ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬರುವ ಮಾರ್ಚ 21 ರಿಂದ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷೆಯು ನಕಲು ಮುಕ್ತವಾಗಿ ನಡೆಯುವಂತೆ ಸೂಕ್ತ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಹೊರ ಬರದಂತೆ ಎಚ್ಚರ ವಹಿಸಬೇಕು ಎಂದು ತಹಶಿಲ್ದಾರ ಪ್ರಶಾಂತ ಚನಗೊಂಡ ಹೇಳಿದರು.
ನಗರದ ಜಿಪಂ ಸಮೀಪ ಅಗಸ್ತ್ಯ ಪೌಂಡೇಶನ ಸಭಾಭವನದಲ್ಲಿ ಜಿಲ್ಲಾ ಪಂಚಾಯತ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯ ವಿಜಯಪುರ ವತಿಯಿಂದ ಮುಖ್ಯ ಅಧೀಕ್ಷರ, ಉಪಮುಖ್ಯ ಅಧೀಕ್ಷರ, ಕಸ್ಟೋಡಿಯನ್, ಮೊಬೈಲ್ ಸ್ವಾಧಿನಾಧಿಕಾರಗಳು, ಸ್ಥಾನಿಕ ಜಾಗೃತದಳ ಹಾಗೂ ಮಾರ್ಗಾಧಿಕಾರಿಗಳಿಗೆ ಸೋಮವಾರ ಏರ್ಪಡಿಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕೊಠಡಿ ಮೇಲ್ವಿಚಾರಣೆ ಕುರಿತು ಮೇಲ್ವಿಚಾರಕರಿಗೆ ಸೂಕ್ತ ತರಬೇತಿ ನೀಡುವದು. ಅಭ್ಯರ್ಥಿಯ ಪ್ರವೇಶ ಪತ್ರದಲ್ಲಿ ನಮೂದಿಸಿರುವ ವರ್ಷನ್ ಪ್ರಶ್ನೆ ಪತ್ರಿಕೆಯನ್ನು ಅಭ್ಯರ್ಥಿಗಳಿಗೆ ನೀಡುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುವಾಗ ಏಕಾಗ್ರತೆಯಿಂದ ಹಾಗೂ ಸಮಾಧಾನ ಚಿತ್ತದಿಂದಿರುವುದು ಮುಖ್ಯವಾಗಿರುತ್ತದೆ. ಯಾವುದೇ ಸದ್ದು ಗದ್ದಲಗಳಿಗೆ ಅವಕಾಶವನ್ನು ಕೊಡದಂತೆ ನೋಡಿಕೊಳ್ಳುವುದು ಅನ್ಯ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರದ ಸುತ್ತ ಪ್ರವೇಶಿಸದಂತೆ ನೋಡಿಕೊಳ್ಳಬೇಕು.
ಪರೀಕ್ಷಾ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮೆರಾಗಳಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದಲ್ಲಿ ತುರ್ತಾಗಿ ಈಗಾಗಲೇ ಗುರುತಿಸಿರುವ ತಾಂತ್ರಿಕ ಸಹಾಯಕರ ನೆರವಿನಿಂದ ಸರಿಪಡಿಸಿ ಯಾವುದೇ ಗೊಂದಲವಾಗದಂತೆ ನೋಡಿಕೊಳ್ಳುವುದು ಕಡ್ಡಾಯ. ಮಾರ್ಗಸೂಚಿಯಲ್ಲಿನ ಎಲ್ಲಾ ಅಂಶಗಳನ್ನು ಕೊಠಡಿ ಮೇಲ್ವಿಚಾರಕರಿಗೆ ತಿಳಿಸಿ ಪರೀಕ್ಷೆ ಯಶಸ್ವಿಗೊಳ್ಳುವಂತೆ ಕ್ರಮವಹಿಸುವುದು. ಪರೀಕ್ಷೆಯ ಕೇಂದ್ರಗಳಲ್ಲಿ ಸೂಕ್ತವಾದ ಅಗತ್ಯ ಪೀಠೋಪಕರಣ ಆಸನದ ವ್ಯವಸ್ಥೆ, ಕುಡಿಯಲು ಶುದ್ಧವಾದ ನೀರು, ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳು ಲಭ್ಯವಿರುವಂತೆ ನೋಡಿಕೊಂಡು ಪರೀಕ್ಷೆ ನಡೆಸಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆಗಳ ಸ್ವೀಕರಣೆ ಹಾಗೂ ಉತ್ತರ ಪತ್ರಿಕೆಗಳ ಬಂಡಲಗಳನ್ನು ಮಾಡುವದು ಎಂದರು.
ಗ್ರಾಮೀಣವಲಯ ಬಿಇಓ ಪ್ರಮೋದಿನಿ ಬಳೋಲಮಟ್ಟಿ ಮಾತನಾಡಿ ಮಾರ್ಗಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆ ತಲುಪಿಸುವ ವ್ಯವಸ್ಥೆ ಆಗಬೇಕು. ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಸೇರಿದಂತೆ ಇತರೆ ಇಲೇಕ್ಟ್ರಾನಿಕ್ಸ್ ವಸ್ತುಗಳು ತರುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧ ಪ್ರದೇಶವೆಂದು ಘೋಷಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಬಲೇಶ್ವರ ತಹಶಿಲ್ದಾರ ಸಂತೋಷ ಮ್ಯಾಗೇರಿ, ತಿಕೋಟಾ ತಹಶಿಲ್ದಾರ ಎಸ್.ಎನ್.ಚವಲರ, ಶಿರಸ್ತೆದಾರ ರಾಜು ಸುಣಗಾರ, ವಿಜಯಪುರ ಇಓ ಬಾಬು ರಾಠೋಡ, ತಿಕೋಟಾ ಇಓ ಬಸವಂತರಾಯಗೌಡ ಬಿರಾದಾರ, ಬಬಲೇಶ್ವರ ಇಓ ಜುಬೇರ ಅಹ್ಮದ ಪಠಾಣ, ಬಿ.ಜಿ.ಇಂಡಿ, ಎನ್.ಆರ್.ಬಾಗವಾನ್, ಎಸ್.ಡಿ.ಮೊಸಲಗಿ, ಎಎಸ್ಐ ನಾಗಠಾಣ, ಎಸ್.ಬಿ.ಪಾಟೀಲ, ಪ್ರಭು ಬಿರಾದಾರ, ವಸಂತ ರಾಠೋಡ, ರವೀಂದ್ರ ಚಿಕ್ಕಮಠ ಇದ್ದರು.

