ಸಂಕಲನಾತ್ಮಕ ಪರೀಕ್ಷೆ: ಬಿಇಒ ಭೇಟಿ ಪರಿಶೀಲನೆ | ಬಿಇಓ ಅಶೋಕ ಬಸಣ್ಣವರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಇದು ಸ್ಪಧಾ೯ತ್ಮಕ ಯುಗ. ಮಕ್ಕಳಿಗೆ ವಿದ್ಯಾಭ್ಯಾಸವೇ ಪ್ರಾಮುಖ್ಯವಾಗಬೇಕು. ಓದಾಭ್ಯಾಸಕ್ಕೆ ಸತತ ಆದ್ಯತೆ ನೀಡಲೇ ಬೇಕು. ಶಿಕ್ಷಣದಿಂದ ಮಾತ್ರ ಜೀವನ ಚೈತ್ರ ಅರಳುತ್ತದೆ. ಭವಿಷ್ಯತ್ತಿನ ಜೀವನ ಚಿತ್ರಣ ಬದಲಾಗುತ್ತದೆ. ಆ ಕಾರಣ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಉತ್ತಮ ಶಿಕ್ಷಣ ಪಡೆಯಲು ಗಟ್ಟಿತನದ ಮನಸ್ಸು ತೋರಬೇಕು ಎಂದು ಜಮಖಂಡಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಹೇಳಿದರು.
ಸೋಮವಾರ ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆ ಪರಿಶೀಲಿಸಿದರು. ಮಧ್ಯಾಹ್ನದ ಅವಧಿಯಲ್ಲಿ ನಡೆದ ಪ್ರಸಕ್ತ 2024-25 ನೇ ಸಾಲಿನ 8 ಹಾಗೂ 9 ನೇ ತರಗತಿ ದ್ವೀತಿಯ ಸಂಕಲನಾತ್ಮಕ ಮೌಲ್ಯಾಂಕನ (ಎಸ್.ಎ.2) ಕನ್ನಡ ವಿಷಯದ ಪರೀಕ್ಷೆಯನ್ನು ಖುದ್ದಾಗಿ ಪರೀಕ್ಷಾ ಕೊಠಡಿಗಳಿಗೆ ತೆರಳಿ ಪರಿಶೀಲಿಸಿದರು. ಅಚ್ಚುಕಟ್ಟಾಗಿ ಪರೀಕ್ಷಾ ನಡೆಯುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಪರೀಕ್ಷೆಯನ್ನು ಉತ್ಸಾಹದಿಂದ ಬರೆಯುವ ಮನೋಭಾವ ಮಕ್ಕಳು ಹೊಂದಬೇಕು. ಆ ಆತ್ಮಸ್ಥೈರ್ಯ ಅಂಕುರಗೊಳ್ಳಲು ನಿರಂತರ ಅಭ್ಯಾಸದ ಹವ್ಯಾಸ ರೂಢಿಸಿಕೊಳ್ಳಬೇಕು.ಉತ್ತಮ ಸಂಸ್ಕಾರ, ಚಾರಿತ್ರ್ಯ ವಿದ್ಯಾರ್ಥಿಗಳ ಸಮೂಹಕ್ಕೆ ಅತ್ಯಗತ್ಯ. ಇಂಥ ಗುಣ ಸ್ವಭಾವವುಳ್ಳವರೇ ಸರ್ವೋಚ್ಚರು. ಅವರು ಸಮಾಜದಲ್ಲಿ ಉನ್ನತ ಮಟ್ಟದ ಸ್ಥಾನಮಾನ ಪಡೆಯಬಲ್ಲರು ಎಂದರು.
ಬೇಸಿಗೆ ರಜಾವಧಿಯಲ್ಲಿ ವಿದ್ಯಾರ್ಥಿಗಳು ಸುಖಾಸುಮ್ನೇ ಅತ್ತಇತ್ತ ಸುತ್ತಾಡಿ ಕಾಲ ಹರಣ ಮಾಡದೇ ನಿತ್ಯ ಅಭ್ಯಾಸದ ಕಡೆಗೆ ಗಮನ ಹರಿಸಬೇಕು.ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು. ಅದರಲ್ಲೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ತಮ್ಮ ಶೈಕ್ಷಣಿಕ ಏಳಿಗೆಗಾಗಿ ಸ್ವಯಂ ಪ್ರೇರಿತರಾಗಿ ಈಗಿಂದಲೇ ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಬಿಇಒ ಅವರ ಜೊತೆಯಲ್ಲಿ ಆಗಮಿಸಿದ ಜಮಖಂಡಿ ತಾಲೂಕು ಅಕ್ಷರ ದಾಸೇಹ ಅಧಿಕಾರಿ ಸಿ.ಎಸ್.ಕಲ್ಯಾಣಿ ಬಿಸಿಯೂಟ, ಆಡುಗೆ ಕೋಣೆ ಶುಚಿತ್ವ ತಪಾಸಣೆ ನಡೆಸಿದರು. ಇಲ್ಲಿನ ಪರೀಕ್ಷಾ,ಅಕ್ಷರ ದಾಸೋಹದ ವ್ಯವಸ್ಥೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಸಿ.ಆರ್.ಪಿ. ಆರ್.ಎಚ್.ಮುದ್ನೂರ, ಪ್ರಭಾರಿ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ, ಶಿಕ್ಷಕರಾದ ಗುಲಾಬಚಂದ ಜಾಧವ, ಈರಪ್ಪ ದೇಸಾಯಿ, ಲೋಹಿತ ಮಿಜಿ೯, ಶ್ರೀಶೈಲ ಹುಣಶಿಕಟ್ಟಿ, ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ, ಶಿಕ್ಷಕಿಯರಾದ ಸಹನಾ ಹತ್ತಳ್ಳಿ (ಕಲ್ಯಾಣಿ), ಪ್ರಮೀಳಾ ತೇಲಸಂಗ, ಶೃತಿ ಲಿಗಾಡೆ ಇತರರಿದ್ದರು.

