ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ದೈಹಿಕ ಸದೃಡತೆಯೊಂದಿಗೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಿಬ್ಬಂದಿ ಜೀವನೋತ್ಸಾಹ ಕಂಡುಕೊಳ್ಳಬೇಕು ಎಂದು ಇಂಡಿ ವಿಭಾಗಾಧಿಕಾರಿ ವಿನಯಕುಮಾರ ಪಾಟೀಲ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಗುರುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ತಾಲ್ಲೂಕು ಅಭಿವೃದ್ಧಿ ಸಮಿತಿ ಹಾಗೂ ತಾಲ್ಲೂಕು ನಿವೃತ್ತ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕಂದಾಯ ದಿನಾಚರಣೆ ೨೦೨೫ರ ಪ್ರಯುಕ್ತ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಸೇವೆಯಲ್ಲಿನ ಒತ್ತಡಗಳ ನಡುವೆಯೂ ನಾವು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮುಖ್ಯವಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಂಡಾಗ ನಮ್ಮಲ್ಲಿ ಕಾಣುವ ಬದಲಾವಣೆ, ಉತ್ಸಾಹಗಳು ಹೊಸ ಚೈತನ್ಯಕ್ಕೆ ಕಾರಣವಾಗಬಲ್ಲದು ಎಂದರು.
ತಹಶೀಲ್ದಾರ ಪ್ರಕಾಶ ಸಿಂದಗಿ, ತಾಲ್ಲೂಕು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ.ಆರ್.ಆರ್.ನಾಯಿಕ್, ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಪಿ. ಬಿರಾದಾರ, ಪಟ್ಟಣ ಪಂಚಾಯಿತಿ ನಾಮ ನಿರ್ದೇಶನ ಸದಸ್ಯ ರಾಜು ಮೆಟಗಾರ ಮಾತನಾಡಿದರು.
ಜಿಲ್ಲಾ ಮಟ್ಟದ ಕ್ರೀಡಾಕೂಟದ ೧೦೦, ೪೦೦ ಮೀ.ಗಳ ಓಟ, ರೀಲೆ, ಥ್ರೋಬಾಲ್ನಲ್ಲಿ ಪ್ರಥಮ ಸ್ಥಾನದ ಪಡೆದ ಮಹಾದೇವಿ ಅಳ್ಳೋಳ್ಳಿ, ಉದ್ದಜಿಗಿತ ಪ್ರಥಮ, ೪೦೦ಮೀ ಓಟದಲ್ಲಿ ದ್ವೀತಿಯ ೧೦೦ಮೀ.ರಲ್ಲಿ ತೃತೀಯ ಸ್ಥಾನ ಪಡೆದ ಅಬುಲ್ಕಲಾಂ ಮೋಮಿನ್, ಸಿದ್ಧು ನಾಯ್ಕೋಡಿ ಮಾತನಾಡಿದರು. ನಂತರ ಅಮಸಿದ್ಧ ದಳವಾಯಿ, ರಾಜು ಕಂಠಿ, ಕುಮಾರ ಅವರಾದಿ ಸಹಿತ ವಿಜೇತ ಎಲ್ಲ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಗ್ರೇಡ್-೨ ತಹಶೀಲ್ದಾರ ಎಸ್.ಎಚ್. ರಾಠೋಡ, ಉಪತಹಶೀಲ್ದಾರರಾದ ಸುರೇಶ ಮ್ಯಾಗೇರಿ, ಡಿ.ಎಸ್.ಭೋವಿ, ಗಿರಿಜಾ ಸಜ್ಜನ ಹಾಗೂ ಸಿಬ್ಬಂದಿ ಇದ್ದರು.

