ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಅನಾದಿ ಕಾಲದಿಂದಲೂ ಮನುಕುಲವನ್ನು ಉದ್ಧರಿಸಿ ಜಗತ್ತಿಗೆ ಶಾಂತಿ ಸಹಬಾಳ್ವೆ ಸಿದ್ಧಾಂತವನ್ನು ಬೋಧಿಸಿ ಆತ್ಮಜ್ಞಾನದ ಪ್ರಾಮುಖ್ಯತೆಯನ್ನು ಜೀವಾತ್ಮರಿಗೆ ತಿಳಿ ಹೇಳಿದವರು ರೇಣುಕ ಭಗವತ್ಪಾದರಾಗಿದ್ದಾರೆ ಎಂದು ಜಾಲಹಳ್ಳಿ ಬೃಹನ್ಮಠದ ಜಗದಾರಾಧ್ಯ ಜಯಶಾಂತಲಿಂಗ ಶಿವಾಚಾರ್ಯ ಶ್ರೀಗಳು ಹೇಳಿದರು.
ಗ್ರಾಮದ ಗುರುಮರುಳಾರಾಧ್ಯರ ಹಿರೇಮಠದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಪುರಾಣಿಕ ಗದಗ ಚುರ್ಚಿಹಾಳದ ವೇ.ಪಂ.ಪುಟ್ಟರಾಜ ಶಾಸ್ತ್ರಿ ರೇಣುಕಾಚಾರ್ಯರ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು. ಹಿರೇಮಠದ ಒಡೆಯರಾದ ಸಿದ್ದರಾಮ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಗವಾಯಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಣ, ಕೃಷಿ, ಸಂಘಟನೆ, ಸಮಾಜ ಸೇವೆ ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಶ್ರೀಮಠದ ಪರವಾಗಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ವಿಶೇಷ ಸನ್ಮಾನ ಸ್ವೀಕರಿಸಿದ ಎಸ್.ಬಿ.ಪಿಯು ಕಾಲೇಜಿನ ಪ್ರಾಚಾರ್ಯ ಸಿ.ಎಸ್.ಹಿರೇಮಠ, ಉಪನ್ಯಾಸಕ ಎಸ್.ಎಸ್.ಕಲಶೆಟ್ಟಿ, ಎಸ್.ಬಿ.ವಿಸಡಮ್ ಕರಿಯರ್ ಅಕಾಡೆಮಿ ಅಧ್ಯಕ್ಷ ಶರಣಯ್ಯ ಭಂಡಾರಿಮಠ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾವಿರಾರು ಸದ್ಭಕ್ತರು ಪಾಲ್ಗೊಂಡು ಭಕ್ತಿ ಸೇವೆ ಸಲ್ಲಿಸಿದರು, ಶ್ರೀಮಠದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

