ನು ಕಾಪಾಡಿಕೊಳ್ಳುವುದು ಲೀಸ್ ಪಡೆದ ಬಿ.ಎಲ್.ಡಿ.ಇ ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ಕೆಲವು ವ್ಯಕ್ತಿಗಳು “ಈ ಕೋಟೆಗೋಡೆಯಲ್ಲಿ ಚಾಲುಕ್ಯರ ಕಾಲದ ಸ್ವಯಂಭು ದೇವಸ್ಥಾನ ಇದೆ. ಬಿ.ಎಲ್.ಡಿ.ಇ ಸಂಸ್ಥೆಯವರು ಹಿಂದು ದೇವಸ್ಥಾನದ ಮೇಲೆ ದಾಳಿ ಮಾಡಿ, ದೇವಸ್ಥಾನದ ಜಾಗವನ್ನು ಅತೀಕ್ರಮಿಸಿ, ಅಕ್ರಮ ಕಟ್ಟಡ ಕಟ್ಟಿ, ಷಡ್ಯಂತ್ರ ಮಾಡಿದ್ದಾರೆ” ಎಂದು ಅಪಪ್ರಚಾರ ಮಾಡುತ್ತಿದ್ದು, ಇದು ವಾಸ್ತವಕ್ಕೆ ದೂರ ಎಂದು ತಿಳಿಸಿದ್ದಾರೆ.
ವಾಸ್ತವವಾಗಿ ವಿಜಯಪುರದ ಆದಿಲ್ ಶಾಹಿ ಅರಸರ ಕೋಟೆಗೋಡೆಗೆ ಹೊಂದಿಕೊಂಡು ಸಿ.ಟಿ.ಎಸ್ ನಂ:605ಎ/1ಎ ಕ್ಷೇತ್ರ 2ಎಕರೆ, 20ಗುಂಟೆ ಮತ್ತು ಸಿ.ಟಿ.ಎಸ್ ನಂ:605ಎ/1ಎ/1ಎ/2 ಕ್ಷೇತ್ರ 15ಎಕರೆ ಹೀಗೆ ಒಟ್ಟು ಆಸ್ತಿ 17ಎಕರೆ, 20 ಗುಂಟೆ ಪ್ರದೇಶ ಸರ್ಕಾರಿ ಜಾಗವನ್ನು 30 ವರ್ಷಗಳ ಅವಧಿಗೆ ಆಯುರ್ವೇದ ಮಹಾವಿದ್ಯಾಲಯ ಸಮಿತಿಗೆ ಸರ್ಕಾರದಿಂದ ಲೀಸ್ ನೀಡಲಾಗಿದೆ. 2011 ನೇ ವರ್ಷದಲ್ಲಿ ಆಯುರ್ವೇದ ಮಹಾವಿದ್ಯಾಲಯ ಸಮಿತಿ ಬಿ.ಎಲ್.ಡಿ.ಇ ಸಂಸ್ಥೆಯಲ್ಲಿ ವಿಲೀನಗೊಂಡಿದೆ. ಸಂಸ್ಥೆ ವಿಲೀನದ ನಂತರ ಸರ್ಕಾರದಿಂದ ಮತ್ತೆ ಬಿ.ಎಲ್.ಡಿ.ಇ ಸಂಸ್ಥೆಗೆ 30 ವರ್ಷಗಳ ಕಾಲ ಲೀಸ್ ಮುಂದುವರೆಸಲಾಗಿದೆ. ಸರ್ಕಾರ ಸಂಸ್ಥೆಗೆ ನೀಡಿದ ಆಸ್ತಿಯನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಆಗಿದೆ. ಸರ್ಕಾರ ಆಯುರ್ವೇದ ಮಹಾವಿದ್ಯಾಲಯಕ್ಕೆ ಲೀಸ್ ನೀಡಿದ ಆಸ್ತಿಯಲ್ಲಿ ಮುರಾಣಕೇರಿಯ ನಿವಾಸಿಗಳಿಂದ ಹಾಗೂ ಇತರೆ ಎರಡು ಕಡೆ 1ಎಕರೆ 10ಗುಂಟೆ ಜಮೀನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿಕೊಂಡಿರುತ್ತಾರೆ. ಸಂಸ್ಥೆಗೆ ಸೇರಿದ ಸರ್ಕಾರಿ ಜಾಗೆಯನ್ನು ಅತೀಕ್ರಮಣ ಮಾಡಿಕೊಂಡಿರುವವರನ್ನು ಅಲ್ಲಿಂದ ತೆರವುಗೊಳಿಸುವಂತೆ ಸಂಬಂಧಿಸಿದವರಿಗೆ ನಾನು ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಐತಿಹಾಸಿಕ ಕೋಟೆಗೋಡೆ ಭಾರತ ಸರ್ಕಾರದ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎ.ಎಸ್.ಐ) ವ್ಯಾಪ್ತಿಗೆ ಬರುತ್ತದೆ. ಅವರ ನಿಯಮಗಳು ಕಠಿಣವಾಗಿವೆ. ಐತಿಹಾಸಿಕ ದಾಖಲೆಗಳು, ಶಾಸನಗಳು ಆಧರಿಸಿ ಈ ದೇವಸ್ಥಾನದ ಖಚಿತತೆ ಕುರಿತು ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಕ್ರಮ ಜರುಗಿಸುವಂತೆ ಸಂಸ್ಥೆ ವತಿಯಿಂದಲೇ ಕೋರಿದ್ದೇವೆ. ಅದು ಸತ್ಯಾಂಶಗಳಿಂದ ಕೂಡಿದ್ದರೆ ಪ್ರಾಚ್ಯವಸ್ತು ಇಲಾಖೆ ಅದನ್ನು ಸಂರಕ್ಷಿಸಲಿದೆ. ಸಂಸ್ಥೆ ವತಿಯಿಂದ ಅದಕ್ಕೆ ಎಲ್ಲ ಸಹಕಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಬಿ.ಎಲ್.ಡಿ.ಇ ಸಂಸ್ಥೆ ಎಲ್ಲ ಜಾತಿ-ಜನಾಂಗದ ಸದಸ್ಯರಿರುವ ಈ ಭಾಗದ ಅತೀ ದೊಡ್ಡ ಲಿಂಗಾಯತ ಶಿಕ್ಷಣ ಸಂಸ್ಥೆಯಾಗಿದ್ದು, ಕಾಲ-ಕಾಲಕ್ಕೆ ನಮ್ಮ ಸಂಸ್ಥೆ ಆಸ್ತಿಗಳನ್ನು ಹಲವಾರು ದೇವಾಲಯಗಳಿಗೆ ಈ ಹಿಂದೆ ನಾವಾಗಿಯೇ ಬಿಟ್ಟುಕೊಟ್ಟಿರುವ ಉದಾಹರಣೆಗಳು ಇವೆ. ಹೀಗಾಗಿ, ಬೇರೆಯವರ ಆಸ್ತಿಯನ್ನು ಪಡೆದುಕೊಳ್ಳುವುದು, ಅದರ ಮೇಲೆ ಹಕ್ಕು ಚಲಾಯಿಸುವುದು ನಮ್ಮ ಸಂಸ್ಥೆಯ ಇತಿಹಾಸದಲ್ಲಿಯೇ ಇಲ್ಲ ಎಂದು ಸುನೀಲಗೌಡ ಪಾಟೀಲ ಸ್ಪಷ್ಟೀಕರಣ ನೀಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಪದೇ-ಪದೇ ಸಾಮಾಜಿಕ ಜಾಲತಾಣಗಳಲ್ಲಿ ಬಿ.ಎಲ್.ಡಿ.ಇ ಸಂಸ್ಥೆ, ಆಡಳಿತ ಮಂಡಳಿಯ ಕುರಿತು ಹಗುರವಾಗಿ ಸುಳ್ಳು ಸುದ್ದಿಗಳನ್ನು ತೇಲಿ ಬಿಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದೇವೆ ಎಂದು ಸುನೀಲಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

