ರಚನೆ
ಡಾ.ಶಶಿಕಾಂತ ಪಟ್ಟಣ
ರಾಮದುರ್ಗ
ಉದಯರಶ್ಮಿ ದಿನಪತ್ರಿಕೆ
ಐವತ್ತು ವರ್ಷದ ಹಿಂದೆ
ಶಾಲೆ ಬಿಟ್ಟು ನಾನು
ಸಂಜೆ ಮನೆಗೆ ಬರುವಾಗ
ಹಾವಾಡಿಗ ಪುಂಗಿ ಊದಿ
ತಟ್ಟೆಯೊಡ್ಡಿ ಭಿಕ್ಷೆ ಬೇಡುತ್ತಿದ್ದುದು
ನನಗಿನ್ನೂ ನೆನಪಿದೆ
ಬೆಳಿಗ್ಗೆ ಮನೆ ಮುಂದೆ
ದುರುಗ ಮುರುಗಿ ಚಾಟಿ ಬೀಸಿ
ಮೈ ಮೇಲೆ ಬಾಸು೦ಡೆ ಎಬ್ಬಿಸಿ
ಬಗ್ಗಿ ದೇವತೆಗೆ ಕೈಮುಗಿದು
ಜೋಳ ಕಾಳು ಮರದ ತುಂಬಾ
ಅಕ್ಕಿ ಗೋದಿಗೆ ಜೋಳಿಗೆ ಒಡ್ಡಿದ್ದು
ನನಗಿನ್ನೂ ನೆನಪಿದೆ
ಹೆಣ್ಣು ಮಕ್ಕಳಿಗೆ ಮುತ್ತು ಕಟ್ಟಿ
ಬೇವಿನ ಸೊಪ್ಪು ಹೊದಿಸಿ
ಕೋಣ ಕಡೆದು ಊಟ ಹಾಕಿ
ದೇವಿಯ ಹೆಸರಿನಲ್ಲಿ
ಶ್ರೀಮಂತರ ತೋಟದ ಮನೆಗೆ
ಹಾದರಕ್ಕೆ ತಳ್ಳುವುದು
ನನಗಿನ್ನೂ ನೆನಪಿದೆ
ಗುಡಿಯ ಮುಂದೆ ಮುಳ್ಳಾವುಗೆ ಹತ್ತಿ
ಗಲ್ಲದಲ್ಲಿ ಮೈಗೆ ಅಸ್ತ್ರವ ಹಾಕಿ
ದೇಹದಲ್ಲಿ ಚುಚ್ಚಿ ರಕ್ತ ಸುರಿಸಿ
ಕೆಂಡದ ಗುಂಡದಲ್ಲಿ ಬರಿಗಾಲಿನಲಿ
ದೇವರ ಹೊತ್ತು ಪಾದ ಸುಡಿಸಿ
ಉನ್ಮಾದ ಉತ್ಸಾಹದಿ ಕುಣಿದದ್ದು
ನನಗಿನ್ನೂ ನೆನಪಿದೆ
ಜಾತ್ರೆ ದೇವರ ಉತ್ಸವದ ನೆಪದಲ್ಲಿ
ತೇರು ಎಳೆದು ಕಾಯಿ ತುರಾಡಿ
ದುಡ್ಡು ಎತ್ತಿ ಅಡ್ಡ ಪಲ್ಲಕ್ಕಿ
ಸಾರೊಟಗಿ ಮೆರವಣಿಗೆ
ನಾಟಕ ಮೋಜು ಮಸ್ತಿ
ಓಕುಳಿ ಕುಸ್ತಿ ಎತ್ತಿನ ಓಟ
ನನಗಿನ್ನೂ ನೆನಪಿದೆ
ಬದಲಾವಣೆ ಪರಿವರ್ತನೆ
ಭರವಸೆಯ ಭಾಷಣ
ಬಡವರ ಬಗೆಗಿನ ಕಾಳಜಿ
ಉದ್ಯೋಗ ಖಾತ್ರಿ ಹಲವು ಯೋಜನೆ
ಸಬ್ ಕಾ ಸಾಥ್ ಸಬ್ ಕಾ ವಿಕಾಸ
ಗರೀಭಿ ಹಠಾವೊ ಘೋಷಣೆ
ನನಗಿನ್ನೂ ನೆನಪಿದೆ
