ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಜಾಗತೀಕರಣದ ಭರಾಟೆಯಲ್ಲಿ ಭಾರತವು ಪಾರಂಪರಿಕವಾಗಿ ಆಚರಣೆ ಮಾಡುತ್ತಾ ಬಂದಿರುವ ಹಬ್ಬಗಳು ನಶಿಸಿ ಹೋಗುತ್ತಿವೆ. ಆದರೆ ಹೋಳಿ ಹಬ್ಬ ಮಾತ್ರ ತನ್ನ ಗತ್ತು ಗೈರತ್ತು ಮುಂದುವರೆಸಿಕೊಂಡು ಹೊರಟಿದೆ. ಏಕೆಂದರೆ ಬಣ್ಣದ ಹಬ್ಬವನ್ನು ಹೆಚ್ಚಾಗಿ ಯುವ ಜನಾಂಗವೇ ಆಚರಣೆ ಮಾಡುವುದರಿಂದ ಇನ್ನು ಜೀವಂತವಾಗಿ ಉಳಿದಿದೆ. ಮೇಲಾಗಿ ಈ ಹಬ್ಬವನ್ನು ಜಾತಿ ಮತ ಪಂಥ ಮತ್ತು ಧರ್ಮ ಮೀರಿ ಎಲ್ಲರೂ ಆಚರಿಸುತ್ತಾರೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.
ಈ ಮೊದಲೆಲ್ಲ ಬಣ್ಣದ ಹಬ್ಬದ ದಿನದಂದು ಸಿಂದಗಿ ಪಟ್ಟಣದ ವಿವಿಧ ಬಡವಾಣೆಗಳ ಯುವಕರು ಬಣ್ಣದಾಟದಲ್ಲಿ ಮಿಂದೇಳುತ್ತಿದ್ದರು, ಜೊತೆಗೆ ಗೆಳೆಯರೆಲ್ಲರೂ ಒಂದುಗೂಡಿ ಗಂಡ ಹೆಂಡತಿಯ ಸೋಗನ್ನು ಹಾಕಿ ಕೃತಕ ಶವ ಸಂಸ್ಕಾರದ ರೂಪಕವನ್ನು ಸೃಷ್ಟಿಸಿ, ಪಟ್ಟಣದ ತುಂಬೆಲ್ಲಾ ಶವದ ಮೆರವಣಿಗೆಯನ್ನು ಮಾಡುತ್ತಾ ಜನರನ್ನು ನಗೆಗಡಲಲ್ಲಿ ತೆಲಿಸುತ್ತಿದ್ದರು. ಹಿರಿಯರಾದವರು ಬಡಾವಣೆಗಳ ಅಥವಾ ಓಣಿಗಳ ಪ್ರಮುಖ ಜಾಗದಲ್ಲಿ ಕುಳಿತುಕೊಂಡು ಹೋಳಿ ಹಬ್ಬದ ವಿಶೇಷ ಹಾಡುಗಳನ್ನು ಹಾಡುತ್ತ ಜನರನ್ನು ರಂಜಿಸುತ್ತಿದ್ದರು. ಆದರೆ ಇಂತಹ ಆಚರಣೆಗಳು ಮೆರಯಾಗಿದ್ದು, ಈಗ ಕೇವಲ ರಂಗಿನಾಟಕ್ಕೆ ಮಾತ್ರ ಸೀಮಿತವಾಗಿದೆ ಎಂದರು.
ಪಟ್ಟಣದಲ್ಲಿ ಈ ಬಾರಿಯ ಓಕಳಿ ಆಡುವಾಗ ಮನುಷ್ಯನ ಚರ್ಮಕ್ಕೆ ಮಾರಕವಾಗುವ ಸುನೇರ್ ಮತ್ತು ಬಳಚೂರ ಬಣ್ಣಗಳನ್ನು ಯುವಕರು ಬಳಸದೆ ಇರುವುದು ಸಂತಸದ ವಿಷಯ. ಆದರೆ ಕೆಲ ಯುವಕರು ಅಲ್ಲಲ್ಲಿ ಮೊಟ್ಟೆಗಳು ಒಡೆಯುತ್ತಿರುವುದು ಕಂಡುಬಂತು. ಚರ್ಮದ ಹಲಿಗೆಗಳು ಸಂಪೂರ್ಣ ಮಾಯವಾಗಿ ಪೈಬರ್ ಹಲಿಗೆಗಳೇ ಹೆಚ್ಚಿನ ಸದ್ದು ಜೋರಾಗಿತ್ತು.
ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ರವಿಗೌಡ ಬಿರಾದಾರ, ಬಸವರಾಜ ಬಿರಾದಾರ, ಬಸು ಉಪ್ಪಾರ, ಚನ್ನು ಮಠ, ಶ್ರೀಧರ ಬಿರಾದಾರ ಸೇರಿದಂತೆ ಅನೇಕರು ಬಣ್ಣದ ಹಬ್ಬದಲ್ಲಿ ಪಾಲ್ಗೊಂಡಿದ್ದರು.

