ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಅಕ್ರಮ ಬಾಂಗ್ಲಾ, ಪಾಕಿಸ್ತಾನ್ ನುಸುಳುಕೋರರು ವಾಸವಾಗಿದ್ದಾರೆಂಬ ಆತಂಕದ, ಕಂಟ್ರಿ ಪಿಸ್ತೂಲ್ಗಳು, ಭೂ ಮಾಫಿಯಾ, ಅಕ್ಕಿ ಮಾಫಿಯಾ ಹಾವಳಿ ಬಗ್ಗೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಗಮನಸೆಳೆದು, ಆಂತರಿಕ ಭದ್ರತೆ, ಸುರಕ್ಷತೆ ದೃಷ್ಟಿಯಿಂದ ಮತ್ತು ಅಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ವಿಜಯಪುರ ಜಿಲ್ಲೆಯಲ್ಲಿ ಎನ್.ಐ.ಎ ಕೇಂದ್ರ ಸ್ಥಾಪಿಸುವಂತೆ ಒತ್ತಾಯಿಸಿದರು.
ಇತ್ತಿಚ್ಚೀನ ದಿನಗಳಲ್ಲಿ ರಾಜ್ಯದಲ್ಲಿ 25 ಪಾಕಿಸ್ತಾನಿ ವಲಸಿಗರನ್ನು ಪತ್ತೆ ಹಚ್ಚಿ, ಕಾರಾಗೃಹದಲ್ಲಿರಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರು 111, ಶಿವಮೊಗ್ಗ 12, ಹಾಸನ ೩, ಮಂಗಳೂರು 1, ಉಡುಪಿ ಜಿಲ್ಲೆಯಲ್ಲಿ 10 ಸೇರಿ ಒಟ್ಟು 137 ಅಕ್ರಮ ವಲಸಿಗರನ್ನು ಗುರುತಿಸಲಾಗಿದೆ. ಪೈಕಿ 90 ವಲಸಿಗರನ್ನು ಗಡಿಪಾರು ಮಾಡಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ 2016 ರಲ್ಲಿ 33 ಜನ ಬಾಂಗ್ಲಾ ವಲಸಿಗರು ವಾಸವಾಗಿದ್ದರು. ನ್ಯಾಯಾಲಯದ ಆದೇಶದಂತೆ 2018ರ ಎಪ್ರಿಲ್ 4 ರಂದು ಮತ್ತು 2019ರ ಎಪ್ರಿಲ್ 2 ರಂದು ಎಲ್ಲಾ 33 ಬಾಂಗ್ಲಾದೇಶಿಯರನ್ನು ಅವರ ದೇಶಕ್ಕೆ ವಾಪಸ್ಸು ಕಳಿಸಲಾಗಿದೆ. ಪ್ರಸ್ತುತ ಪಾಕಿಸ್ತಾನಿ, ಬಾಂಗ್ಲಾ ಪ್ರಜೆಗಳು ಜಿಲ್ಲೆಯಲ್ಲಿ ವಾಸವಾಗಿರುವುದಿಲ್ಲ.
ವಿಜಯಪುರ ಜಿಲ್ಲೆಯಲ್ಲಿ 2022 ರಿಂದ 2025 ರವರೆಗೆ ಒಟ್ಟು 27 ಭೂಮಾಫಿಯಾ ಪ್ರಕರಣಗಳು ದಾಖಲಾಗಿದ್ದು, ತನಿಖೆ ಕೈಗೋಳ್ಳಲು 12 ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತನಿಖಾ ತಂಡ ರಚಿಸಲಾಗಿದೆ. ಈ ತಂಡವು 8 ಪ್ರಕರಣಗಳ ದೋಷಾರೋಪಣಾ ಪತ್ರ ತಯಾರಿಸಿದ್ದು, 10 ಪ್ರಕರಣಗಳಲ್ಲಿ ಆರ್.ಎಫ್.ಎಸ್.ಎಲ್. ಹಾಗೂ ಎಫ್.ಪಿ.ಬಿ ರವರಿಂದ ವರದಿ ಬರುವುದು ಬಾಕಿಯಿದೆ. 9 ಪ್ರಕರಣಗಳಲ್ಲಿ ತನಿಖೆ ಮುಂದುವರೆದಿದೆ. 173 ಆರೋಪಿತರ ಮೇಲೆ ಕ್ರಮ ಕೈಗೊಳ್ಳಲಾಗಿರುತ್ತದೆ.
2022 ರಿಂದ 2025 ರವರೆಗೆ ಕಂಟ್ರಿ ಪಿಸ್ತೂಲ್ ಗಳಿಗೆ ಸಂಬಂಧಿಸಿದಂತೆ 18 ಪ್ರಕರಣಗಳು ದಾಖಲಾಗಿದ್ದು, 20 ಕಂಟ್ರಿ ಪಿಸ್ತೂಲ್ ಗಳು ಮತ್ತು 47 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 2022 ರಿಂದ 2025 ರವೆರಗೆ 58 ಪ್ರಕರಣಗಳು ದಾಖಲಾಗಿದ್ದು. 204 ಟನ್ ಪಡಿತರ ಅಕ್ಕಿ ಜಪ್ತಿ ಮಾಡಿಕೊಂಡು, ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ರಾಜ್ಯವ್ಯಾಪ್ತಿ ಒಳಗೊಂಡು ಬೆಂಗಳೂರು ನಗರದಲ್ಲಿ ಎನ್.ಐ.ಎ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ ಎಂದು ಗೃಹ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.

