ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಬುಧವಾರ ನಗರದ ವಿವಿಧೆಡೆ ದಿಢೀರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದಲ್ಲಿರುವ ಐತಿಹಾಸಿಕ ಬಾವಡಿಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ವಾರ್ಡ ನಂಬರ್ ೨೦ರಲ್ಲಿ ಬರುವ ಬಡಿ ಬಾವಡಿಯ ಸ್ವಚ್ಛತೆ ಹಾಗೂ ಕಲುಷಿತ ನೀರು ಸೇರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.ಈ ಬಾವಿಯ ನೀರನ್ನು ಉದ್ಯಾನವನ ಹಾಗೂ ದಿನಬಳಕೆಗೆ ಉಪಯೋಗಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಾರ್ಡ್ ೨೨ರಲ್ಲಿ ಬರುವ ಜಿಲ್ಲಾ ಪಂಚಾಯತ ಕಛೇರಿ ಎದುರುಗಡೆ ಇರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ, ತಹಶೀಲ್ದಾರ ಕಛೇರಿಯ ಹಿಂಭಾಗದಲ್ಲಿರುವ ಹಾಗೂ ಬಾಲ ಭವನ ಆವರಣದಲ್ಲಿರುವ ಮೂರು ತೆರೆದ ಬಾವಿಗಳನ್ನು ಪರಿಶೀಲಿಸಿದ ಅವರು, ಬಾವಿಯಲ್ಲಿರುವ ಹೂಳನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಬೇಕು. ನೀರನ್ನು ಉದ್ಯಾನವನ ಮತ್ತು ಕುಡಿಯಲು ಹೊರತುಪಡಿಸಿ, ದಿನಬಳಕೆಗೆ ಉಪಯೋಗಿಸಲು ಕ್ರಮ ವಹಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
ನಗರದ ಝೋನ-೨೧ರ ವಾರ್ಡ್ ನಂ.೨೦ರಲ್ಲಿ ಬರುವ ಬಡಿ ಬಾವಡಿ ಹತ್ತಿರದಲ್ಲಿರುವ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದನ್ನು ಪರಿಶೀಲಿಸಿದ ಅವರು ಬಿಸಿಲಿನ ತಾಪಮಾನ ಹೆಚ್ಚಿಗಿರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಸಮರ್ಪಕವಾಗಿ ನೀರನ್ನು ಸಬರಾಜು ಮಾಡುವಂತೆಯೂ, ಕುಡಿಯುವ ನೀರು ಪೋಲಾಗದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತೆ ಅವರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು.
ಬಾಲ ಭವನದ ಹತ್ತಿರವಿರುವ ಗಾಂಧಿ ಭವನ ಪರಿಶೀಲಿಸಿದ ಅವರು, ಆವರಣದ ಸ್ವಚ್ಛತೆಗೆ ಆದ್ಯತೆ, ಭವನದಲ್ಲಿರುವ ಉದ್ಯಾನವನ, ಶೌಚಾಲಯ ಹಾಗೂ ಇನ್ನೀತರ ಬಳಕೆಗೆ ಅನುಕೂಲವಾಗುವಂತೆ ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ, ತಹಶೀಲ್ದಾರರಾದ ಪ್ರಶಾಂತ ಚನಗೊಂಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ ದೈವಾಡಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.