ನಕಲಿ ಐಡಿ ಕಾರ್ಡ್ ಹಾಗೂ ಹೊರರಾಜ್ಯದಲ್ಲಿ ತರಬೇತಿ ನೀಡುವ ಜಾಲ ಬೇಧಿಸುವಲ್ಲಿ ವಿಜಯಪುರ ಜಿಲ್ಲೆಯ ಪೊಲೀಸರು ಯಶಸ್ವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚಿಸಿ ಅಷ್ಟೇ ಅಲ್ಲದೇ ನಕಲಿ ಐಡಿ ಕಾರ್ಡ್ ಹಾಗೂ ಹೊರರಾಜ್ಯದಲ್ಲಿ ತರಬೇತಿ ನೀಡುವ ಜಾಲವನ್ನು ಬೇಧಿಸುವಲ್ಲಿ ವಿಜಯಪುರ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ಈ ಪ್ರಕರಣದಲ್ಲಿಯ ಪ್ರಮುಖ ಆರೋಪಿ ಸಿಕಂದರ ಮಹಮ್ಮದ ಬಸರಗಿಯನ್ನು ಬಂಧಿಸಲಾಗಿದ್ದು, ೧೩ ಜನರಿಗೆ ವಂಚನೆ ಮಾಡಿದ ಹಣದಲ್ಲಿ ಕಮಿಷನ್ ರೂಪದಲ್ಲಿ ಪಡೆದುಕೊಂಡಿದ್ದ ೪೫ ಲಕ್ಷ ರೂ.ಗಳನ್ನು ಜಪ್ತು ಮಾಡಿಕೊಳ್ಳಾಗಿದ್ದು, ಪ್ರಕರಣದಲ್ಲಿ ಭಾಗಿಯಾದ ನವದೆಹಲಿ ಹಾಗೂ ಜಾರ್ಖಂಡ್ ಮೂಲದ ೦೩ ಆರೋಪಿತರನ್ನು ಪತ್ತೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಹೊರರಾಜ್ಯದ ಆರೋಪಿಗಳೊಂದಿಗೆ ಸೇರಿ ೧೩ ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ ಎಂದರು.
ಬಂಧಿತನಾಗಿರುವ ಆರೋಪಿ ರೇಲ್ವೆ ಇಲಾಖೆಯಲ್ಲಿ ಸಿ ಮತ್ತು ಡಿ ಗ್ರುಪ್ ನೌಕರಿ ಕೊಡಿಸುವುದಾಗಿ ಹೇಳಿ, ಒಟ್ಟು ೧೩ ಜನರಿಂದ ೧.೬೧ ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದ, ನಕಲಿ ತರಬೇತಿ ಆದೇಶ ಪತ್ರವನ್ನು ಇ-ಮೇಲ್ ಮತ್ತು ಪೋಸ್ಟ್ ಮೂಲಕ ಕಳುಹಿಸಿದ್ದ, ನಂತರ ಝಾರ್ಖಂಡ್ ರಾಜ್ಯದ ರಾಂಚಿ ಸಮೀಪ ಹಟಿ ಪಟ್ಟಣಕ್ಕೆ ಕರೆಯಿಸಿಕೊಂಡು ಅಲ್ಲಿ ನಕಲಿ ತರಬೇತಿ ಕೊಡಿಸಿದ್ದ. ಅಷ್ಟೇ ಅಲ್ಲದೇ ಮುಂದೆ ನಕಲಿ ನೇಮಕಾತಿ ಆದೇಶ ಪತ್ರ ಕಳುಹಿಸಿ ರೈಲ್ವೇ ಇಲಾಖೆಯ ಟಿಕೇಟ್ ಕಲೆಕ್ಟರ್ ನೌಕರಿ ಸೇರಿಸಿಕೊಂಡಿದ್ದಾಗಿ ಹೇಳಿ, ಆದೇಶ ಪ್ರತಿ, ಪೋಟೊ, ಮಾರ್ಕ್ಸ್ ಕಾರ್ಡ್ ಹಾಗೂ ಇತರೆ ದಾಖಲಾತಿ ಪಡೆದು, ರೇಲ್ವೆ ಇಲಾಖೆಯ ನಕಲಿ ಐ.ಡಿ ಕಾರ್ಡ್ ಕೊಟ್ಟು ಅಲ್ಲೇ ೩-೪ ತಿಂಗಳು ರಿಜರ್ವ್ ಇರಬೇಕು ಎಂದು ವ್ಯವಸ್ಥಿತ ರೀತಿಯಲ್ಲಿ ಜಾಲ ಬೀಸಿದ್ದ, ಈ ತೆರನಾದ ಪ್ರಕರಣದಲ್ಲಿ ರೇಲ್ವೇ ಇಲಾಖೆ ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ ಹೀಗಾಗಿ ನಿಮಗೆ ನೌಕರಿ ಸಿಗುವುದಿಲ್ಲ ನೀವು ನಿಮ್ಮ ಊರುಗಳಿಗೆ ಹೋಗಿ ಎಂದು ಬೆದರಿಸಿದ್ದಾರೆ, ಹಣ ಮರಳಿ ಕೇಳಿದರೆ ಜೀವ ತೆಗೆಯುವ ಧಮಕಿ ಸಹ ಹಾಕಿದ್ದರು ಎನ್ನಲಾಗಿದೆ ಎಂದು ಎಸ್.ಪಿ. ನಿಂಬರಗಿ ವಿವರಿಸಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್ಪಿಗಳಾದ ತುಳಜಪ್ಪ ಸುಲ್ಫಿ, ಸುನೀಲ ಕಾಂಬಳೆ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

