ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರಾಥಮಿಕ ಶಿಕ್ಷಣವೇ ಮೂಲ ತಾಯಿ ಬೇರು ಎಂದು ಹೇಳಲಾಗುತ್ತಿತ್ತು ಇಂದು ಅನುಪಾದಕ ಕ್ಷೇತ್ರವಾಗಿದೆ ಇಂತಹ ಸಂದರ್ಭದಲ್ಲಿಯು ಗುಣಾತ್ಮಕ ಶಿಕ್ಷಣ ನೀಡಲು ಹೊರಟಿರುವ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹಂದಿಗನೂರ ಸರಕಾರಿ ಪ್ರೌಡಶಾಲೆಯ ಮುಖ್ಯಗುರು ಎಸ್.ಕೆ.ಗುಗ್ಗರಿ ಹೇಳಿದರು.
ಸಿಂದಗಿ ಸಮೀಪದ ಕೋರವಾರ ಗ್ರಾಮದ ವೀರಭದ್ರೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸರಸ್ವತಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಶಾರದೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನ ಎಲ್ಲ ಧರ್ಮಗ್ರಂಥಗಳು ಸದಾ ಸತ್ಯವನ್ನು ಪ್ರತಿಪಾದಿಸಿವೆ. ಸತ್ಯಕ್ಕೆ ಯಾವಾಗಲು ಜಯವಿದೆ. ಹಾಗಾಗಿ ಮಕ್ಕಳು ಸದಾ ಸತ್ಯವನ್ನೆ ಹೇಳಬೇಕು. ಮಕ್ಕಳಿಗೆ ಶಾಲೆಯಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ದೊರೆಯುತ್ತದೆ ಎಂದರು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಂಗಳೂರಿನ ಎಚ್ಡಿಎಫ್ಸಿ ಬ್ಯಾಂಕಿನ ಉಪಾಧ್ಯಕ್ಷ ದೇವರಾಜಗೌಡ ಪೊಲೀಸಪಾಟೀಲ ಮಾತನಾಡಿ, ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಅಲ್ಲಿ ದೇವಾನು ದೇವತೆಗಳು ನೆಲೆಸುತ್ತಾರೆ. ತೊಟ್ಟಿಲು ತೂಗುವ ಕೈ ಇಡೀ ಜಗತ್ತನ್ನೇ ತೂಗ ಬಲ್ಲಳು. ಹೆಣ್ಣು ಸಮಾಜದ ಕಣ್ಣು. ಇಂತಹ ಅನೇಕ ಉದಾಹರಣೆಗಳನ್ನು ತಾಯಂದಿರಿಗೆ ಕೊಟ್ಟಿದ್ದಾರೆ. ಅವರು ಮನಸ್ಸು ಮಾಡಿದ್ದಾದರೇ ಜಗತ್ತಿನ ಚಿತ್ರಣವನ್ನೇ ಬದಲಿಸಬಲ್ಲರು. ಇಂತಹ ಹೆಣ್ಣು ಮಗಳು ಒಂದು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ನವ ಸಮಾಜ ನಿರ್ಮಾಣ ಮಾಡಿದಂತಾಗಿದೆ ಎಂದು ಬಣ್ಣೀಸಿದರು.
ಶಾರದೋತ್ಸವ ಕಾರ್ಯಕ್ರಮವನ್ನು ಗ್ರಾಪಂ ಅದ್ಯಕ್ಷರ ಪ್ರತಿನಿಧಿ ರಫೀಕ ಬ್ಯಾಕೋಡ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಗಮ್ಮ ಮಠ, ಜಯಶ್ರೀ ಪೊಲೀಸಪಾಟೀಲ, ಅಂಜನಾ ಕುಲಕರ್ಣಿ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಹಂದಿಗನೂರ ಶಾಲೆಯ ಮುಖ್ಯಗುರು ವಿ.ಆರ್.ಕುಲಕರ್ಣಿ, ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ ಛಾಯಾಗೋಳ, ಕಾಂಚನಾ ನಾಗರಬೆಟ್ಟ, ಭೀಮನಗೌಡ ಕಡಕೋಳ, ಮಾದೇವ ರಾಮನಳ್ಳಿ, ರುಕುಮಪಟೇಲ ವಡಗೇರಿ, ಶರಣಗೌಡ ಪಾಟೀಲ, ಸುಭಾಷಗೌಡ ಪಾಟೀಲ, ಸಂಸ್ಥೆಯ ಅದ್ಯಕ್ಷ ಡಾ.ಶಿವನಗೌಡ ಪೋಲಿಸಪಾಟೀಲ, ಕಾರ್ಯದರ್ಶಿ ರೂಪಾ ಪಾಟೀಲ, ಸುನೀತಾ ಕುಳೇಕುಮಟಗಿ, ಕಸಾಪ ಅದ್ಯಕ್ಷ ಶಿವು ಬಡಾನೂರ, ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ, ಈರಪ್ಪಸಾಹುಕಾರ ಕುಳೇಕುಮಟಗಿ, ಈರನಗೌಡ ಪೊಲೀಸಪಾಟೀಲ, ಶಾಂತಾಬಾಯಿ ಬಿರಾದಾರ, ಹೆಡ್ ಕಾನ್ಸಟೆಬಲ್ ಶಿವಲಿಂಗಪ್ಪ ಬತಗೌಡ, ಸುರೇಶಗೌಡ ಪೋ.ಪಾಟೀಲ, ಪತ್ರಕರ್ತರ ಸಂಘದ ಅದ್ಯಕ್ಷ ಪಂಡಿತ ಯಂಪೂರೆ ಸೇರಿದಂತೆ ಅನೇಕರು ಇದ್ದರು.
ಈ ವೇಳೆ ಶಾಲೆಯ ಮಕ್ಕಳ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮಗಳು ಜನಮನ ಸೂರುಗೊಂಡವು.
ಕಾವ್ಯ ನಾಗರಬೆಟ್ಟ, ಭಾಗ್ಯಶ್ರೀ ಪಾಟೀಲ ಪ್ರಾರ್ಥಿಸಿದರು. ಅಶ್ವಿನಿ ಪಾಟೀಲ ವರದಿ ವಾಚಿಸಿದರು. ಪ್ರಾಧ್ಯಾಪಕ ಮಹಾಂತೇಶ ನೂಲಾನವರ ಹಾಗೂ ಐಶ್ವರ್ಯ ನಿರೂಪಿಸಿದರು. ಚಂದ್ರಶೇಖರ ನಾಗರಬೆಟ್ಟ ವಂದಿಸಿದರು.