ವಿಧಾನಪರಿಷತ್ ನಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದ ವಿಪಕ್ಷಗಳು
ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿ ವಿಧಾನಪರಿಷತ್ ನಲ್ಲಿ ರಾಜ್ಯ ಸರ್ಕಾರವನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡವು.
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಳಿ, ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳದಿಂದಾಗಿ ಆತ್ಮಹತ್ಯೆಗಳು ಮತ್ತು ಹೆಚ್ಚುತ್ತಿರುವ ಕೊಲೆ ಮತ್ತು ಅತ್ಯಾಚಾರ ಘಟನೆಗಳನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ಸದಸ್ಯರು, ಜನರನ್ನು ರಕ್ಷಿಸುವ ಕರ್ತವ್ಯದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಡಿಜೆ ಹಳ್ಳಿ ಹಿಂಸಾಚಾರ ಮತ್ತು ಉದಯಗಿರಿ ಘಟನೆಯ ನಡುವಿನ ಹೋಲಿಕೆಗಳನ್ನು ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು, ಎರಡೂ ಘಟನೆಗಳು ಸಾಮಾಜಿಕ ಮಾಧ್ಯಮ ಪೋಸ್ಟ್ಗಳಿಂದಲೇ ಸಂಭವಿಸಿದೆ. ತಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜನರು ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿದ್ದಾರೆ. ಡಿಜೆ ಹಳ್ಳಿ ಪ್ರಕರಣದಲ್ಲಿ ಅನೇಕ ಆರೋಪಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸರ್ಕಾರ ಹಿಂತೆಗೆದುಕೊಂಡಿದ್ದು, ಅವರಿಗೆ ಪ್ರೇರಣೆ ನೀಡಿದೆ. ಹೀಗಾಗಿಯೇ ಮೈಸೂರಿನಲ್ಲೂ ಇದೇ ರೀತಿ ದಾಳಿ ನಡೆಸಿದ್ದಾರೆಂದು ಕಿಡಿಕಾರಿದರು.
ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ಅವರು ಮಾತನಾಡಿ, ನಾವು ಅಪರಾಧಿಗಳನ್ನು ಮತಬ್ಯಾಂಕ್ ಆಗಿ ಪರಿಗಣಿಸದೆ ಅಪರಾಧಿಗಳಂತೆ ಪರಿಗಣಿಸಬೇಕು ಎಂದು ಹೇಳಿದರು.
ಭದ್ರಾವತಿ ಶಾಸಕರ ಮಗ ಮಹಿಳಾ ಅಧಿಕಾರಿಯೊಬ್ಬರನ್ನು ನಿಂದಿಸಿ ಬೆದರಿಸಿದ ಘಟನೆಯನ್ನು ಉಲ್ಲೇಖಿಸಿದ ಅವರು, ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ ಮಾದಕ ವಸ್ತುಗಳು ಸಣ್ಣ ಅಂಗಡಿಗಳಲ್ಲಿಯೂ ಸುಲಭವಾಗಿ ಲಭ್ಯವಾಗುವಂತಾಗುತ್ತಿದ್ದು, ಮಾದಕ ವಸ್ತುಗಳ ಹಾವಳಿಯನ್ನು ಕೊನೆಗೊಳಿಸುವಂತೆ ಗೃಹ ಸಚಿವರನ್ನು ಒತ್ತಾಯಿಸಿದರು.
ಬಳಿಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿಸಲ್ಪಟ್ಟ ನಂತರ ಬೆಳಗಾವಿ ಪೊಲೀಸರು ಸಿ.ಟಿ. ರವಿ ಅವರನ್ನು ನಡೆಸಿಕೊಂಡ ರೀತಿಯನ್ನು ಅನೇಕ ಬಿಜೆಪಿ ಸದಸ್ಯರು ಟೀಕಿಸಿದರು.
ಜೆಡಿಎಸ್ ಎಂಎಲ್ಸಿ ಟಿ.ಎ. ಶರವಣ ಅವರು ಮಾತನಾಡಿ, ಪೊಲೀಸ್ ಠಾಣೆಗಳು ಲೂಟಿ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂದು ಆರೋಪಿಸಿದರು.
ಬಳಿಕ ಆಡಳಿತ ಪಕ್ಷದ ಸದಸ್ಯರು ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದ ಘಟನೆಗಳನ್ನು ಪಟ್ಟಿ ಮಾಡುವ ಮೂಲಕ ತಿರುಗೇಟು ನೀಡಿದರು.

“ಜನರು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದರೆ, ಅವರಿಗೆ ಪೊಲೀಸರ ಕಂಡರೆ ಭಯವಿಲ್ಲದಂತಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.
ಇತರ ಸಚಿವರು ಪೊಲೀಸರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.”
– ಎನ್. ರವಿಕುಮಾರ್
ವಿರೋಧ ಪಕ್ಷದ ಮುಖ್ಯ ಸಚೇತಕರು

“ಕರ್ನಾಟಕವು ಅಪರಾಧಿಗಳ ಸ್ವರ್ಗವಾಗಿ ಬದಲಾಗುತ್ತಿದೆ. ನೀವು ಕಲಾವಿದರ ನಟ್ ಮತ್ತು ಬೋಲ್ಟ್ಗಳನ್ನು ಟೈಟ್ ಮಾಡುವ ಬದಲು ಅಪರಾಧಿಗಳ ನಟ್-ಬೋಲ್ಟ್ ಟೈಚ್ ಮಾಡಿ.”
– ಸಿ.ಟಿ.ರವಿ
ಬಿಜೆಪಿ ಎಂಎಲ್ಸಿ