ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರು ಮತ್ತು ಭಾರತೀಯ ವಕೀಲರ ಪರಿಷತ್ ಸಹ ಅಧ್ಯಕ್ಷರು, ಹಿರಿಯ ನ್ಯಾಯವಾದಿ ಸದಾಶಿವರೆಡ್ಡಿ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಕರೆ ನೀಡಿದ ಪ್ರತಿಭಟನೆ ಬೆಂಬಲಿಸಿ ಸೋಮವಾರ ಬೆಳಗ್ಗೆ ಸ್ಥಳೀಯ ವಕೀಲರ ಸಂಘದ ಅಧ್ಯಕ್ಷ ಎನ್.ಎಸ್.ಬಿರಾದಾರ ಅವರ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ವಕೀಲರು ಮೌನ ಪ್ರತಿಭಟನೆ ನಡೆಸಿ ನಂತರ ತಹಸಿಲ್ದಾರ ಕಚೇರಿಗೆ ತೆರಳಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಪತ್ರವನ್ನು
ಕಚೇರಿಯ ಸಿಬ್ಬಂದಿ ಬಸವರಾಜ ದಾನಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಮಲ್ಲಿಕಾರ್ಜುನ ದೇವರಮನಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂರು ಅಂಗಗಳಲ್ಲಿ ಒಂದಾದ ನ್ಯಾಯಾಂಗ ಅಂಗವು ನಾಡಿನ ಹಿರಿಮೆ ಪ್ರತೀಕವಾಗಿದೆ.. ಇಂತಹ ನ್ಯಾಯಾಂಗ ಅಂಗದಲ್ಲಿ ನ್ಯಾಯ ವಿಲೇವಾರಿ ಪ್ರಕ್ರಿಯೆಯಲ್ಲಿ ವಕೀಲರ ಪಾತ್ರ ದೊಡ್ಡದಾಗಿದೆ. ವಕೀಲರ ಮೇಲೆ ಅವ್ಯಾಹತವಾಗಿ ಹಲ್ಲೆ-ದೌರ್ಜನ್ಯಗಳು ನಡೆದಿರುವದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ತನ್ನ ಕಕ್ಷಿದಾರರ ಪರವಾಗಿ ಹಾಜರಾಗಿ ತನ್ನ ಕಕ್ಷಿದಾರರಿಗೆ ನ್ಯಾಯ ಒದಗಿಸುವ ಕಾರ್ಯಕ್ಕೆ ವಿಘ್ನವನ್ನುಂಟು ಮಾಡುವ ದುಷ್ಟಶಕ್ತಿಗಳು ಅಟ್ಟಹಾಸ ಮೆರೆಯುತ್ತಿರುವದು ಖಂಡನೀಯವಾಗಿದೆ. ಕೂಡಲೇ ರಾಜ್ಯ ಸರ್ಕಾರ ಇಂತಹ ದುಷ್ಟಶಕ್ತಿಗಳನ್ನು ಮಟ್ಟಹಾಕಬೇಕೆಂದು ಆಗ್ರಹಿಸಿದರು.
ಹಿರಿಯ ವಕೀಲರಾದ ಸದಾಶಿವ ರೆಡ್ಡಿ ಅವರು ತಮ್ಮ ಕಚೇರಿಯಲ್ಲಿ ಕಾರ್ಯನಿರ್ವಹಿಸುವಾಗ ಇದೇ ೧೬ರಂದು ಬೆಳಗ್ಗೆ ೮-೩೦ಗಂಟೆಗೆ ಕೈಯಲ್ಲಿ ಪ್ಲಾಸ್ಟಿಕ್ ಪೈಪ್ಗಳನ್ನು ಹಿಡಿದುಕೊಂಡು ಅತಿಕ್ರಮಣ ಪ್ರವೇಶ ಮಾಡಿ ಹಲ್ಲೆ ಮಾಡಿದ ಅಪರಿಚಿತ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು ಅಲ್ಲದೆ ರಾಜ್ಯ ಸರಕಾರವೂ ವಕೀಲರ ಮೇಲೆ ನಡೆಯುವ ಹಲ್ಲೆಗಳನ್ನು ಗಂಭೀರವಾಗಿ ತೆಗೆದುಕೊಂಡು ಹೇಯಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎನ್.ಎಸ್.ಬಿರಾದಾರ, ಉಪಾಧ್ಯಕ್ಷ ಸಿ.ಎಂ.ಹಡಪದ, ಹಿರಿಯ ನ್ಯಾಯವಾದಿ ಎ.ಎಸ್.ಕೋಲಕಾರ, ವಕೀಲರಾದ ಎಂ.ಎಸ್.ಬಿರಾದಾರ, ಜಿ.ಎನ್.ಬೇವಿನಮರದ, ಎಂ.ಬಿ.ಮನಗೂಳಿ, ಬಿ.ಎಸ್.ಕಳ್ಳಿಗುಡ್ಡ, ಆರ್.ಎಸ್.ಪವಾರ, ಅವ್ವಣ್ಣ ಪಾಟೀಲ, ಪ್ರಕಾಶ ಸಲಗರ, ಸಂತೋಷ ಹೆಗಡ್ಯಾಳ, ಕುಮಾರ ಚವ್ಹಾಣ ಇತರರು ಇದ್ದರು.

