ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾನೂನು ಎಲ್ಲರಿಗೂ ಸಮಾನವಾದದ್ದು, ಸಂವಿಧಾನ ರಚನೆ ಎಲ್ಲರ ಜವಾಬ್ದಾರಿ ದೇಶದ ಸಾರ್ವಭೌಮತ್ವವನ್ನು ಕಾಪಾಡುವುದು ನಮ್ಮ ಕರ್ತವ್ಯ. ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳನ್ನು ಪಾಲಿಸುವುದರಿಂದ ದೇಶದಲ್ಲಿ ಶಾಂತಿ ನೆಲಸಲಿದೆ ಎಂದು ಉಪನ್ಯಾಸಕಿ ವಿದ್ಯಾ ಕಲ್ಯಾಣಶೆಟ್ಟಿ ಹೇಳಿದರು.
ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಸಭೆಯ ಜಿಲ್ಲಾ ಘಟಕದವರ ವತಿಯಿಂದ ಹಮ್ಮಿಕೊಂಡಿದ್ದ ಶಿವಾನುಭವಗೋಷ್ಠಿಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರರ ಬದುಕು ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು ದೇಶದ ಏಳ್ಗೆಗಾಗಿ ಸಮಾಜದಲ್ಲಿ ಸಮಾನತೆಯ ಹಕ್ಕು, ಸ್ವಾತಂತ್ರö್ಯ, ಅಭಿವ್ಯಕ್ತಿ ಮತ್ತು ಗೌರವಯುತವಾಗಿ ಜೀವನ ನಡೆಸಲು ಸಂವಿಧಾನ ಒದಗಿಸಿಕೊಟ್ಟಿದ್ದು ಅದರ ಆಶಯದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ವವ್ಯವಾಗಿದೆ. ನಮ್ಮ ಸಾಂಸ್ಕೃತಿ, ಧರ್ಮ ಇತಿಹಾಸವನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಂಡು ನಡೆಯಬೇಕು ಎಂದು ಕರೆ ನೀಡಿದರು.
ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ ಸಮಾಜದ ಪರಿಸರ ಅಂದಿನ ವಿಚಾರ ಮನೋಸ್ಮೃತಿಯ ಸಂಸ್ಕಾರ ಬದುಕಿನ ದೌರ್ಜನ್ಯಗಳಿಂದ ಅನುಭವಿಸಿ ದಲಿತ ನಾಯಕನಾಗಿ ಸರ್ವರ ಕಲ್ಯಾಣಕ್ಕಾಗಿ ಶಕ್ತಿ ತುಂಬಲು ಬದುಕನ್ನು ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ಹಿಂದೂ ಧರ್ಮದ ಬಗ್ಗೆ ಅಭಿಮಾನವಿಟ್ಟು ಬೌದ್ಧ ಧರ್ಮವನ್ನು ಸ್ವೀಕಾರಮಾಡಿದವರು ಅಂಬೇಡ್ಕರ ಹೀಗಾಗಿ ಸಂವಿಧಾನ ಶಿಲ್ಪಿ ಎಂದು ಕರೆಯಲ್ಪಟ್ಟರು. ಇಂದು ನಾವು ಕರ್ತವ್ಯಗಳನ್ನು ನೆನಪಿಸಿಕೊಳ್ಳಬೇಕು. ಅದರಂತೆ ಮುನ್ನಡೆಯಬೇಕೆಂದರು.
ಮುಖ್ಯ ಅತಿಥಿ ಅಪ್ಪಾಸಾಹೇಬ ಎಸ್. ಕೋರಿ ಮಾತನಾಡಿದರು. ಸಹದೇವ ನಾಡಗೌಡರ, ಎಂ.ಜಿ. ಯಾದವಾಡ, ಮಲ್ಲಿಕಾರ್ಜುನ ಅಮರಣ್ಣವರ, ಡಾ. ಸಂಗಮೇಶ ಮೇತ್ರಿ, ದೊಡ್ಡಣ್ಣ ಭಜಂತ್ರಿ, ಡಾ. ವಿ.ಡಿ. ಐಹೊಳ್ಳಿ ದಂಪತಿ, ಡಾ. ಎಂ.ಎಸ್. ಮಾಗಣಗೇರಿ, ಮಹಾದೇವ ಹಾಲಳ್ಳಿ, ಜಗದೀಶ ಮೋಟಗಿ, ತ್ರಿವೇಣಿ ಬುರ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ನಿರ್ದೇಶಕ ವಿಠ್ಠಲ ತೇಲಿ ವಂದಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮಹಿಳೆಯರು, ಶರಣರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

