ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಗುರುಮರುಳಾರಾಧ್ಯರ ಹಿರೇಮಠದಲ್ಲಿ ಪ್ರತಿಷ್ಠಾಪಿಸಲು ಉದ್ಧೇಶಿಸಿರುವ ಲಿಂ.ಬಸವಲಿಂಗ ಮರುಳಸಿದ್ದ ಶಿವಾಚಾರ್ಯರ ಅಮೃತ ಶಿಲಾಮೂರ್ತಿಯನ್ನು ಶ್ರೀ ಯಲ್ಲಾಲಿಂಗೇಶ್ವರ ಮಹಾಮಠದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಂದು ಗಂಗಸ್ಥಳದೊಂದಿಗೆ ಹಿರೇಮಠಕ್ಕೆ ತರಲಾಯಿತು.
ಕಲಕೇರಿಯ ಪಂಚರಂಗಿ ಸಂಸ್ಥಾನ ಗದ್ದುಗೆಮಠದ ಮಡಿವಾಳೇಶ್ವರ ಶ್ರೀಗಳು, ನಾವದಗಿ ಪರ್ವತೇಶ್ವರ ಸಂಸ್ಥಾನ ಬೃಹನ್ಮಠದ ರಾಜಗುರು ರಾಜೇಂದ್ರ ಒಡೆಯರ್ ಶ್ರೀಗಳು, ದೇವರಹಿಪ್ಪರಗಿ ಆವುಗೇಶ್ವರ ತಪೋಧಾಮದ ಶಿವಯೋಗಿ ಸ್ವಾಮಿಗಳು ಮತ್ತು ಕಲಕೇರಿ ಹಿರೇಮಠದ ಸಿದ್ಧರಾಮ ಶ್ರೀಗಳು ಬಸವಲಿಂಗ ಮರುಳಸಿದ್ಧ ಶಿವಾಚಾರ್ಯರ ಅಮೃತ ಶಿಲಾಮೂರ್ತಿಗೆ ಪೂಜೆ ಸಲ್ಲಿಸಿ ಧ್ವಜಸಂಕೇತ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಸುಮಾರು ೧೦೦೧ ಸುಮಂಗಲೆಯರ ಪೂರ್ಣಕುಂಭ, ಕಳಸಾರುತಿಯೊಂದಿಗೆ, ಸಕಲ ವಾದ್ಯಮೇಳ, ಡೊಳ್ಳುಕುಣಿತದೊಂದಿಗೆ ನಡೆದ ಮೆರವಣಿಗೆಯುದ್ಧಕ್ಕೂ ಪಂಚಾಚಾರ್ಯರ, ಬಸವಲಿಂಗ ಮರುಳಸಿದ್ಧರ ಮತ್ತು ಮರುಳಾರಾಧ್ಯರ ಜೈಕಾರ, ಜೈಘೋಷಗಳು ಮೊಳಗಿದವು, ಸುಡುಬಿಸಿಲಿನಲ್ಲಿ ಬರಿಗಾಲಲ್ಲಿ ನಡೆಯುತ್ತಿರುವ ಕುಂಭಹೊತ್ತ ಮಹಿಳೆಯರು ಮತ್ತು ಭಕ್ತ ಸಮೂಹಕ್ಕಾಗಿ ದಾರಿಯುದ್ಧಕ್ಕೂ ಟ್ಯಾಂಕರ್ನಿಂದ ನೀರನ್ನು ಸಿಂಪಡಿಸಲಾಯಿತು. ಮತ್ತು ಭಕ್ತರಿಗೆ ತಂಪಾದ ನೀರು, ಪಾನಕ ಮತ್ತು ಮಜ್ಜಿಗೆಯ ವ್ಯವಸ್ಥೆ ಮಾಡಲಾಯಿತು.
ನಂತರ ಶ್ರೀಮಠದಲ್ಲಿ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಯಿತು. ನಂತರ ಶ್ರೀಮಠದ ಪರವಾಗಿ ಮಠದ ಸೇವಾಧಾರಿಗಳಿಗೆ ಶ್ರೀರಕ್ಷೆ ನೀಡಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಮಠದ ಏಳ್ಗೆಯಲ್ಲಿ ತ್ರಿಮೂರ್ತಿಗಳ ಪಾತ್ರವಿದ್ದು ಅವುಗಳೆಂದರೆ ಯುವಶಕ್ತಿ ಮತ್ತು ಹಿರಿಯರ ಮಾರ್ಗದರ್ಶನ ಹಾಗೂ ಮಹಿಳೆಯ ಅಂತ:ಶಕ್ತಿ ಈ ಮೂರು ಶಕ್ತಿಗಳು ನಿಸ್ವಾರ್ಥ ಭಾವದೊಂದಿಗೆ ತನು ಮನ ಧನದಿಂದ ಸೇವೆ ಸಲ್ಲಿಸಿ ಮಠದ ಏಳ್ಗೆಯಲ್ಲಿ ತಮ್ಮ ಸಾರ್ಥಕ ಭಾವವನ್ನು ವ್ಯಕ್ತಪಡಿಸುತ್ತಿದ್ದು, ಇದು ಸಮಾಜಮುಖಿ, ಸಂಸ್ಕಾರಯುತ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದ ಅವರು ಭಕ್ತರ ಸಮರ್ಪಣಾ ಭಾವವನ್ನು ಕಂಡು ಸಂತುಷ್ಠರಾಗಿ ಧನ್ಯತಾಭಾವವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ, ಬಿಜೆಪಿ ಮುಖಂಡರಾದ ಪ್ರಭುಗೌಡ ಬಿರಾದಾರ, ಸಿದ್ದು ಬುಳ್ಳಾ, ಹಿರಿಯರಾದ ಶಾಂತಪ್ಪ ಪಟ್ಟಣಶೆಟ್ಟಿ, ಷಣ್ಮುಕಪ್ಪ ಝಳಕಿ ವಿದ್ಯಾನಂದ ಹಿರೇಮಠ, ಶರಣಯ್ಯ ಮಠಪತಿ, ಶಾಂತಯ್ಯ ಹಿರೇಮಠ, ದುಂಡಯ್ಯ ಚಿಕ್ಕಮಠ, ರಮೇಶ ಅಡಕಿ, ಕುಮಾರಸ್ವಾಮಿ ಜಾಲಹಳ್ಳಿಮಠ, ಬಸವರಾಜ ಜಂಬಗಿ, ಶಿವಾನಂದ ಕಾದಳ್ಳಿ, ಗುರುರಾಜ ಅಡಕಿ, ಶಾಂತಯ್ಯ ಗಣಾಚಾರಿ, ಶಾಂತಗೌಡ ಪಾಟೀಲ, ದೇವಿಂದ್ರ ಕಡಕೋಳ, ಮೋತಿಲಾಲ ಕುಲಕರ್ಣಿ, ಶಿವಾನಂದ ಗಣೇಶಮಠ ಸೇರಿದಂತೆ ಕಲಕೇರಿ ಹಾಗೂ ಸುತ್ತಮುತ್ತಲಿನ ಗಣ್ಯರು, ಮಾತೆಯರು ಪಾಲ್ಗೊಂಡಿದ್ದರು.

