ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತಾಗ ಅವರಲ್ಲಿಯ ವಿಶೇಷ ಕೌಶಲ್ಯಗಳು ಹೊರಬರಲು ಸಾಧ್ಯ ಎಂದು ಸಿಡಿಪಿಓ ಎಸ್.ಎನ್.ಹಿರೇಮಠ ಹೇಳಿದರು.
ತಾಲ್ಲೂಕಿನ ಜಾಲವಾದ ಗ್ರಾಮದಲ್ಲಿ ಸೋಮವಾರ ಜರುಗಿದ ಅಂಗನವಾಡಿ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳು ಶಿಕ್ಷಣವಂತರಾದಾಗ ಅವರಿಂದ ಸಾಧನೆ ಸುಲಭವಾಗುತ್ತದೆ. ಇಂದು ಅಂಗನವಾಡಿಯಲ್ಲಿ ಶಿಕ್ಷಕಿಯರು ನೀಡುವ ಶಿಕ್ಷಣ ಮುಂದಿನ ಶಿಕ್ಷಣಕ್ಕೆ ಅಡಿಪಾಯವಾಗಿದೆ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನದಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕಾರ ನೀಡಬೇಕೆಂದು ತಿಳಿಸಿದರು.
ಯೋಜನಾ ನಿರ್ದೇಶಕ ವಾಸುದೇವ ತೋಳಬಂದಿ ಮಾತನಾಡಿ, ಅಂಗನವಾಡಿಗಳಲ್ಲಿ ಮಕ್ಕಳಿಗೆ ವಿಶೇಷವಾದ ಕಲಿಕೆ ಆಗುತ್ತಿದೆ. ಇದು ಮುಂದಿನ ಸುಭದ್ರ, ಸದೃಢ ಸಮಾಜಕ್ಕೆ ಅಡಿಪಾಯವಾಗಿದೆ ಮಕ್ಕಳು ವಿವಿಧ ರೀತಿಯ ಮನರಂಜನೆಯ ಕಾರ್ಯಕ್ರಮಗಳನ್ನು ಮಾಡಿರುವುದು ಸಂತಸ ಎಂದರು.
ಉಜ್ವಲ ಸಂಸ್ಥೆಯ ನಿರ್ದೇಶಕಿ ಸುನಂದಾ ತೋಳಬಂದಿ ಮಾತನಾಡಿ, ಯೋಜನೆಯಡಿ ತರಬೇತಿ ಪಡೆದು ಅದನ್ನು ಸಕ್ರಿಯವಾಗಿ ಅಂಗನವಾಡಿಗಳಲ್ಲಿ ಅನುಷ್ಠಾನಗೊಳಿಸುತ್ತಿರುವುದು ಸಂತಸದ ಸುದ್ದಿ. ಇದೇ ರೀತಿಯಾಗಿ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಬದಲಾವಣೆಯ ಪಥದಲ್ಲಿ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ಅನುಷ್ಠಾನಗೊಳಿಸಬೇಕು ಎಂದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಯೋಜನೆಯ ಸಂಯೋಜಕ ಸಾಗರ ಘಾಟಗೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಕೆಂಗೂಟಗಿ, ಸದಸ್ಯರಾದ ರಾಮನಗೌಡ ಪಾಟೀಲ, ನೀಲು ಸಜ್ಜನ, ಮಹಾದೇವಿ ಜನಗೊಂಡ, ನಸ್ರೀನ್ ಹಳ್ಳಿ, ಮುಖ್ಯಗುರು ಎಸ್.ಬಿ.ಸಿಂದಗಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಪಾಲಕರು ಇದ್ದರು.

