ಬೇಡಿಕೆ ಈಡೇರದಿದ್ದರೆ, ಅಮರಣ ಉಪವಾಸ ಸತ್ಯಾಗ್ರಹ ಆರಂಭಿಸುವ ಎಚ್ಚರಿಕೆ ನೀಡಿದ ಮಾಜಿ ಸಚಿವ ಬೆಳ್ಳುಬ್ಬಿ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು, ರೈತರು ಸೇರಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಮಂಗಳವಾರ ಆಲಮಟ್ಟಿಯಲ್ಲಿ ಪ್ರತಿಭಟನೆ ನಡೆಯಿತು.
ಇಲ್ಲಿಯ ಚಂದ್ರಮ್ಮಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯವರೆಗೆ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಯುಕೆಪಿಯ ಆಲಮಟ್ಟಿ ಭಾಗದ ರೈತರು ನೀರಾವರಿಯಿಲ್ಲದೇ ಅನುಭವಿಸುತ್ತಿರುವ ಸ್ಥಿತಿಯನ್ನು ಬಿಚ್ಚಿಟ್ಟರು. ಒಂದು ವೇಳೆ ಬೇಡಿಕೆ ಈಡೇರದಿದ್ದರೆ, ಅಮರಣ ಉಪವಾಸ ಸತ್ಯಾಗ್ರಹ ಆರಂಭಿಸುವ ಎಚ್ಚರಿಕೆಯನ್ನು ಅವರು ನೀಡಿದರು.
ಆಲಮಟ್ಟಿ ಜಲಾಶಯದಿಂದ ಈಗಾಗಲೆ ಸುಮಾರು 10 ಟಿ.ಎಮ್.ಸಿ. ನೀರನ್ನು ತೆಲಂಗಾಣ ರಾಜ್ಯಕ್ಕೆ ಬಿಟ್ಟಿರುವುದು ಈ ಭಾಗದ ಸಂತ್ರಸ್ತರಿಗೆ ಮಾಡಿದ ಅನ್ಯಾಯವಾಗಿರುತ್ತದೆ. ಇನ್ನೂ ಮುಂದೆ ಜಲಾಶಯದಿಂದ ನೀರನ್ನು ಬಿಡುವುದು ನಿಲ್ಲಸಿ, ಈ ಜಲಾಶಯದ ಸಂತ್ರಸ್ತರ ಜಮೀನುಗಳಿಗೆ ಜೂನ್ 15ರ ವರೆಗೆ ಮುಳವಾಡ ಏತ ನೀರಾವರಿ ಮೂಲಕ ನೀರನ್ನು ಬಿಡಬೇಕು ಎಂದರು.
ಮುಳವಾಡ ಏತ ನೀರಾವರಿಯಿಂದ ವಂಚಿತವಾಗಿರುವ ಕೂಡಗಿ ಎನ್.ಟಿ.ಪಿ.ಸಿ ಹತ್ತಿರ ಇರುವ ಅಂಗಡಗೇರಿ ಗ್ರಾಮ ಬೀರಲದಿನ್ನಿ ಗ್ರಾಮ ಪಂಚಾಯತಿ, ಗೊಳಸಂಗಿ ಗ್ರಾಮ ಪಂಚಾಯತಿ, ತೆಲಗಿ ಗ್ರಾಮ ಪಂಚಾಯತಿ, ವಂದಾಲ ಗ್ರಾಮ ಪಂಚಾಯತಿ, ಬೇನಾಳ ಆರ್.ಎಸ್ ಗ್ರಾಮ ಪಂಚಾಯತಿ, ಚಿಮ್ಮಲಗಿ ಈ ಭಾಗದಲ್ಲಿ ಇರುವ ನೀರಾವರಿಯಿಂದ ವಂಚಿತವಾಗಿರುವ ಜಮೀನುಗಳಿಗೆನೀರಾವರಿ ಒಳಪಡಿಸಬೇಕು ಅದಕ್ಕಾಗಿ ಕಾಲುವೆಗಳ ಜಾಲ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಕೊಲ್ಹಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕೊಲ್ದಾರ ಪಶ್ಚಿಮ ದಿಕ್ಕಿಗೆ ಇರುವ ನೀರಾವರಿ ವಂಚಿತ ಭೂಮಿಗಳಿಗೆ ನೀರಾವರಿ ಒಳಪಡಿಸುವುದು, ಆಲಮಟ್ಟಿ ಜಲಾಶಯವನ್ನು 519 ರಿಂದ 524ರ ವರೆಗೆ ನೀರನ್ನು ನಿಲ್ಲಿಸುವ ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷ ಕೋಟಿ ಅನುದಾನ ಬೇಕಾಗಿರುವುದನ್ನು ಮಂಜೂರು ಮಾಡುವುದು, ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯ ಹಾಗೂ ನಾರಾಯಣಪೂರ ಬಸವಸಾಗರ ಜಲಾಶಯಗಳ ನೀರಾವರಿ ಯೋಜನೆಗಳಿಗೆ ಈಗಾಗಲೆ ಹಂಚಿಕೆಯಾದ ನೀರನ್ನು ಪರಿಷ್ಕರಣೆ ಮಾಡಿ ಎರಡು ಜಲಾಶಯಗಳ ಅಚ್ಚುಕಟ್ಟು ನೀರು ಹಂಚಿಕೆ ಮಾಡಿ ಆಲಮಟ್ಟಿ ನಾರಾಯಣಪೂರ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಪಾಡಬೇಕು ಎಂದು ಬೆಳ್ಳುಬ್ಬಿ ಆಗ್ರಹಿಸಿದರು.
ಆಲಮಟ್ಟಿ ಜಲಾಶಯವು ಉತ್ತರ ಕನರ್ಾಟಕದ ಜೀವ ನದಿಯಾಗಿದೆ. ಈ ಯೋಜನೆಗೆ ಭೂಮಿ ಮನೆ-ಮಠಗಳನ್ನು ಕಳೆದುಕೊಂಡು ಸಂಪೂರ್ಣ ನಿರಾಶ್ರಿತರಾದ ವಿದ್ಯಾವಂತ ಯುವಕರಿಗೆ ಮುಳುಗಡೆಯ ಅಧಿಸೂಚನೆ ದಿನಾಂಕ ಪರಿಗಣಿಸದೆ ಮುಳಗಡೆ ಪ್ರಮಾಣ ಪತ್ರ ನೀಡಬೇಕು. ಅಲ್ಲದೇ ನೌಕರಿ ಹಾಗೂ ಶಿಕ್ಷಣದಲ್ಲಿ ಮುಳುಗಡೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.
ನೀರಾವರಿಗೆ ಹಣವೇ ಇಲ್ಲ: ಮುಖ್ಯಮಂತ್ರಿ ಸಿದ್ರಾಮಯ್ಯನವರು 2013-2014ರಲ್ಲಿ ಕಾಂಗ್ರಸ್ ನಡೆಗೆ ಕೃಷ್ಣೆಯ ಕಡೆಗೆ ಎಂದು ಬಳ್ಳಾರಿಯಿಂದ ಕೂಡಲ ಸಂಗಮದವರೆಗೆ ಪಾದಯಾತ್ರೆ ಮಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ವರ್ಷಕ್ಕೆ 50 ಸಾವಿರ ಕೋಟಿ ಕೊಡುವುದಾಗಿ ಭರವಸೆ ಕೊಟ್ಟಿದ್ದರು ಈ ವರ್ಷದ ಬಜಟ್ ನಲ್ಲಿ ರಾಜ್ಯದ ಎಲ್ಲಾ ನೀರಾವರಿ ಸೇರಿ, 22 ಸಾವಿರ ಕೋಟಿ ನಿಗಧಿಯಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ವಿಷ್ಯ ಪ್ರಸ್ತಾಪ ವಾಗಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ಕೊಲ್ಹಾರದ ಕೈಲಾಸನಾಥ ಸ್ವಾಮೀಜಿ, ಅಂಗಡಗೇರಿಯ ರುದ್ರಮುನಿ ಸ್ವಾಮೀಜಿ, ಕಸ್ತೂರಿ ಬೆಳ್ಳುಬ್ಬಿ, ರಾಜಶ್ರೀ ಯರನಾಳ, ಶಿವಾನಂದ ಅವಟಿ, ಆನಂದ ಬಿಷ್ಟಗೊಂಡ, ಗುರುಲಿಂಗಪ್ಪ ಅಂಗಡಿ, ಸಂತೋಷ ನಾಯಕ, ಬಸವರಾಜ ಬಾಗೇವಾಡಿ, ಬಾಲಚಂದ್ರ ನಾಗರಾಳ, ಬಿ.ಎಚ್. ಗಣಿ, ಸಂತೋಷ ಕಡಿ, ಪ್ರಶಾಂತ ಪವಾರ ಮತ್ತೀತರರು ಇದ್ದರು.
ಮುಖ್ಯ ಎಂಜಿನಿಯರ್ ಡಿ. ಬಸವರಾಜ, ಕಾರ್ಯನಿರ್ವಾಹಕ ಎಂಜಿನಿಯರ್ ಸುಧೀರ ಸಜ್ಜನ, ಅಧೀಕ್ಷಕ ಎಂಜಿನಿಯರ್ ವಿ.ಆರ್. ಹಿರೇಗೌಡರ ಮನವಿ ಸ್ವೀಕರಿಸಿದರು.