ವಿಜಯಪುರದಲ್ಲಿ ಕೆಯುಡಬ್ಲುಜೆ ವತಿಯಿಂದ ಸಾಧಕರಿಗೆ ಅಭಿನಂದನಾ ಸಮಾರಂಭ | ಕಾನಿಪ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪತ್ರಕರ್ತರು ತಮ್ಮ ಕರ್ತವ್ಯ ಅರಿತು ಜವಾಬ್ಧಾರಿಯುತವಾಗಿ ಕೆಲಸ ಮಾಡಬೇಕು. ಕೆಲ ಪತ್ರಕರ್ತರಿಂದ ಇಡೀ ಪತ್ರಕರ್ತರ ಸಮೂಹಕ್ಕೆ ಕಪ್ಪು ಚುಕ್ಕೆ ತಗಲುತ್ತಿದೆ. ಇದನ್ನು ನಿವಾರಿಸಲು ಪತ್ರಕರ್ತರ ಸಂಘಟನೆಗಳ ಕೆಲಸ ಮಾಡಬೇಕು ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಹಿರಿಯ ಪತ್ರಕರ್ತ ರಫೀ ಭಂಡಾರಿ ಹೇಳಿದರು.
ಇಲ್ಲಿನ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೆಯುಡಬ್ಲುಜೆ ವತಿಯಿಂದ ಏರ್ಪಡಿಸಿದ್ದ ಸಾಧಕರಿಗೆ ಅಭಿನಂದನಾ ಸಮಾರಂಭ, ಕಾನಿಪ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯನಿತರ ಪತ್ರಕರ್ತರು ಕ್ರಿಯಾಶೀಲರಾಗಬೇಕು. ವೃತ್ತಿ ಮೌಲ್ಯ ಕಾಪಾಡಲು ಮುಂದಾಗಬೇಕು. ಪತ್ರಕರ್ತರಲ್ಲದವರೂ ಪತ್ರಕರ್ತರೆಂದು ಹೇಳಿಕೊಳ್ಳುತ್ತಿರುವುದು, ಇವರಿಗೆ ಕೆಲವರು ಪ್ರೋತ್ಸಾಹ ನೀಡುವುದು ನಿಲ್ಲಬೇಕು. ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಧಾರಣೆ ತರುವುದು ಸಾಧ್ಯ ಎಂದರು.
ಹಿರಿಯ ಪತ್ರಕರ್ತರಾದ ಸುಶೀಲೇಂದ್ರ ನಾಯಕ, ಐಎಫ್ಡಬ್ಲುಜೆ ರಾಷ್ಟ್ರೀಯ ಸಮಿತಿ ಸದಸ್ಯರಾದ ಮಹೇಶ ಶಟಗಾರ, ಪತ್ರಕರ್ತರಾದ ಶಶಿಕಾಂತ ಮೆಂಡೇಗಾರ, ಇರ್ಫಾನ್ ಶೇಖ್, ಅಧ್ಯಕ್ಷತೆ ವಹಿಸಿದ್ದ ಸಂಘದ ಹಂಗಾಮಿ ಅಧ್ಯಕ್ಷ ಪ್ರಕಾಶ ಬೆಣ್ಣೂರ ಇನ್ನಿತರರು ಮಾತನಾಡಿದರು.
ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸುಶಿಲೇಂದ್ರ ನಾಯಕ, ಮಹೇಶ ಶಟಗಾರ, ಕೆಯುಡಬ್ಲುಜೆ ಪ್ರಶಸ್ತಿ ಪುರಸ್ಕೃತರಾದ ಶಶಿಕಾಂತ ಮೆಂಡೇಗಾರ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ರಾಣಿ ಚನ್ನಮ್ಮ ವಿವಿಗೆ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ರಫೀ ಭಂಡಾರಿ, ಕಾರ್ಯನಿರತ ಸಂಪಾದಕರ ಸಂಘದ ನೂತನ ಜಿಲ್ಲಾ ಅಧ್ಯಕ್ಷ ಇರ್ಫಾನ್ ಶೇಖ್ ಅವರಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ಕುಲಕರ್ಣಿ, ಕಾರ್ಯದರ್ಶಿ ಅವಿನಾಶ ಬಿದರಿ, ರಾಜ್ಯ ಕಾರ್ಯಕಾರಿ ನಾಮನಿರ್ದೇಶಿತ ಸದಸ್ಯ ಕೆ.ಕೆ.ಕುಲಕರ್ಣಿ, ರಾಜ್ಯ ಸಮಿತಿ ವಿಶೇಷ ಆಹ್ವಾನಿತರಾದ ಕೌಶಲ್ಯ ಪನಾಳಕರ, ಖಜಾಂಚಿ ರಾಹುಲ್ ಆಪ್ಟೆ ಇನ್ನಿತರರು ವೇದಿಕೆಯಲ್ಲಿದ್ದರು.
ಬಾಬುರಾವ್ ಕುಲಕರ್ಣಿ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಇಂದುಶೇಖರ ಮಣೂರ ಸ್ವಾಗತಿಸಿದರು. ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ ಅವರು ಸಂಘದ ಮೂರು ವರ್ಷ ಅವಧಿಯ ಪ್ರಗತಿ ವರದಿ ಓದಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಉಳ್ಳಾಗಡ್ಡಿ ವಂದಿಸಿದರು.
ಸಮಾರಂಭದ ನಂತರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು. ವಿಜಯಪುರ ನಗರ ಸೇರಿ ಜಿಲ್ಲೆಯ ಎಲ್ಲ ತಾಲೂಕು ಘಟಕಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.