ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಕುಸುಬೆ ಉತ್ಪನ್ನಕ್ಕೆ ಜಿಲ್ಲಾ ಕನಿಷ್ಠ ಬೆಂಬಲ ಬೆಲೆ ಜಿಲ್ಲಾ ಕಾರ್ಯಪಡೆ ಸಮಿತಿ ಪ್ರತಿ ಕ್ವಿಂಟಲ್ ರೂ.೫೯೪೦ ಬೆಂಬಲ ಬೆಲೆ ನಿಗದಿಪಡಿಸಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
೨೦೨೪-೨೫ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ೫೨೯ ಹೆಕ್ಟೇರ್ ಕ್ಷೇತ್ರದಲ್ಲಿ ಕುಸುಬೆ ಬಿತ್ತನೆಯಾಗಿದ್ದು, ಅಂದಾಜು ೬೬೦೦ ಕ್ವಿಂಟಲ್ ಇಳುವರಿ ಅಂದಾಜಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ಗೆ ೫೩೦೦ ರಿಂದ ೫೫೦೦ ರೂ. ವರೆಗಿನ ದರದಿಂದ ಮಾರಾಟವಾಗುತ್ತಿದ್ದು, ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಾಲ್ ಕುಸುಬೆ ಉತ್ಪನ್ನಕ್ಕೆ ೫೯೪೦ ರೂ. ಬೆಲೆ ನಿಗದಿಪಡಿಸಿ ಖರೀದಿಸಲು ನಿರ್ಧರಿಸಲಾಗಿದೆ.
ಬೆಂಬಲ ಬೆಲೆಯಡಿ ಕುಸುಬೆ ಉತ್ಪನ್ನ ಖರೀದಿಗೆ ಜಿಲ್ಲೆಯ ಕೆಓಎಫ್ ಸಂಸ್ಥೆಯ ಎಣ್ಣೆ ಬೀಜ ಬೆಳಗಾರರ ಮಹಾಮಂಡಳಿ ನಿಯಮಿತ ಇವರು ರೈತರ ನೊಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಜಿಲ್ಲೆಯಲ್ಲಿ ವಿಜಯಪುರ-ಬಬಲೇಶ್ವರ ತಾಲೂಕಿನ ಬಬಲೇಶ್ವರ,ಸವನಹಳ್ಳಿ ಹಾಗೂ ತಾಜಪುರ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ, ವಿಜಯಪುರ ತಾಲೂಕಿನ ವಿಜಯಪುರ ಟಿಎಪಿಸಿಎಂಎಸ್ ಮುದ್ದೇಬಿಹಾಳ ತಾಲೂಕಿನ ತಂಗಡಗಿ, ಇಂಡಿ-ಚಡಚಣ ತಾಲೂಕಿನ ಚಡಚಣ, ಹಲಸಂಗಿ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ, ಸಿಂದಗಿ ತಾಲೂಕಿನ ಸಿಂದಗಿ, ಟಿಎಪಿಸಿಎಂಎಸ್ ಹಾಗೂ ಬಸವನಬಾಗೇವಾಡಿ ತಾಲೂಕಿನಲ್ಲಿ ಟಿಎಪಿಸಿಎಂ ಬಸವನಬಾಗೇವಾಡಿಯಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.
ಪ್ರತಿ ರೈತರಿಂದ ಪ್ರತಿ ಎಕರೆಗೆ ಗರಿಷ್ಠ ೫ ಕ್ವಿಂಟಾಲ್ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಠ ೨೦ ಕ್ವಿಂಟಾಲ್ ಎಫ್.ಎ.ಕ್ಯೂ ಗುಣಮಟ್ಟದ ಕುಸುಬೆಯನ್ನು ಖರೀದಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

