ಪ್ರಗತಿಪರ ಚಿಂತಕಿ ಮತ್ತು ಖ್ಯಾತ ಲೇಖಕಿ ಡಾ.ಎಚ್.ಎಸ್.ಅನುಪಮಾ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮಾಜ ಬದಲಾವಣೆ ಆಗಬೇಕಾದರೆ ಅದು ಕಾನೂನಿನ ಮೂಲಕವೇ ಸಾಧ್ಯ ಎಂದು ಉತ್ತರ ಕನ್ನಡ ಜಿಲ್ಲೆಯ ಪ್ರಗತಿಪರ ಚಿಂತಕಿ ಮತ್ತು ಖ್ಯಾತ ಲೇಖಕಿ ಡಾ.ಎಚ್.ಎಸ್.ಅನುಪಮಾ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸ್ನಾತಕ ವಿಭಾಗದಲ್ಲಿ (ಎನ್.ಇ.ಪಿ) ಆಯೋಜಿಸಿದ್ದ, ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತ್ಯೋತ್ಸವ ಅಂಗವಾಗಿ ‘ಡಾ.ಬಿ.ಆರ್.ಅಂಬೇಡ್ಕರ ಮತ್ತು ಮಹಿಳೆ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದು ಸಮಾಜದ ಸೌಖ್ಯ ಮತ್ತು ಪ್ರಗತಿಗೆ ಮಹಿಳೆಯರ ಸಬಲೀಕರಣ ಅತೀ ಅಗತ್ಯವಾದದ್ದು. ಮಹಿಳೆಯರಿಗೆ ಸಮರ್ಪಕ ಶಿಕ್ಷಣ, ಉತ್ತಮ ಆರೋಗ್ಯ ಸೇವೆ, ಆರ್ಥಿಕ ಸ್ವಾವಲಂಬನೆ ಮತ್ತು ತೀರ್ಮಾನಾತ್ಮಕ ಹಕ್ಕುಗಳನ್ನು ನೀಡಿದಾಗ ಮಾತ್ರ ಸಮಾನತೆಯ ಪರಿಕಲ್ಪನೆಗೆ ನಿಜವಾದ ಅರ್ಥ ದೊರೆಯುತ್ತದೆ. ಮಹಿಳೆಯರ ಸಬಲೀಕರಣದಿಂದ ಅವರು ತಮ್ಮ ಕುಟುಂಬ ಅಲ್ಲದೆ ಸಮುದಾಯದ ಬೆಳವಣಿಗೆಗೂ ಪ್ರಮುಖ ಶಕ್ತಿಯಾಗಿ ಪರಿಣಮಿಸುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕ ವಿಭಾಗದ ಸಂಯೋಜಕಿ ಡಾ. ಜಿ.ಸೌಭಾಗ್ಯ ಮಾತನಾಡಿ, ಇಡೀ ಮಹಿಳಾ ಸಮುದಾಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಸ್ಪಷ್ಟವಾಗಿ ಹಾಗೂ ವಿವರವಾಗಿ ವಿವರಿಸಿದರು. ಅಂಬೇಡ್ಕರ್ ಅವರ ಸಮಾಜ ಪರಿವರ್ತನೆಗೆ ಸಂಬಂಧಿಸಿದ ದೃಷ್ಟಿಕೋನವನ್ನು ಹಾಗೂ ಮಹಿಳಾ ಸಬಲೀಕರಣದಲ್ಲಿ ಅವರ ಪಾತ್ರವನ್ನು ಉತ್ತೇಜನಾತ್ಮಕವಾಗಿ ಪ್ರಸ್ತುತಪಡಿಸಿದರು. ಜೊತೆಗೆ, ಯುಜಿ ಹಾಗೂ ಪಿಜಿ ಬೋಧಕ ಮತ್ತು ಬೋಧಕೇಕರ ಸಂಘಟನಾತ್ಮಕ ಹೋರಾಟಗಾರರೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ತೇಜಸ್ವಿನಿ ನಾಯಕ ಪ್ರಾರ್ಥನಾ ಗೀತೆ ಹಾಡಿದರು. ಗೌತಮಿ ನಾಟಿಕಾರ ಭೀಮಗೀತೆ ಹಾಡಿದರು. ತಬಸೂಮ್ ಅಂಬೇಡ್ಕರ್ ಕುರಿತು ಭಾಷಣ ಮಾಡಿದರು, ಚನ್ನಮ್ಮ ಕಂಬಾರ ನಿರೂಪಿಸಿದರು, ಅರ್ಚನಾ ವಂದಿಸಿದರು.

